ಅವ್ವನ ಚೊಚ್ಚಲ ಕೃತಿ ಹೊರ ಬಂತು..
ಅನಿಲ್ ಗುನ್ನಾಪೂರ
ನಮ್ಮ ತಾಯಿ ಶೋಭಾ ಗುನ್ನಾಪೂರ ಅವರ ಚೊಚ್ಚಲ ಕಥಾಸಂಕಲನ ‘ಭೂಮಿಯ ಋಣ’ ಹೊರ ಬಂದಿದೆ. ಅವ್ವ ಶಾಲೆಗೆ ಹೋಗಿ ಓದಿದ್ದು ಒಂಬತ್ತನೇ ತರಗತಿಯ ತನಕ ಅಷ್ಟೇ. ಆದರೆ ಬದುಕೆಂಬ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಿತ ಪಾಠ ಮಾತ್ರ ಅಪಾರ. ನಾವು ಸಣ್ಣವರಿದ್ದಾಗ ನಮ್ಮೂರಿನ ಗ್ರಂಥಾಲಯದಿಂದ ಪುಸ್ತಕಗಳನ್ನು ತರಿಸಿ ಹಗಲಿರುಳು ಓದುತ್ತಿದ್ದಳು. ಈಗಲೂ ಅಷ್ಟೇ ನಾನು ತರಿಸುವ ಎಲ್ಲ ಪುಸ್ತಕಗಳ ಮೊದಲ ಓದುಗಳು ಅವ್ವನೇ ಆಗಿರುತ್ತಾಳೆ.
ನನ್ನ ಕತೆಗಳನ್ನು ಓದಿ ಅವ್ವ ನೀಡುವ ಸಲಹೆಗಳು ನನ್ನ ಕಥಾ ಬರವಣಿಗೆಯನ್ನು ಇನ್ನೊಂದು ನೆಲೆಗಟ್ಟಿನಲ್ಲಿ ನೋಡಲು ಕಾರಣವಾಗಿದೆ.
ಅವ್ವನ ಓದು- ಬರವಣಿಗೆ ಆರಂಭವಾದದ್ದು, ಇದುವರೆಗೂ ಅವ್ವ ಬರೆದದ್ದು, ನಾಡಿನ ಹಿರಿಯ ಲೇಖಕ-ಲೇಖಕಿಯರೊಡನೆ ಒಡನಾಟ ಬೆಳೆಸಿಕೊಂಡಿದ್ದು ಎಲ್ಲವೂ ಬಹಳ ವಿಶೇಷತೆಯಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವೆ.
ನನ್ನ ಚೊಚ್ಚಲ ಕಥಾಸಂಕಲನ “ಕಲ್ಲು ಹೂವಿನ ನೆರಳು” ಬರುವಾಗಲೇ ಅವ್ವನ “ಭೂಮಿಯ ಋಣ” ಕಥಾಸಂಕಲನ ಹೊರ ಬರುವುದಿತ್ತು. “ಮೊದ್ಲು ನಿಂದು ಬರ್ಲಿ.. ಆಮೇಲೆ ನಂದು ತಗೊಂಡು ಬಾ.. ಅಷ್ಟು ಅವಸರ ಏನಾದ” ಎಂದು ಅವ್ವ ಮುಂದೆ ಹಾಕುತ್ತಲೇ ಬಂದಿದ್ದಳು. ಅಂತೂ ಈಗ ಪುಸ್ತಕ ಹೊರ ಬಂದಿದೆ. ಖಂಡಿತವಾಗಿಯೂ ಈ ಕತೆಗಳು ಓದುಗರಿಗೆ ನಿರಾಶೆ ಮಾಡಲಾರವು ಎಂಬುದು ನನ್ನ ನಂಬಿಕೆ. ಅವ್ವನ ಜೀವನಾನುಭವದ ಒಂದಷ್ಟು ಅಂಶಗಳನ್ನು ಬಹಳ ಆಪ್ತವಾಗಿ, ಸಹಜವಾಗಿ ಈ ಕತೆಗಳಲ್ಲಿ ಕಾಣಬಹುದು ಎಂಬುದು ಒಬ್ಬ ಓದುಗನಾಗಿ ನನ್ನ ಅಭಿಪ್ರಾಯ.
ಮಕ್ಕಳಾದ ನಮ್ಮ ಬದುಕಿನಲ್ಲಿ ಇದು ಬಹಳ ಹೆಮ್ಮೆಯ ಮತ್ತು ಸಾರ್ಥಕ ಕ್ಷಣ. ಇಷ್ಟು ದಿನ ಕತೆ-ಕವಿತೆಗಳನ್ನು ಬರೆದು ಸಣ್ಣಪುಟ್ಟ ಬಹುಮಾನ ಬಂದಾಗ ಬೀಗುತ್ತಿದ್ದ ನನಗೆ ನಿಜವಾದ ಗೆಲುವು ಈಗ ಸಿಕ್ಕಿದೆ. ಅವ್ವನ ಸಾರ್ಥಕತೆಯ ಬದುಕಿನ ಅಧ್ಯಾಯ ಎಂಬಂತೆ ಮೊದಲ ಕೃತಿ ಹೊರಬಂದಿದೆ. ಇಲ್ಲಿಂದ ಬದುಕಿನ ಹೊಸ ಇನ್ನಿಂಗ್ಸ್ ಶುರುವಾದಂತಿದೆ. ಈ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ತುಂಬಾ ಥ್ಯಾಂಕ್ಸ್. ಎಂದಿನಂತೆ ತಮ್ಮ ಪ್ರೋತ್ಸಾಹವಿರಲಿ.
ಕತೆಗಾರರಾದ ಮುದಿರಾಜ್ ಬಾಣದ್ ಅವರು ತಮ್ಮ ವೈಷ್ಣವಿ ಪ್ರಕಾಶನದಿಂದ ಪುಸ್ತಕ ಹೊರ ತಂದಿದ್ದಾರೆ. ಅವರ ಪ್ರೀತಿ-ಪ್ರೋತ್ಸಾಹ ಕಾಳಜಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನಾಡಿನ ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಸರ್ ಮತ್ತು ವಿಮರ್ಶಕರಾದ ಎಂ ಎಸ್ ಆಶಾದೇವಿ ಮೇಡಂ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ಅಂದವಾದ ಮುಖಪುಟವನ್ನು ಸೌಮ್ಯ ಕಲ್ಯಾಣಕರ್, ಪುಟ ವಿನ್ಯಾಸ ಎಚ್.ಕೆ ಶರತ್ ಮಾಡಿದ್ದಾರೆ.
0 ಪ್ರತಿಕ್ರಿಯೆಗಳು