‘ಅಡಿಕೆ ಚೊಗರು’ ಬಿಡುಗಡೆ ಫೋಟೋ ಆಲ್ಬಂ…

ರಾಜ್ಯದಲ್ಲಿ ಅಡಿಕೆ ಬೆಳೆಯುವ ಹನ್ನೊಂದು ಜಿಲ್ಲೆಗಳಲ್ಲಿ ಅಡಿಕೆಯ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸರ್ಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ – ಅಟಾರಿಯ ನಿರ್ದೇಶಕ ಡಾ. ವಿ. ವೆಂಕಟ ಸುಬ್ರಮಣಿಯನ್ ಹೇಳಿದ್ದಾರೆ. ಅಡಿಕೆ ಬಳಕೆಯ ಬಗ್ಗೆ ತಪ್ಪುಕಲ್ಪನೆಗಳು ದೂರವಾಗಿ ಅದರ ಉಪ ಉತ್ಪನ್ನಗಳ ಬಳಕೆ ಹೆಚ್ಚಿಸುವ ಬಗ್ಗೆ ಗಮನಹರಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಅವರು ಪುತ್ತೂರು ಸಮೀಪದ ಪರ್ಪುಂಜದ ಸೌಗಂಧಿಕದಲ್ಲಿ ನಿನ್ನೆ ಅಡಿಕೆ ಪತ್ರಿಕೆಯ 35ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ ಸಂಪನ್ಮೂಲ ಮತ್ತು ತಂತ್ರಜ್ಞಾನಗಳು ಹೆಚ್ಚುಹೆಚ್ಚು ಬಳಕೆಗೆ ಬರಬೇಕು; ನಗರಗಳಿಂದ ಗ್ರಾಮಗಳಿಗೆ ಆದಾಯದ ಹರಿವಿರಬೇಕು; ಜಲಸಂರಕ್ಷಣೆ, ಹಲಸು, ಬಾಕಾಹು, ಚೊಗರು ಅಭಿಯಾನ ನಡೆಸಿದ ಅಡಿಕೆ ಪತ್ರಿಕೆ ತಂಡದ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ಸಾಹಿತಿ, ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ಶ್ರೀ ಪಡ್ರೆ ಅವರ ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಪುಸ್ತಕ ಬಿಡುಗಡೆ ಮಾಡಿ, ನಿಸರ್ಗಕ್ಕೆ ಪೂರಕವಾಗಿಯೆ, ಪರಂಪರಾಗತ ಕೌಶಲ್ಯವನ್ನೊಳಗೊಂಡು ಚೊಗರು ತಯಾರಿಕೆ ಕ್ರಮ ಶತಮಾನಗಳಿಂದ ಬೆಳೆದುಬಂದಿದೆ; ಪಡ್ರೆಯವರು ಈ ಕ್ಷೇತ್ರದ ಒಳಹೊರಗನ್ನು ಅರ್ಥಪೂರ್ಣವಾಗಿ ವಿಶದಪಡಿಸಿದ್ದಾರೆ ಎಂದರು.

ಶ್ರೀ ಪಡ್ರೆ ಅವರು, ಮಲೆನಾಡಿನ ಕೆಲಭಾಗಗಳಲ್ಲಿ ಕೆಂಪಡಿಕೆ ಸಂಸ್ಕರಣೆ ವೇಳೆ ಸಹಜವಾಗಿಯೆ ಲಭಿಸುವ ಚೊಗರು ನೈಸರ್ಗಿಕ ಬಟ್ಟೆ ಬಣ್ಣ ಮಾತ್ರವಲ್ಲ, ಗೆದ್ದಲುನಾಶಕ ಮತ್ತಿ ಶಿಲೀಂಧ್ರನಾಶಕವೂ ಹೌದು; ಈ ಬಹೂಪಯೋಗಿ ಉತ್ಪನ್ನ ಸಾಕಷ್ಟು ವಾಣಿಜ್ಯಿಕ ಅವಕಾಶಗಳನ್ನು ತೆರೆದಿಟ್ಟಿದ್ದು ಇದನ್ನು ಬಳಸಿಕೊಳ್ಳಲು ಉತ್ಸಾಹಿ ನವೋದ್ಯಮಿಗಳು ಮುಂದೆಬರಬೇಕು ಎಂದು ಆಶಿಸಿದರು. ಅಡಿಕೆ ಕೃಷಿ ವ್ಯಾಪಕವಾಗಿ ಹಬ್ಬಿದ್ದರೂ ಚೊಗರಿನ ಬಳಕೆಯ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿದಿಲ್ಲ; ಅಡಿಕೆ ಪತ್ರಿಕೆ ವತಿಯಿಂದ 20ಕ್ಕೂ ಹೆಚ್ಚು ಸಂಸ್ಥೆ-ಕಂಪೆನಿಗಳಿಗೆ ಚೊಗರಿನ ಮಾದರಿ ಕಳುಹಿಸಿದ್ದು, ವಿವಿಧ ಪ್ರಯೋಗಗಳು ನಡೆಯುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ ಮಾತನಾಡಿ, ಮಣ್ಣಿನ ಬಣ್ಣದ ಅಡಿಕೆ ಚೊಗರು ನಮ್ಮ ಹೆಮ್ಮೆಯ ಬಣ್ಣವಾಗಬೇಕು; ಈ ನಿಟ್ಟಿನಲ್ಲಿ ಕಳೆದ ಆರೇಳು ತಿಂಗಳಿಂದ ಅಡಿಕೆ ಪತ್ರಿಕೆ ಸತತವಾಗಿ ಅಧ್ಯಯನ ನಡೆಸುತ್ತ ಬಂದಿದ್ದು ಹಲವಾರು ಲೇಖನಗಳನ್ನು ಪ್ರಕಟಿಸಿದೆ ಎಂದರು.

ಗಣ್ಯರು ಬಿಳಿಹಾಳೆಗೆ ಅಡಿಕೆ ಚೊಗರು ಎರಚಿ ಅದರ ಗಾಢ ಕಂದು ಬಣ್ಣವನ್ನು ಸಭಿಕರಿಗೆ ಪರಿಚಯಿಸಿದ್ದು ವಿಶೇಷವಾಗಿತ್ತು. ಅಡಿಕೆ ಪತ್ರಿಕೆಯ 35ನೇ ವರ್ಷಾಚರಣೆ ಅಂಗವಾಗಿ ಪತ್ರಿಕೆಯ ಹಿತೈಷಿ, ಲೇಖಕ ತುಮಕೂರಿನ ಹೆಚ್.ಜೆ. ಪದ್ಮರಾಜು ತೋವಿನಕೆರೆ ಅವರನ್ನು ಗೌರವಿಸಲಾಯಿತು. ಚೊಗರಿನ ವಿವಿಧ ಆಯಾಮಗಳನ್ನು ತಿಳಿಸುವ ಭಿತ್ತಿಚಿತ್ರಗಳು ಹಾಗೂ ಈ ಬಣ್ಣ ಬಳಸಿದ ಬುಗುರಿ ಇನ್ನಿತರ ಆಟಿಕೆಗಳು, ಗುಳೇದಗುಡ್ಡ ರವಿಕೆ ಖಣ, ಟವೆಲ್, ಶಾಲು, ಸಾಬೂನುದ್ರಾವಣ ಇತ್ಯಾದಿಗಳ ಪ್ರದರ್ಶನ ಗಮನಸೆಳೆಯಿತು.

ಚಂದ್ರ ಸೌಗಂಧಿಕ, ಮಾಧವ ಕಲ್ಲಾರೆ ಚೊಗರಿನ ಬಗ್ಗೆ ಹಾಡು ಸಾದರಪಡಿಸಿದರು. ಅರವಿಂದ ಕುಡ್ಲ ಪರಿಸರ ಗೀತೆ ಹಾಡಿದರು. ಆರಂಭದಲ್ಲಿ ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಸ್ವಾಗತಿಸಿದರು. ಚಂದ್ರ ಸೌಗಂಧಿಕ ವಂದಿಸಿದರು.

ಅಡಿಕೆ ಪತ್ರಿಕೆ ಸಂಪಾದಕೀಯ ಮಂಡಳಿಯ ಸದಸ್ಯರಾದ ಎಂ.ಜಿ. ಸತ್ಯನಾರಾಯಣ, ಕಿನಿಲ ಅಶೋಕ್, ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ, ಮಂಗಳೂರು ಕೆವಿಕೆ ಮುಖ್ಯಸ್ಥ ಡಾ. ಟಿ.ಜೆ. ರಮೇಶ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

‍ಲೇಖಕರು avadhi

January 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: