ಆದಿತ್ಯ ಪ್ರಸಾದ್ ಪಾಂಡೇಲು
ಸಂಜೆಯ ಮಬ್ಬು ಕೂಡ
ಬೇಕಿಲ್ಲವೀಗ ಕತ್ತಲಾಗಲು
ಬೆಳಗಿನ, ನಡುವಿನ ರಣಬಿಸಿಲಲೂ
ಎತ್ತ ನೋಡಿದರೂ
ಗಾಢಾಂಧಕಾರ!
ಬೆಳಗಾತ ಹೊರಟು, ಕತ್ತಲಿಗೆ
ವಾಪಾಸಾಗುತ್ತಿದ್ದ
ಚಪ್ಪಲಿಗಳು ಮೂಲೆ ಹಿಡಿದರೆ
ಕಟ್ಟಿಟ್ಟ ಬುತ್ತಿಗಳು ತುಕ್ಕುಕಟ್ಟಿವೆ
ಆಸ್ಪತ್ರೆಗೆ ಧಾವಿಸುವ
ಆಂಬುಲೆನ್ಸಿನ ಸದ್ದು ಕೇಳಿದ
ಮಗು ಜೋಗುಳದ ದನಿಯೆಂದು
ಮಲಗಿ ನಿದ್ರಿಸುತಿದೆ
ಕೇರಿ ಕೊನೆಯ ಅಳು ಕೇಳಿದರೂ
ರಿಮೋಟು ಗುಂಡಿ ಒತ್ತುತ್ತಾ
ನಮ್ಮೂರಿನ ಸುದ್ದಿ ಕೇಳಿ ಸಂತಾಪಿಸುವವ
ರೋಗಕ್ಕೆಂದು ಲಸಿಕೆ ಹಾಕಿಸಿಕೊಂಡನಂತೆ
ಊರ ಗಣ್ಯರ ಸಮ್ಮುಖದಲಿ
ಹೊತ್ತಿ ಉರಿದ ಹೆಣಕೆ
ಹೆಸರಿಡಲೂ ಮರೆತಿರುವ ಮಂದಿ
ನಾಳೆ ಬರುವ ಪತ್ರಿಕೆಗಾಗಿ ಕಾಯುತಿರುವರು
ಸಂತೆಯ ಒತ್ತುಗುಂಡಿಯಲಿ ತಮ್ಮ ತಾವೇ
ಮಾರಿಕೊಂಡ ಜನರು
ಭಾರಿ ಬೆಲೆಗೆ ಮಾರಾಟಗೊಂಡ ಖುಷಿಗೆ
ಸಿಹಿ ಹಂಚುತ್ತಿದ್ದಾರೆ
ಕತ್ತಲೂರಿನ ಕಡೆಗೆ
ಇನ್ನಾದರೂ ಬೆಳಕು ಬರಲಿ
ಇಷ್ಟೇ ನನ್ನ ಪ್ರಾರ್ಥನೆ…
0 ಪ್ರತಿಕ್ರಿಯೆಗಳು