‘ಅಣಬೆ ಎಂದರೆ ಪಂಚಪ್ರಾಣ’ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಮಲೆನಾಡಿನ ಅಣಬೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ತಮ್ಮ ಸಂತಾನಾಭಿವೃದ್ಧಿಯ ಈ ಕಾಲಚಕ್ರದ ಒಳಗೆ ರಾಕ್ಷಸರಂತೆ ಈ ಮನುಷ್ಯರು ಹಕ್ಕಿಪಕ್ಷಿಗಳು, ಹಾವುಗಳು ಮುಂತಾಗಿ ಅನೇಕ ಪರೋಪ ಜೀವಿಗಳ ಅಸ್ತಿತ್ವಕ್ಕೆ ಅಡ್ಡಿ ತರುತ್ತಾರೆ. ಅಷ್ಟೇ ಏಕೆ? ಕೊರವ, ಮುಗುಡು ಮುಂತಾದ ಮಾಂಸಾಹಾರಿ ಮೀನುಗಳು ಕೂಡ ಸಣ್ಣ ಸಂತಾನದ ಮೀನುಗಳನ್ನು ನುಂಗಿ ಹಾಕುತ್ತವೆ. ಜೀವಜಾಲದ ಈ ನಿರಂತರ ಕ್ರಿಯೆಗಳನ್ನು ಮೀರಿ ಮೀನಿನ ಸಂತಾನ ತನ್ನನ್ನು ತಾನು ಉಳಿಸಿಕೊಳ್ಳುತ್ತದೆ. ಇದನ್ನು ಕಂಡಾಗ ಎಲ್ಲವನ್ನೂ ನಿಯಂತ್ರಿಸುವ ಭಗವಂತನೊಬ್ಬನಿದ್ದಾನೆ ಅನ್ನಿಸದೇ ಇರದು.
ನಮ್ಮ ಬಯಲುಸೀಮೆಗೆ ಈಗಿನ ವರ್ಷಗಳಲ್ಲಿ ಆ ಕಾಲದ ಮಳೆಗಾಲದ ಭಾಗ್ಯವೇ ಇಲ್ಲ. ಅಪರೂಪಕ್ಕೆ ಹತ್ತುತ್ತಿದ್ದ ಹತ್ತು ಮೀನುಗಳೂ ಇಲ್ಲ. ನಾನು ಕಂಡ ಹಾಗೆ ಸಸ್ಲು, ಗಿರುಲ್, ಕೊರವ, ಕುಚ್ಚು, ಬಾಳೆ ಮುಂತಾದ ಅನೇಕ ಬಗೆಯ ಮೀನುಗಳು ಕೆರೆಗಳಲ್ಲಿಯೂ ಹಳ್ಳದ ಮಡುವಿನಲ್ಲಿಯೂ ಸಿಗುತ್ತಿದ್ದವು. ಆ ಎಲ್ಲ ತಳಿಗಳನ್ನು ಸರ್ವನಾಶ ಮಾಡಿ, ಕೇವಲ ‘ಕಾಟ್ಲ’ ಮೀನುಗಳನ್ನು ಮಾತ್ರ ಬ್ರಾಯ್ಲರ್ ಕೋಳಿಗಳಂತೆ ಬೆಳೆಸಲಾಗುತ್ತಿದೆ. ಇವು ಬಹಳ ಬೇಗ ಬೆಳೆದು ಕೆರೆಗಳನ್ನು ಕಂಟ್ರಾಕ್ಟ್ ತೆಗೆದುಕೊಂಡ ವ್ಯಾಪಾರಿಗಳಿಗೆ ಅನುಕೂಲ ವಾಗುತ್ತದೆ ಎಂಬುದಷ್ಟೇ ಇದರ ಉದ್ದೇಶ.
ಸರ್ಕಾರದ ಮೀನುಗಾರಿಕೆ ಇಲಾಖೆಗೆ ಒಳನಾಡು ಮೀನುಗಾರಿಕೆಯಲ್ಲಿ ಏನೇನು ಮಾಡಬಹುದೆಂಬ ಕಲ್ಪನೆಯೂ ಇಲ್ಲ. ನಾಡಿನಾದ್ಯಂತ ಕಾಟ್ಲ ಮೀನುಗಳ ಕೊಬ್ಬು ತುಂಬಿದ ಮಾಂಸವನ್ನು ವ್ಯವಸ್ಥಿತವಾಗಿ ಹಂಚಲಾಗುತ್ತಿದೆ. ತುಂಗಭದ್ರಾ, ಕೆ.ಆರ್.ಎಸ್, ಲಿಂಗನಮುಕ್ಕಿ ಮುಂತಾದ ಬೃಹತ್ ಅಣೆಕಟ್ಟೆಗಳಲ್ಲಿ ಕುಚ್ಚು, ಬಾಳೆ, ಕೊರವ, ಮುಗುಡು, ಗಿರುಲ್ ಮುಂತಾದ ಮೀನುಗಳನ್ನು ಬೆಳೆಯಬಹುದು. ಆದರೆ ಅಲ್ಲಿಯೂ ʼಕಾಟ್ಲʼ ಮೀನುಗಳದ್ದೇ ದರ್ಬಾರು. ಸರ್ಕಾರಕ್ಕೆ ಇವೆಲ್ಲವನ್ನೂ ತಿಳಿಸಿಕೊಡುವ ಜನನಾಯಕರಾದರೂ ಎಲ್ಲಿದ್ದಾರೆ?
ನಮ್ಮ ಅಧ್ಯಯನ ಕೇಂದ್ರದಿಂದ ಅರ್ಧ ಫರ್ಲಾಂಗು ದೂರದಲ್ಲಿ ಭೂರಹಿತರಾದ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಒಂದಿಷ್ಟು ಮನೆಗಳಿವೆ. ಅದನ್ನು ‘ಬೆಳ್ಳಿ ಕೊಡಿಗೆ’ ಎಂದು ಕರೆಯುತ್ತಾರೆ. ನಮ್ಮ ಗುಂಡನೂ ಅದೇ ಸ್ಥಳದವನೇ. ಹಾಗೆಯೇ ಅಲ್ಲಿನ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಲ್ಲಿಕಾ ಎಂಬ ಒಬ್ಬ ಹೆಣ್ಣು ಮಗಳು ನಮ್ಮಲ್ಲಿ ಕೆಲಸದಲ್ಲಿದ್ದಾಳೆ. ತುಂಬ ಸುಸಂಸ್ಕೃತ ನಡವಳಿಕೆಯ ಹುಡುಗಿ. ದೀವರು, ಒಕ್ಕಲಿಗರು, ಹರಿಜನರು, ಹಸಲರು ಮುಂತಾಗಿ ಭೂಮಿ ಇಲ್ಲದಿರುವ ಜನರೇ ಅಲ್ಲಿರುವುದರಿಂದ ಜಾತ್ಯಾತೀತವಾಗಿ ಮನೆ ಮಾಡಿಕೊಂಡಿರುವ ಅವರು ‘ಬಡವರ ಜಾತಿ’ಯಾಗಿ ಪರಿಗಣಿತರಾಗಿದ್ದಾರೆ.
ನನಗೊಂದು ಕುತೂಹಲವಿತ್ತು. ಇವತ್ತಿನ ಮೀನಿನ ಸಂಭ್ರಮ ಅವರಲ್ಲಿ ಹೇಗಿರಬಹುದು? ಬೆಳಿಗ್ಗೆ ಎದ್ದವನೆ ವಾಯುವಿಹಾರದ ನೆಪದಲ್ಲಿ ಅತ್ತ ಹೊರಟೆ. ಮಳೆ ಕಡಿಮೆಯಾಗಿ ಜಿನುಗುತ್ತಿತ್ತು. ರಾತ್ರಿ ನೋಡಿದ ಹಳ್ಳ ಈಗಲೂ ಮೈದುಂಬಿ ಹರಿಯುತ್ತಿತ್ತು. ಗದ್ದೆ ತೋಡಿನಿಂದ ಸಂಗ್ರಹವಾದ ನೀರೆಲ್ಲ ಮತ್ತೊಂದು ಉಪ ಹಳ್ಳವಾಗಿ ಅಲ್ಲಿಗೆ ಬಂದು ಸೇರುತ್ತಿತ್ತು. ಕುವೆಂಪು ಹೇಳುವಂತೆ ಇಲ್ಲಿ ಯಾವುದೂ ಅಮುಖ್ಯವಲ್ಲ ಎನಿಸಿತು. ದೊಡ್ಡ ಹಳ್ಳಕ್ಕೆ ಸಣ್ಣ ಝರಿ ಬಂದು ಸೇರುವ ಸೊಗಸನ್ನು ನೋಡುತ್ತಾ ನೀರಿನ ಅಂಚಿನ ಕಲ್ಲಿನ ಮೇಲೆ ಕುಳಿತೆ. ಹಾಗೇ ಕಲ್ಪಿಸಿಕೊಂಡಂತೆ ಭದ್ರಾವತಿಯ ಕೂಡ್ಲಿಯಲ್ಲಿ ಒಟ್ಟುಗೂಡುವ ತುಂಗೆ ಮತ್ತು ಭದ್ರೆಯ ನೆನಪು ಬಂತು. ಇಲ್ಲಿಯೂ ಅದೇ ಪ್ರಕೃತಿ ವ್ಯಾಪಾರ ನಡೆದಿತ್ತು.
ಈ ಘಟನೆ ಕೂಡ ಅತ್ಯಂತ ಮಹತ್ವದ್ದಾಗಿ ನನಗೆ ಕಂಡಿತು. ಇಂಥ ಹನಿಹನಿ ಹಳ್ಳ ಕೊಳ್ಳಗಳೇ ನದಿಯ ಮೂಲಗಳಲ್ಲವೇ ಎನಿಸಿ ಇವುಗಳ ಬಗ್ಗೆ ಜನರ ನಿರ್ಲಕ್ಷ್ಯ ನೆನೆಸಿಕೊಂಡು ಕೆಡುಕೆನಿಸಿತು. ಈ ಒಂದೊಂದು ಹನಿಯೂ ಜಾರುತ್ತಾ ಇಳಿಯುತ್ತಾ ತುಂಗೆ ಮತ್ತು ಭದ್ರೆಯರಾಗಿ ಕೂಡ್ಲಿಯಲ್ಲಿ ಒಂದಾಗಿ ಹೊಸಪೇಟೆಯ ಡ್ಯಾಂನಲ್ಲಿ ಸಾಗರವಾಗುವ ಪರಿ ಎಷ್ಟು ಕುತೂಹಲ ಎನಿಸಿತು. ಅಲ್ಲಿ ಒಂದು ಹನಿ ಮಳೆ ಇಲ್ಲದಿದ್ದರೂ ಲಕ್ಷಾಂತರ ಎಕರೆ ತಣ್ಣಗೆ ನೀರುಣ್ಣುವ ಪರಿಯನ್ನು ನೆನೆದು ಒಂದು ಥರಾ ಹಿತವೆನಿಸಿತು. ನನ್ನ ಆಲೋಚನಾ ಲಹರಿ ಹೀಗೆ ಹರಿಯುತ್ತಿರಬೇಕಾದರೆ ನೀರೊಳಗಿದ್ದ ನನ್ನ ಕಾಲಿನ ಹೆಬ್ಬೆರಳ ಹತ್ತಿರ ಏನೋ ಮುಲಮುಲ ಎಂಬ ಭಾವನೆ. ತಿಳೀನೀರಿನಲ್ಲಿ ಬಳಕುತ್ತಾ ಮಿಂಚುತ್ತಿದ್ದ ಎರಡು ಸಸ್ಲು ಮೀನುಗಳು ಹೆಬ್ಬೆಟ್ಟನ್ನು ಮೂಸುತ್ತಾ ಆಟವಾಡುತ್ತಿದ್ದವು.
ಹಾಗೇ ಬೊಗಸೆ ಕೈಯಿಂದ ಹಿಡಿಯುವ ಪ್ರಯತ್ನ ಮಾಡಿದೆ. ಕ್ಷಣ ಮಾತ್ರದಲ್ಲಿ ಜಾರಿಕೊಂಡವು. ಅದೇ ದಾರಿಯಲ್ಲಿ ಹೋಗುತ್ತಿದ್ದ ಹಸ್ಲರ ನಾಗಪ್ಪ ಮಾತನಾಡದಿದ್ದರೆ ಹಾಗೇ ಇನ್ನೆಷ್ಟೊತ್ತು ಕುಳಿತಿರುತ್ತಿದ್ದೆನೇನೋ. ನಾಗಪ್ಪನೊಡನೆ ಮಾತನಾಡುತ್ತಾ ಗುಂಡನ ಮನೆಗೆ ಹೊರಟೆ. ಬಲಭಾಗದಲ್ಲಿದ್ದ ಗದ್ದೆ ಬದುಗಳ ಮೇಲೆ ಹತ್ತಾರು ಬಗೆಯ ಶ್ವೇತದಾರಿಗಳಾದ ಬೆಳಕ್ಕಿಗಳು ಹಗಲಿನ ಮೀನು ಬೇಟೆ ನಡೆಸಿದ್ದವು. ಕಲಾತ್ಮಕ ಬಣ್ಣದ ಮಿಂಚುಳ್ಳಿಗಳು ರೆಕ್ಕೆ ಅಗಲಿಸಿ ಬೇಟೆಯ ಗುರಿಯಿಟ್ಟು ಗದ್ದೆಯ ತಿಳೀನೀರನ್ನು ನೆಟ್ಟನೋಟದಿಂದ ನೋಡುತ್ತಾ ತಮ್ಮ ರೂಪ ವಿಶೇಷದಿಂದ ಗಮನ ಸೆಳೆಯುತ್ತಿದ್ದವು.
ಮಳೆ ನಿಂತ ನೆಲದ ಆ ಅಪರೂಪದ ಸೊಗಸು ಭಾವೋತ್ಕರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಗುಂಡ ಒಬ್ಬನೇ ಕುಳಿತು ಎಂಥದೋ ಹಗ್ಗ ಸುತ್ತುತ್ತಿದ್ದ. ನಾನು ಬಂದುದನ್ನು ನೋಡಿ ‘ಏನ್ ಸಾರು ಇಲ್ಲಿ ಬಂದ್ರಿ?’ ಎನ್ನುತ್ತಾ ಓಡಿ ಬಂದ. ‘ಎಲ್ಲಿ ಮಾರಾಯ ಮೀನು ಸಾರು, ರೆಡಿಯೋ’ ಎಂದೆ. ‘ಎಲ್ಲಿ ಸಾರು, ನಾನು ಇರೋದು ಒಬ್ನೇ, ನಾನು ಹಿಡಿದ ಮೀನುಗಳನ್ನು ಮಲ್ಲಿಕಾ ಮನೆಗೆ ಕೊಟ್ಟೆ’ ಎಂದ. ಅವನೂ ನಾನೂ ನಾಗಪ್ಪನೂ ಸೇರಿ ಮಲ್ಲಿಕಾ ಮನೆಗೆ ಹೋದೆವು. ಅಲ್ಲಿಂದ ಕುವೆಂಪು ಕವಿಮನೆಯಲ್ಲಿ ಕೆಲಸ ಮಾಡುವ ಹರೀಶನ ಮನೆಗೆ.
ಹೀಗೇ ಅಲ್ಲೆಲ್ಲ ಅಡ್ಡಾಡುವಾಗ ಎಲ್ಲರ ಮನೆಯಲ್ಲೂ ಮೀನಿನ ಅಡುಗೆ ಸಂಭ್ರಮ. ಮೀನಿನ ಕಮಟು ಪರಿಮಳ. ಎಲ್ಲರ ಮನೆಯಲ್ಲೂ ವಾಟೆ ಹುಳಿ ಬೆರಸಿದ ಮೀನು ಕಾರ ಸಿದ್ಧವಾಗುತ್ತಿತ್ತು.ಮಲೆನಾಡಿನಲ್ಲಿ ಮೀನು ಸಾರು ಮಾಡಲು ಮಣ್ಣಿನ ಮಡಿಕೆ ಉಪಯೋಗಿಸುತ್ತಾರೆ. ಅದು ಎಲ್ಲ ಪಾತ್ರೆಯಂತಿರದೆ ಅಗಲ ಬಾಯಿಯ ಪುಟ್ಟ ತಪ್ಪಲೆಯಂತೆ ಇರುತ್ತದೆ. ಉಳ್ಳವರ ಮನೆಯಲ್ಲಿ ಕಲ್ಲಿನಲ್ಲಿ ಕೊರೆದು ಮಾಡಿದ ಕಲ್ಲಿನ ತಪ್ಪಲೆ. ಇದರಲ್ಲಿ ಮಾಡುವ ಮೀನು ಹುಳಿ ಬಹಳ ರುಚಿ.
ಬೆಳ್ಳಿ ಕೊಡಿಗೆಯಿಂದ ವಾಪಸ್ಸು ಬಂದು ಸ್ನಾನ ಮುಗಿಸಿ ಆಫೀಸಿಗೆ ಬಂದಾಗ ನನ್ನ ಟೇಬಲ್ ಮೇಲೆ ಸ್ಟೀಲ್ ಡಬ್ಬಿಯೊಂದು ಕಾಯುತ್ತಾ ಕುಳಿತಿತ್ತು. ಗುಂಡನನ್ನು ಕರೆದು ಇದೇನೆಂದು ಕೇಳಿದೆ. ‘ಮಲ್ಲಿಕಾ ಮೀನು ಪಲ್ಯ ತಂದಿಟ್ಟಿದ್ದಾಳೆ’ ಅಂದ! ಖುಷಿಯಾಯಿತು. ಮಧ್ಯಾಹ್ನ ನನಗೂ ಮಲೆನಾಡಿನ ಹತ್ತು ಮೀನಿನ ಭರ್ಜರಿ ಊಟ!
ಅಣಬೆ ಎದ್ದವು ನೋಡಿ!
ಈ ಅಣಬೆ ಪ್ರಪಂಚ ತುಂಬ ವೈವಿಧ್ಯಮಯವಾಗಿರುತ್ತದೆ. ನಮ್ಮ ಬಯಲು ಸೀಮೆಯಲ್ಲಾದರೆ ಚೆನ್ನಾಗಿ ಮಳೆ ಹೊಡೆದು ಮಣ್ಣು ಮನಸಾರೆ ನೆಂದು ಪುಸಿಯಾದ ನಂತರ ಗುಡುಗಿನ ಅಬ್ಬರಕ್ಕೆ ಭೂಮಿ ಕಂಪಿಸಬೇಕು. ರಾತ್ರಿಯಲ್ಲಿ ಗುಡುಗು ಸಹಿತ ಮಳೆ ಬಂದು, ಬೆಳಿಗ್ಗೆ ಎಳೆ ಬಿಸಿಲು ಬಿದ್ದು ಭೂಮಿ ಬೆಚ್ಚಗಾದರೆ ಅಣಬೆಯ ಹಳೇ ಪಳೆಯುಳಿಕೆ ಇರುವ ಕಡೆಯಲ್ಲೆಲ್ಲ ಅಪ್ಪಟ ಬಿಳಿ ಬಣ್ಣದ ಅಣಬೆಗಳು ಗುಪ್ಪೆ ಗುಪ್ಪೆಯಾಗಿ ನೆಲದಿಂದ ಚಿಮ್ಮುತ್ತವೆ. ಮೊದಲು ಮೊಗಟಿನ ಆಕಾರದಲ್ಲಿ ಮೇಲೆದ್ದು ನಂತರ ಛತ್ರಿಯ ರೂಪ ಪಡೆದು ರಾರಾಜಿಸುತ್ತವೆ. ಅವು ಯಾರ ಕಣ್ಣಿಗೆ ಬೀಳುತ್ತವೋ ಅವರ ಅದೃಷ್ಟ. ಕೆಲವು ಸ್ಥಳಗಳಲ್ಲಿ ಅಲ್ಲಲ್ಲಿ ಒಂದೊಂದು ಎದ್ದರೆ ಮತ್ತೆ ಕೆಲವೆಡೆ ರಾಶಿರಾಶಿಯಾಗಿ ಬತ್ತದ ಬಟ್ಟಲಿನಂತೆ ಎದ್ದು ನಿಲ್ಲುತ್ತವೆ. ಒಮ್ಮೊಮ್ಮೆ ಗೋಣಿಚೀಲದಲ್ಲಿ ತುಂಬಿ ತಂದದ್ದೂ ಇದೆ. ಆಗ ಕೇರಿ ಕೇರಿಗಳಲ್ಲಿ ಅಣಬೆ ಸಾರಿನ, ಅಣಬೆ ಗೊಜ್ಜಿನ ಸಂಭ್ರಮವೋ ಸಂಭ್ರಮ.
ಆದರೆ ಈ ಮಲೆನಾಡಿನ ಅಣಬೆಯ ವೈಶಿಷ್ಟ್ಯಗಳೇ ಬೇರೆ. ಹಿಂದೊಮ್ಮೆ ನಾನು ಕುಣಬಿ ಸಮುದಾಯದ ಅಧ್ಯಯನಕ್ಕಾಗಿ ದಾಂಡೇಲಿ ಮತ್ತು ಜೋಯಿಡಾ ಕಡೆ ಹೋಗಿದ್ದೆ. ಹದವರಿತ ಮಳೆಗಾಲ ಅದು. ರಾತ್ರಿ ದಾಂಡೇಲಿಯಲ್ಲಿ ತಂಗಿದ್ದವನು, ಬೆಳಿಗ್ಗೆ ‘ಗ್ರೀನ್ ಇಂಡಿಯಾ’ ಸರ್ಕಾರೇತರ ಸಂಸ್ಥೆಯ ಮಿತ್ರ ಬಿ.ಪಿ. ಮಹೇಂದ್ರಕುಮಾರ್ ಅವರ ಜೀಪಿನಲ್ಲಿ ಜೋಯಿಡಾ ಕಡೆ ಹೊರಟಿದ್ದೆ. ದಾಂಡೇಲಿಯ ರಸ್ತೆ ರಸ್ತೆಗಳಲ್ಲಿ ಜನ ಬುಟ್ಟಿಗಳಲ್ಲಿ ಅಣಬೆ ತುಂಬಿಕೊಂಡು ಮಾರಾಟ ಮಾಡುತ್ತಿದ್ದರು. ಅದೂ ಬಣ್ಣ ಬಣ್ಣದ ಅಣಬೆಗಳು ನನಗೆ ಆಶ್ಚರ್ಯವಾಯಿತು.
ಏನಿದು ಮಹೇಂದ್ರ ಇಷ್ಟೊಂದು ಅಣಬೆ? ಅದೂ ಬಣ್ಣದ ಅಣಬೆಗಳು? ಎಂದು ಪ್ರಶ್ನಿಸಿದೆ. ಮಹೇಂದ್ರರಿಗೆ ಅದು ಸೋಜಿಗದ ವಿಷಯವೇನೂ ಆಗಿರಲಿಲ್ಲ. ‘ಸಾರ್ ಇದು ಅಣಬೆ ಏಳುವ ಕಾಲ, ನಮ್ಮ ಕಾಡು ಲಕ್ಷಾಂತರ ಅಣಬೆಗಳಿಗೆ ಆವಾಸ ಸ್ಥಾನ. ಏನಿಲ್ಲ ಎಂದರೂ ಹದಿನೈದು ಇಪ್ಪತ್ತು ಬಗೆಯ ಅಣಬೆಗಳು ಸಿಗುತ್ತವೆ. ನಮ್ಮ ಬುಡಕಟ್ಟು ಜನರು ಅವುಗಳನ್ನು ಸಂಗ್ರಹಿಸಿ ಪೇಟೆಗೆ ತಂದು ಮಾರುತ್ತಾರೆ. ಬೆಲೆಯೂ ಹೆಚ್ಚಲ್ಲ. ನೂರು ರೂಪಾಯಿಗೆ ಒಂದು ಬುಟ್ಟಿ ತುಂಬ ಸಿಗುತ್ತವೆ’ ಎಂದು ಅಣಬೆ ಬಗ್ಗೆ ಒಂದು ಉಪನ್ಯಾಸವನ್ನೇ ಕೊಟ್ಟಿದ್ದರು.
ದಾಂಡೇಲಿ ಬಿಟ್ಟ ನಂತರ ಕುಂಬಾರವಾಡ ಎಂಬ ಊರಿಗೆ ತಲುಪಿದೆವು. ಅಲ್ಲಿಯೂ ರಸ್ತೆ ಪಕ್ಕದಲ್ಲಿ ಕಣಬಿ ಹೆಂಗಸರು ಬುಟ್ಟಿಗಟ್ಟಲೆ ಅಣಬೆ ಇಟ್ಟುಕೊಂಡು ಕುಳಿತಿದ್ದರು. ಅಲ್ಲಿಂದ ಜೋಯಿಡಾ ತಲುಪಿದರೆ ಅಲ್ಲಿಯೂ ಅದೇ ದೃಶ್ಯ. ನನಗೆ ಇನ್ನು ತಡೆಯಲಾಗಲಿಲ್ಲ. ನಮ್ಮ ಬಯಲು ಸೀಮೆಯಲ್ಲಿ ಅಣಬೆಗೆ ಬಣ್ಣವಿದ್ದರೆ ಅದನ್ನು ‘ಹುಚ್ಚು ಅಣಬೆ’ ಎಂದು ಬಿಸಾಡುತ್ತಾರೆ. ವಾಸ್ತವವಾಗಿ ಅದು ವಿಷದ ಅಣಬೆ. ಆದರೆ ಈ ಮಲೆನಾಡಿನಲ್ಲಿ ಕಣ್ಣು ಕೋರೈಸುವ ಬಣ್ಣದ ಅಣಬೆ! ಹುಚ್ಚು, ಬೆಪ್ಪು, ವಿಷ ಏನೂ ಇಲ್ಲದ ತಿನ್ನುವ ಅಣಬೆ! ಹೇಳಿದೆನಲ್ಲ, ನನಗೆ ತಡೆಯಲಾಗಲಿಲ್ಲ.
ಜೀಪ್ ನಿಲ್ಲಿಸುವಂತೆ ಹೇಳಿದೆ. ಸೀದಾ ಹೋಗಿ ನೂರು ರೂಪಾಯಿ ಕೊಟ್ಟು ಒಂದು ಬುಟ್ಟಿ ಖರೀದಿಸಿದೆ. ಅವುಗಳನ್ನು ಒಂದು ಪ್ಲಾಸ್ಟಿಕ್ ಚೀಲಕ್ಕೆ ಸುರಿದುಕೊಂಡು ಜೀಪು ಹತ್ತಿದೆ. ಮಹೇಂದ್ರರಿಗೆ ಆಶ್ಚರ್ಯವಾಯಿತೋ ಇಲ್ಲಾ ಇವನು ‘ಬಾಯಿ ಚಪಲ ಚೆನ್ನಿಗ’ ಎಂದು ಅಸಹ್ಯವಾಯಿತೋ ಗೊತ್ತಿಲ್ಲ. ಅವರು ‘ಸಾರ್ ನಾವು ಹೊರಟಿರುವುದು ಕ್ಷೇತ್ರ ಕಾರ್ಯಕ್ಕೆ, ಅಣಬೆಗಳನ್ನು ಮಧ್ಯಾಹ್ನದ ಒಳಗೆ ಅಡುಗೆ ಮಾಡದಿದ್ದರೆ ಹಾಳಾಗುತ್ತವೆ. ನಾವು ಜೈನರು. ನಾನು ತಿನ್ನುತ್ತೇನಾದರೂ ನಮ್ಮ ಮನೆಯಲ್ಲಿ ಅಣಬೆ ಬೇಯಿಸುವುದಿಲ್ಲ. ಹಾಗಾಗಿ ವಾಪಸ್ ದಾಂಡೇಲಿಗೆ ಹೋದರೂ ಪ್ರಯೋಜನವಿಲ್ಲ,
ಈಗೇನು ಮಾಡುವುದು?’ ಎಂದು ಹಲವತ್ತುಕೊಂಡರು. ಆದರೆ ನನ್ನ ಯೋಚನೆಯೇ ಬೇರೆ ಇತ್ತು. ನನ್ನ ಹತ್ತಾರು ವರ್ಷಗಳ ಕ್ಷೇತ್ರಕಾರ್ಯದಲ್ಲಿ ಬುಡಕಟ್ಟುಗಳ ಮನೆಯಲ್ಲಿಯೇ ವಾಸ್ತವ್ಯ ಹೂಡಿದವನು, ಅವರು ಮಾಡಿದ ಅಡುಗೆಯನ್ನೇ ಬಯಸಿ ತಿಂದವನು. ಯಾರಾದರೂ ಒಬ್ಬ ಕುಣಬಿಯರ ಮನೆಗೆ ಕೊಟ್ಟರೆ ಅಡುಗೆ ಮಾಡದಿರುತ್ತಾರೆಯೇ ಎಂಬುದು ನನ್ನ ಆಲೋಚನೆ. ಈ ವಿಷಯವನ್ನು ಅವರಿಗೆ ಹೇಳುತ್ತಿದ್ದಂತೆ ಇನ್ನೊಂದು ತಕರಾರು ತೆಗೆದರು. ‘ಸಾರ್ ನಾವು ಇವತ್ತು ಮಧ್ಯಾಹ್ನ ಒಂದು ಕುಣಬಿ ಮದುವೆ ಕಾರ್ಯ ನೋಡಲು ಹೋಗುತ್ತಿದ್ದೇವೆ.
ಮದುವೆ ಮನೆಗೆ ಹೋಗಿ ಊಟ ಮಾಡದಿದ್ದರೆ ಆದೀತೇ?’ ಎಂದು ನನ್ನ ಅಣಬೆ ಆಸೆಗೆ ತಣ್ಣೀರು ಎರಚಿದರು. ಬಣ್ಣದ ಅಣಬೆಗಳನ್ನು ನೋಡುತ್ತಾ ನೋಡುತ್ತಾ ಮದುವೆ ನೋಡಲು ಹೋಗುತ್ತಿದ್ದೇವೆ ಎಂಬುದನ್ನು ಸಂಪೂರ್ಣ ಮರೆತು ಹೋಗಿದ್ದೆ. ನಮ್ಮ ಜೀಪು ಜೋಯಿಡಾ ತಾಲ್ಲೂಕಿನ ಕಾಡಿನ ಮಧ್ಯದ ಒಳ ರಸ್ತೆಯಲ್ಲಿ ಮಂಬರಿಯುತ್ತಿತ್ತು. ಮಳೆಗಾಲದ ಮಣ್ಣು ರಸ್ತೆ ಬೇರೆ. ಮಹೇಂದ್ರ ಪ್ರಯಾಸದಿಂದಲೇ ಗಾಡಿ ಓಡಿಸುತ್ತಿದ್ದರು. ಆತ ಬಹಳ ಸುಂದರ ಮನುಷ್ಯ, ಆದರೆ ಈಗ ಪ್ರಸನ್ನವದನರಾಗಿ ಏನೂ ಕಾಣಲಿಲ್ಲ.
ಏನು ಮಾಡುವುದು? ಅಣಬೆಗಳ ಆ ಮಣ್ಣ ವಾಸನೆ ಬೇರೆ ಮೂಗಿಗೆ ಠಳಾಯಿಸುತ್ತಿದೆ. ಏನಾದರಾಗಲಿ ಇವತ್ತು ಅಣಬೆ ತಿನ್ನಲೇಬೇಕೆಂಬ ಶಪಥ ಮಾಡಿದೆ. ‘ನಿಮಗೆ ತೀರಾ ಕ್ಲೋಸ್ ಇರುವ ಕುಟುಂಬ ಯಾವುದು ಮಹೇಂದ್ರ’ ಎಂದೆ. ಸಾರ್ ಇಲ್ಲಿರುವ ಹುಡುಗರೆಲ್ಲ ನಮ್ಮ ಸಂಸ್ಥೆಗೆ ಹತ್ತಿರದವರೇ ಎಂದವರೇ ‘ಅಣಬೆ ಅಡುಗೆ ಮಾಡಿಸೋಣ ಬಿಡಿ ಸಾರ್’ ಎಂದು ಹುಸಿ ನಕ್ಕರು. ನನ್ನ ಈ ರಂಕಲಾಟ ನೋಡಿ ಕನಿಕರದಿಂದ ಆ ತೀರ್ಮಾನಕ್ಕೆ ಅವರೇ ಬಂದಿದ್ದರು.
ದಾರಿ ಮಧ್ಯದಲ್ಲಿಯೇ ಇದ್ದ ಕುಣಬಿ ಗುಡಿಸಲೊಂದರಲ್ಲಿ ಅವರ ಶಿಷ್ಯನನ್ನು ಭೇಟಿ ಮಾಡಿ, ಮಧ್ಯಾಹ್ನ ಮದುವೆ ಕಾರ್ಯಕ್ರಮ ನೋಡಿಕೊಂಡು ಮೂರು ನಾಲ್ಕು ಗಂಟೆಗೆ ವಾಪಸ್ಸು ಬರುತ್ತೇವೆಂದು ತಿಳಿಸಿ, ಅಷ್ಟರಲ್ಲಿ ಅಣಬೆ ಗೊಜ್ಜು ಮಾಡಿಡುವಂತೆ ತಿಳಿಸಿ ಮುಂದೆ ಹೊರಟೆವು. ಪ್ರಕೃತಿಯ ನಡುವೆ ಹಸಿರು ಚಪ್ಪರದ ಅಡಿಯಲ್ಲಿ ನಡೆದ ಅತ್ಯಂತ ಸರಳ ಸ್ವರೂಪದ ಮದುವೆಯಲ್ಲಿ ಅವರ ‘ಗುಳ್ಳಾಣಿ ಪಾಯಸ’ ಕುಡಿದು ಉಂಡ ಶಾಸ್ತ್ರ ಮಾಡಿ ಹಿಂತಿರುಗಿದೆವು. ದಾರಿಯಲ್ಲಿ ರಸಪಾಕವನ್ನು ಮೀರಿಸುವ ಅಣಬೆ ಗೊಜ್ಜು ನಮಗಾಗಿ ಕಾಯ್ದಿತ್ತು. ಅಂದು ದೆವ್ವ ಹಿಡಿದವನಂತೆ ನಾನು ತಿಂದಿದ್ದೆ. ಮಹೇಂದ್ರ ಬಿಟ್ಟ ಕಣ್ಣು ಬಿಟ್ಟಂತೆ ನನ್ನನ್ನು ನೋಡುತ್ತಾ ಕುಳಿತಿದ್ದರು!
। ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು