ಕಾಶ್ಮೀರದ ಕಣಿವೆಯೊಳಗೆ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅದೊಂದು ಕಾಲವಿತ್ತು:
ಕಣಿವೆಯ ತುಂಬಾ ಬಣ್ಣಬಣ್ಣದ ನೇಯ್ಗೆಯ ಕಂಬಳಿಗಳು
ಕಣ್ಣು ಕುಕ್ಕುತ್ತಿದ್ದವು
ಪ್ರತಿ ಸೇಬಿನ ಮರದಲ್ಲೂ ಹಣ್ಣುಗಳು ನೆಲ ಮುಟ್ಟುವಂತೆ
ತೂಗಿ ತೊನೆಯುತಿದ್ದವು
ದೋಣಿ ಮನೆಗಳ ಮೇಲೆ ಕೂತ ಚಂದುಳ್ಳಿ ಚಲುವೆಯರ
ಗಮನ ಸೆಳೆಯಲು ಗೋದಿ ಬಣ್ಣದ ಹರಯದ ಹುಡುಗರು
ಹಗಲೂ ರಾತ್ರಿ ಅಲೆಯುತ್ತಿದ್ದರು
ರಂಜಾನಿನ ಬಿರಿಯಾನಿ ವಾಸನೆಯ ನಡುವೆಯೂ
ಪಂಡಿತರುಗಳ ದೇವರ ಕೋಣೆಯ ಅಗರಬತ್ತಿಯ ಪರಿಮಳ
ಅಲೆದಾಡುತ್ತಿತ್ತು.
ಇದೀಗ ಗಡಿಯಾರಗಳು ಕ್ಯಾಲೆಂಡರುಗಳು
ಬದಲಾದ ಹಾಗೆ ಆಳುವವರು ಬದಲಾಗಿದ್ದಾರೆ
ಜೊತೆಗೆ ಆಳಿಸಿಕೊಳ್ಳುವವರೂ ಸಹ
ಹಿಮಚ್ಚಾದಿತ ಕಣಿವೆಯ ಮೌನ ಕದಡಿದಂತೆ ಬಂದೂಕುಗಳು ಮೊರೆಯುತ್ತಿವೆ
ಬಾಂಬುಗಳು ಸ್ಪೋಟಿಸುತ್ತಿವೆ
ಬಿಳಿ ಹಿಮಗಡ್ಡೆಗಳ ಮೇಲೆ ರಕ್ತ ಹೆಪ್ಪುಗಟ್ಟಿ ಹೆಕ್ಕಳವಾಗಿ
ಅದರ ಮೇಲೆ ಶಾಲೆಯ ಮಕ್ಕಳು ನಡೆಯುತ್ತಿದ್ದಾರೆ
ಹಾಗೆ ನಡೆದು ಹೋಗುವ ಮಕ್ಕಳಿಗೂ ಖಾತ್ರಿಯಿಲ್ಲ ತಾವು ತಲುಪುವಷ್ಟರಲ್ಲಿ
ಶಾಲೆಯಿರುತ್ತದೆಯೊ ಇಲ್ಲವೊ ಎಂದು!
Nice koneya saalugalu kavitege dwani katti kottavu.dhanyavadagalu