ಸಂಕೇತದತ್ತ
ನಾಡಿನ ಖ್ಯಾತ ಚಿತ್ರಕಲಾವಿದರಲ್ಲಿ ಅಗ್ರಪಂಕ್ತಿಯಲ್ಲಿರುವ ಚಂದ್ರನಾಥ ಆಚಾರ್ಯರು ತಮ್ಮ ಮೂಲ ಚಿತ್ರಕೃತಿಗಳನ್ನು ಪ್ರರ್ದಶಿಸುತ್ತಿದ್ದಾರೆ!
ಮೂಲದ ಚಿತ್ರಗಳನ್ನೇ ಪ್ರದರ್ಶನ ಮಾಡುವುದಲ್ಲವೇ? ಆದರೆ ಈ ಪ್ರದರ್ಶನದಲ್ಲಿ ‘ಮೂಲದ್ದು’ ಎಂದು ಪ್ರತ್ಯೇಕವಾಗಿ ಹೇಳಿದ್ದು ಯಾಕಿರಬಹುದು? ಅದರಲ್ಲೇನು ಅಂತಹ ವಿಶೇಷ!
ಹೌದು, ಸಾಮಾನ್ಯವಾಗಿ ಇಂತಹ ಕುತೂಹಲ ಬರುವುದು ಸಹಜವೇ ಸರಿ!
ಆಚಾರ್ಯರ ಈ ಚಿತ್ರಿಕೆಗಳು ಮಹಾಭಾರತದ ಘಟನಾವಳಿಗಳನ್ನಾಧರಿಸಿದ್ದಾಗಿವೆ. ಇವೆಲ್ಲವೂ ಹಲವಾರು ವರ್ಷಗಳ ಹಿಂದೆ ಮುದ್ರಣಗೊಂಡು ಜನಪ್ರಿಯವಾಗಿವೆ. ಆಗ ಮುದ್ರಣವಾದ ಚಿತ್ರಗಳನ್ನೇ ಈಗಿನವರು ನೇರ ನೋಡಲೆಂದು ಆವೇ ಮೂಲ ಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಮಹಾಭಾರತಕ್ಕೆ ಸಂಬಂಧಿಸಿದ ಈ ಚಿತ್ರಕೃತಿಗಳಲ್ಲಿ ಆಯಾಯ ಪಾತ್ರಗಳನ್ನು ಎದುರಿಗೇ ಕೂರಿಸಿಕೊಂಡು ಚಿತ್ರಿಸಿದ್ದಾರೇನೋ ಎಂಬಷ್ಟು ಕರಾರುವಕ್ಕಾಗಿ, ಯಥಾವತ್ತಾಗಿ ಆಯಾಯ ಸಂದರ್ಭಕ್ಕೆ ತಕ್ಕುದಾದ ಹಿನ್ನೆಲೆಯ ಸಮೇತ ರಚಿಸಿದ್ದಾರೆ. ಇವು ನೈಜತೆಯಿಂದ ಕೂಡಿವೆ!
ಇವೆಲ್ಲವೂ ಜಲವರ್ಣದ ಮಾಧ್ಯಮದಲ್ಲಿ ರಚಿತವಾಗಿದ್ದು ಜಲವರ್ಣವನ್ನು ಹೀಗೇ ಬಳಸಬೇಕು ಹಾಗೂ ಹೀಗೂ ಬಳಸಿಕೊಳ್ಳಬಹುದು ಎಂಬಷ್ಟು ನಿಖರವಾಗಿವೆ. ಈ ಸರಣಿಯ ಚಿತ್ರಕೃತಿಗಳ ರಚನೆಯ ಮೂಲಕ ಆಚಾರ್ಯರು ಈ ಟೆಕ್ನಿಕ್ ಅನ್ನು ತೋರಿಸಿ ಕೊಟ್ಟಿದ್ದಾರೆ.
ಇವೆಲ್ಲವೂ ಸರಿಸುಮಾರು ಮೂರು ದಶಕಗಳ ಹಿಂದೆ ನಾಡಿನ ಖ್ಯಾತ ವಾರಪತ್ರಿಕೆ ‘ಸುಧಾ’ಗಾಗಿ ಬರೆದವು. ಆಗ ಪ್ರತಿವಾರವೂ ಈ ಚಿತ್ರಗಳು ‘ಮಹಾಭಾರತ’ ಧಾರಾವಾಹಿಯ ಕತೆಯೊಂದಿಗೆ ಪ್ರಕಟವಾಗುತ್ತಿದ್ದವು. ಸರಿಸುಮಾರು ವರ್ಷ ಪೂರ್ತಿಯೂ ಪ್ರತಿ ವಾರವೂ ಈ ಸರಣಿಯ ಚಿತ್ರಗಳು ಬರುತ್ತಿದ್ದವು ಎಂಬುದು ಆಚಾರ್ಯರ ನುಡಿ.
ಓದುಗರಿಗೆ ಕತೆಯ ಕಡೆ ಒಲವಾದರೆ, ಕಲಾಸಕ್ತರಿಗೆ ಆಚಾರ್ಯರ ವೈವಿಧ್ಯಮಯ ವರ್ಣಚಿತ್ರಗಳನ್ನು ನೋಡುವುದೇ ಆನಂದ! ಆಗ ಮಹಾಭಾರತ ಕತೆಗೆ ರಚಿಸಿದ್ದ ಈ ಚಿತ್ರಗಳನ್ನು ಆ ದಿನಮಾನದವರು ಮುದ್ರಣ ರೂಪದಲ್ಲಿ ನೋಡಿದ್ದರು. ನನ್ನಲ್ಲೂ ಸೇರಿದಂತೆ ಹಲವರಲ್ಲಿ ಆ ಕಾಲದ ಈ ಚಿತ್ರಗಳ ಮುದ್ರಣದ ಪ್ರತಿಯು ಈಗಲೂ ಸಂಗ್ರಹದಲ್ಲಿದೆ ಎಂದರೆ ಈ ಕೃತಿಗಳ ಮಹತ್ವವು ಅರ್ಥವಾಗಬಹುದು!
ಈಗಿನ ಈ ದಿನಮಾನದವರಿಗಾಗಿ ಅದೇ ಮೂಲ ಚಿತ್ರಿಕೆಗಳನ್ನು ಇಲ್ಲಿ ಪ್ರದರ್ಶನ ಮಾಡುತ್ತಿರುವುದು ವಿಶೇಷ!
ಒಂದೇ ಬಾರಿಗೆ ಕುಳಿತು ಅಷ್ಟೂ ಚಿತ್ರಗಳನ್ನೂ ರಚಿಸಿದ್ದಾರೇನೋ ಎಂಬಷ್ಟು ಸಾಮ್ಯತೆಯು ಈ ಎಲ್ಲಾ ಚಿತ್ರಗಳಲ್ಲೂ ಕಾಣುತ್ತದೆ.
ಮೂವತ್ತು ವರ್ಷಗಳಷ್ಟು ಹಿಂದಿನವು ಇವು ಎಂದು ಆಚಾರ್ಯರೇ ಹೇಳಿದರೂ ನಂಬಲಾಗದು!
ಈಗಷ್ಡೇ ಮುಗಿಸಿ ಬ್ರಶ್ ತೊಳೆದು ಎದ್ದಿದ್ದಾರೇನೋ ಎಂಬಷ್ಟು ನಳನಳಿಪ ಹೊಳಪು ಈ ಪ್ರದರ್ಶನದ ಎಲ್ಲಾ 53 ಚಿತ್ರಿಕೆಗಳಲ್ಲೂ ಗೋಚರಿಸುತ್ತದೆ!
ಈ ಪ್ರದರ್ಶನದ ಗ್ಯಾಲರಿಯಲ್ಲಿ ಓಡಾಡುತ್ತಿದ್ದ ಆಚಾರ್ಯರು ಕೂಡ ಅಷ್ಟೆ ಹುರುಪು-ಉಲ್ಲಾಸಗಳಲ್ಲಿ ತಮ್ಮ ಈ ಕೃತಿಗಳ ರಚನೆ, ಆ ಸಮಯದಲ್ಲಿ ಎದುರಿಸಿದ ಸವಾಲುಗಳನ್ನು ವಿವರಿಸುತ್ತಿದ್ದರು. ಆಚಾರ್ಯರು ಅತಿ ಸಡಗರದಿಂದ ಪ್ರತಿ ನೋಡುಗನನ್ನೂ ಆದರಿಸಿ ಬರ ಮಾಡಿಕೊಂಡು ಕಿರಿಯ ವಿದ್ಯಾರ್ಥಿಯಂತೆ ತಮ್ಮ ಕೃತಿಗಳ ರಚನೆಯ ಬಗ್ಗೆ ವಿವರಿಸುತ್ತಿದ್ದರು!
ಈ ಕೃತಿ ರಚನೆಯ ಸಮಯದಲ್ಲಿ ಆಚಾರ್ಯರು ಅನಾರೋಗ್ಯದ ಕಾರಣ ಕೆಲವು ದಿನಗಳು ಆಸ್ಪತ್ರೆಯಲ್ಲಿದ್ದರಂತೆ. ಆದರೂ ಈ ಇಲ್ಯುಸ್ಟ್ರೇಶನ್ ಕೆಲಸ ನಿಲ್ಲಬಾರದೆಂಬ ನಿಲುವು ಹಾಗೂ ಕಾಯಕದ ಮೇಲಿನ ಶ್ರದ್ಧೆಯಿಂದ ಆಸ್ಪತ್ರೆಯಲ್ಲೇ ಕೆಲವು ಚಿತ್ರಗಳನ್ನು ರಚಿಸಲಾಗಿತ್ತು ಎಂದೂ ಗುರುಪತ್ನಿ ತಿಳಿಸಿದರು. ಅಲ್ಲದೇ ಎಂತಹ ಪರಿಸ್ಥಿತಿಯಲ್ಲೂ ಚಿತ್ರ ರಚನೆಯನ್ನು ನಿಲ್ಲಿಸದೇ ಅಷ್ಟೇ ತಾದಾನ್ಯತೆಯಿಂದ ಚಿತ್ರಗಳನ್ನು ರಚಿಸಿದ್ದ ದಿನಗಳನ್ನು ಅವರು ನೆನೆದರು!
ಆದರೆ ಈ ಚಿತ್ರಿಕೆಗಳ ರಚನೆಯ ಕಾಲದಲ್ಲಿ ಎಷ್ಟೆಲ್ಲಾ ಎಡರುತೊಡರುಗಳಿದ್ದರೂ ಅದರ ಛಾಯೆಯು ಈ ಕೃತಿಗಳಲ್ಲಿ ಕಾಣುತ್ತಿಲ್ಲ! ಅಪೂರ್ಣ ಎನ್ನಿಸುವಂತಹ ಒಂದೂ ಚಿತ್ರಗಳಿಲ್ಲಾ! ಅದೇ ಕಲಾವಿದನ ಕೈಚಳಕ!
ಕಲಾಕಾರನ ನೋವು-ಸಂಕಷ್ಟಗಳು ಕಲಾಕೃತಿಯಲ್ಲಿ ಕಾಣದು ಎಂಬುದಕ್ಕೆ ಈ ಕೃತಿಗಳೇ ಸಾಕ್ಷಿ.
ಎಲ್ಲಾ ಕೃತಿಗಳೂ ಒಂದಕ್ಕೊಂದು ಪೈಪೋಟಿಗೆ ಬಿದ್ದು ‘ಸೈ’ ಎನಿಸಿಕೊಂಡಿವೆ!
ನಾಡಿನ ಖ್ಯಾತ ಪತ್ರಿಕೆ ಪ್ರಜಾವಾಣಿ ಬಳಗದ ಸುಧಾ ಹಾಗೂ ಮಯೂರದಲ್ಲಿ ಹಿರಿಯ ಕಲಾವಿದರಾಗಿದ್ದು ಈಗ ನಿವೃತ್ತಿ ಜೀವನದಲ್ಲಿರುವ ಚಂದ್ರನಾಥ್ ಆಚಾರ್ಯ ಅವರ ಈ 53 ಜಲವರ್ಣದ ಮೂಲ ಕಲಾಕೃತಿಗಳು ಜೂನ್ 10 ರಿಂದ ಬೆಂಗಳೂರಿನ ಬಸವನಗುಡಿಗೆ ಹೊಂದಿಕೊಂಡಂತಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಆವರಣದ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಈ ಪ್ರದರ್ಶನವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯತೆ ಪಡೆದುಕೊಂಡು ಹೆಚ್ಚೆಚ್ಚು ಕಲಾಸಕ್ತರನ್ನು ಸೆಳೆಯುತ್ತಿವೆ.
ನಿಗಧಿಯ ಪ್ರಕಾರ ಜೂನ್ 16ಕ್ಕೆ ಮುಗಿಯಬೇಕಿತ್ತು. ಆದರೆ ನೋಡುಗರ ಮಹಾಪೂರ ಹಾಗೂ ಕಲಾಸಕ್ತರ ಒತ್ತಾಯದ ಮೇರೆಗೆ ಮತ್ತೊಂದು ವಾರಕ್ಕೆ (ಜೂನ್ 23ರ ವರೆಗೆ) ಮುಂದುವರಿದಿದೆ.
ಈ ಪ್ರದರ್ಶನವು ಹಲವಾರು ಕಲಾಪ್ರೇಮಿಗಳ, ಕಲಾಸಕ್ತರ, ಕಲಾವಿದರ, ಚಂದ್ರನಾಥ್ ಆಚಾರ್ಯರಿಗೇ ತಿಳಿಯದಂತೆ ಅವರ ಕಲಾಕೃತಿಗಳನ್ನು ನೋಡುತ್ತಾ, ಅಭ್ಯಾಸಿಸುತ್ತಾ ಏಕಲವ್ಯರಂತೆ ಬೆಳೆದು ಬಂದಿರುವ ಎಲ್ಲಾ ಕಲಾ ಸಂಕುಲಗಳು ಈ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ನೇರಾನೇರ ನೋಡಲು ಗ್ಯಾಲರಿಗೆ ಬಂದವರು ಮೂಲ ಕೃತಿಗಳ ಹತ್ತಿರಕ್ಕೆ ಮುಖವಿಟ್ಟು ಕಣ್ಣನ್ನು ನೆಟ್ಟು, ಇಂಚಿಂಚೂ ಆಸ್ವಾದಿಸುತ್ತಿದ್ದಾರೆ.
ಗ್ಯಾಲರಿಗೆ ಬರದೇ ಇರುವವರು, ನಾಡಿಂದ ಹಾರಿ ಹೋಗಿ ಸಮುದ್ರದಾಚೆಯ ಬೀಡಲ್ಲಿ ಬೀಡು ಬಿಟ್ಟಿರುವ ಕೆಲವು
ಏಕಲವ್ಯರು ಅಲ್ಲಿಂದಲೇ ಈ ಗ್ಯಾಲರಿಯ ವಿಡಿಯೋ ಹಾಗೂ ಚಿತ್ರಿಕೆಗಳನ್ನು ಝೂಮ್ ಮಾಡಿ ನೋಡಿ ತೃಪ್ತರಾಗುತ್ತಿದ್ದಾರೆ.
ಕನ್ನಡ ಕಲಾಲೋಕದ ಈ ದಿನಮಾನದ ದ್ರೋಣಾಚಾರ್ಯರಲ್ಲಿ ಚಂದ್ರನಾಥ್ ಆಚಾರ್ಯರ ಪಟ್ಟ ಅಗ್ರಸ್ಥಾನದಲ್ಲಿದ್ದಾರೆ ಎಂಬುದಕ್ಕೆ ಈ ಪ್ರದರ್ಶನ. ಉದಾಹರಣೆಯಂತಿದೆ.
ಆಚಾರ್ಯರು ಹಲವಾರು ಏಕವ್ಯಕ್ತಿ ಹಾಗೂ ಗುಂಪು ಕಲಾಕೃತಿಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಆದರೆ ಈ ಪ್ರದರ್ಶನದಲ್ಲಿ ಸಿಕ್ಕ ಪ್ರತಿಕ್ರಿಯೆಯೇ ಬೇರೆ ವಿಧದ್ದು!
ಪುರಾಣ ಕತೆಗೆ ಪೂರಕವಾದ ಈ ಚಿತ್ರಗಳ ಪ್ರದರ್ಶನಕ್ಕೆ ಈ ಗ್ಯಾಲರಿಯೂ ಅಷ್ಟೇ ಪೂರಕವಾಗಿದೆ ಎನ್ನಲಡ್ಡಿಯಿಲ್ಲ!
ಚಪ್ಪಲಿ-ಶೂಗಳ ಸಮೇತ ಒಳಗಡಿ ಇಡುವ ಮುನ್ನ ಮನಸ್ಸು ಹಿಂಜರಿಯುವಂತೆ ಮಾಡುತ್ತೆ. ಒಂದು ರೀತಿಯ ಸಕಾರಾತ್ಮಕ ಕಂಪನ ಏರ್ಪಡುತ್ತೆ!
ಅತ್ಯುತ್ತಮ ಕಲಾಕೃತಿಗಳನ್ನು ತಗುಲಿಸಿಕೊಂಡು ಭೀಗುತ್ತಿರುವ ಈ ಗ್ಯಾಲರಿಯ ಗೋಡೆಗಳು ಮುಂದಿನ ವಾರ ಖಾಲಿಯಾಗಲಿವೆ. ಈ ಮಟ್ಟದ ಹಾಗೂ ಈ ಕಲಾಕೃತಿಗಳನ್ನು ನೋಡಿ ಸ್ಫೂರ್ತಿಗೊಂಡ ಏಕಲವ್ಯ ಸಂಕುಲವು ಇದೇ ಸ್ಫೂರ್ತಿ ಹಾಗೂ ಅತ್ಯುತ್ಸಾಹದಲ್ಲಿ ಒಂದಿಷ್ಟು ಕಲಾಕೃತಿಗಳನ್ನು ರಚಿಸಿ ಇಲ್ಲಿ ಪ್ರದರ್ಶಿಸಲಿ ಎಂಬ ಆಶಯವನ್ನು ಈ ಗೋಡೆಗಳು ಹೊತ್ತಿವೆ!
ಆಚಾರ್ಯರೇ ಹೇಳುವಂತೆ ಇವೆಲ್ಲಾ ಚಿತ್ರಿಕೆಗಳು ಕಲಿಕೆಗೆ ಅನುವಾಗಲಿ. ನಾವು ಕಲಿತದ್ದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಆಗಷ್ಟೆ ಕಲಿಕೆಗೆ ಬೆಲೆ ಬರುವುದು!
0 ಪ್ರತಿಕ್ರಿಯೆಗಳು