ಮೂಲ: ಡ್ಯಾನಿಯಲ್ ಸುಕುಮಾರ್
ಕನ್ನಡಕ್ಕೆ: ಹರೀಶ್ ಎಂ ಜಿ
ನೀವು
ಸದ್ದು ಮಾಡದೆ
ಸಾಯಬಹುದಲ್ಲವೆ?
ನೀವು ನಿಮ್ಮ
ಮೇಲುಸಿರನು
ಮೆಲ್ಲಗೆ ಎಳೆದುಕೊಳ್ಳಬಹುದಲ್ಲವೆ?
ನೀವು
ಈ ಮೈಕು ಕ್ಯಾಮೆರಗಳಿಂದ
ಕೊಂಚ ದೂರ ನಿಂತು ಅಳಬಹುದಲ್ಲವೆ?
ನೀವು
ನಿಮ್ಮ ಅಸಹಾಯಕತೆಯನ್ನ
ಜಗತ್ತು ನೋಡದಂತೆ ಮರೆಮಾಚಬಹುದಲ್ಲವೆ?
ನೀವು ಸ್ವಲ್ಪ
ಆಸ್ಪತ್ರೆಯಿಂದ ದೂರ
ಆಟೋದಲ್ಲಿ ಕುಳಿತು
ಸತ್ತ ಗಂಡನಿಗೆ ಮುತ್ತಿಕ್ಕಿ
ಮರುಜೀವಕೊಡಬಹುದಲ್ಲವೆ?
ಅವನ ಸಾವು ಆಗಲೇ
ಏರುತ್ತಿರುವ ಸಾವಿನ ಸಂಖ್ಯೆಯನ್ನ
ಇನ್ನಷ್ಟು ಹದಗೆಡಿಸುತ್ತದೆ…
ನೀವು ಸತ್ತಾಗ
ನಿಮ್ಮ ಹೆಣವನ್ನ ನಿಮ್ಮ ಮಕ್ಕಳು
ಮನೆಯಲ್ಲೇ ಸುಟ್ಟಬಿಡಬಹುದಲ್ಲವೆ?
ಮನೆಗೇ ಬೆಂಕಿಬಿತ್ತೆಂದು
ನಾವು ಹೇಳಿಬಿಡಬಹುದಲ್ಲವೆ?
ನೀವು ಎಲ್ಲವನ್ನು ನೆನೆದು
ಗೋಳಿಡುವಾಗ ಎದೆಬಡಿದುಕೊಳ್ಳದೆ
ಸುಮ್ಮನೆ ಕುಳಿತುಕೊಳ್ಳಬಹುದಲ್ಲವೆ?
ದೇಶ ನಿಮಗಾಗಿ ಏನು ಕೊಟ್ಟಿದೆ ಎಂದು ಕೇಳಬೇಡಿ
ನೀವು ದೇಶಕ್ಕಾಗಿ ಏನು ಕೊಟ್ಟಿರಿ ಎಂದು ಹೇಳಿ.
ಇಂದು ಏನನ್ನೂ ಕೇಳಬೇಡಿ
ದೇಶದ ಮುಂದೆ ಬೇಡಿಕೆಯಿಡಬೇಡಿ
ಯಾರಿಗೂ ಹೇಳಬೇಡಿ
ಪದೇ ಪದೇ ಅಳಬೇಡಿ
ದುಃಖ ಕಂಬನಿಯಾಗಿ
ನೆಲಕ್ಕೆ ಬೀಳುವ ಮುನ್ನ
ಎಲ್ಲ ದುಃಖವನ್ನ ನುಂಗಿಬಿಡಿ
ಚಿತೆಯಲ್ಲಿ ದುಃಖದ ಕುರುಹು
ಕೂಡ ಇರುವುದು ಬೇಡ
ನಿಮ್ಮ ಕಣ್ಣೀರ ಧಾರೆಯನ್ನು ಮೀರಿ
ಉರಿವ ಬೆಂಕಿ ಇಲ್ಲಿಲ್ಲ…
ಹತ್ತಿ ಉರಿಯುತ್ತಿರುವ
ಈ ರುಧ್ರ ಭೂಮಿಯಲಿ ಇನ್ನಾವ ಗರ್ವ ಉಳಿದಿದೆ,
ಬೂದಿಯ ಬಣ್ಣಕ್ಕೆ ಯಾವ ಧರ್ಮ?
0 ಪ್ರತಿಕ್ರಿಯೆಗಳು