‘ಪ್ರೊ. ಜಿ.ಕೆಗೋವಿಂದರಾವ್ ನಿರಂತರವಾಗಿ ಬೆಳೆಯುವ ಜಗತ್ತಿನ ಜೊತೆಗೆ ಬೆಳೆಯುತ್ತಲೇ ಹೋದರು, ನಮ್ಮೆಲ್ಲರ ಹೃದಯವನ್ನು ಆವರಿಸುವ ವ್ಯಕ್ತಿತ್ವ ಅವರದಾಗಿತ್ತು ಮತ್ತವರು ಪರಂಪರೆಯ ಪ್ರತಿನಿಧಿಯಾಗಿದ್ದರು’ ಎಂದು ಇತ್ತೀಚೆಗೆ ಅಗಲಿದ ಜಿ.ಕೆ.ಜಿ ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯಪಟ್ಟರು. ಹುಬ್ಬಳ್ಳಿಯ ಕಾಳಿದಾಸನಗರದ ನಾಗಸುಧೆಜಗಲಿಯಲ್ಲಿ ನಡೆದ ಪ್ರೊ. ಜಿ.ಕೆ.ಜಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆ ಮತ್ತು ನಾಗಸುಧೆ ಜಗಲಿ ಆಶ್ರಯದಲ್ಲಿ ಜಿ.ಕೆ.ಜಿ ಸ್ಮರಣೆಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್.ಯು.ಸಿ.ಐಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ರಾಮಾಂಜನಪ್ಪ ಆಲ್ದಳ್ಳಿ ‘ಜಿ.ಕೆ.ಜಿಯವರಿಗೆ ಕಲಾವಿದರಾಗಿ ಎಷ್ಟೋ ಪ್ರಚಾರ ಸಿಕ್ಕಿದ್ದರೂ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತಮ್ಮ ವೈಚಾರಿಕ ಚಿಂತನೆಗಳ ವಿಷಯದಲ್ಲಿ ಎಂದಿಗೂ ರಾಜಿಮಾಡಿಕೊಂಡವರಲ್ಲ, ಮತ್ತು ಅಷ್ಟೇ ಆಕ್ರೋಶದಿಂದ ಅವರು ತಮ್ಮ ಅಭಿಪ್ರಾಯಗಳನ್ನು ನಿಖರವಾಗಿ ಮಂಡಿಸಬಲ್ಲವರಾಗಿದ್ದರು’ ಎಂದರು.
ಹುಬ್ಬಳ್ಳಿಯಲ್ಲಿ ವಾಸಿಸುವ ಚಿತ್ರಕಲಾವಿದೆಯೂ ಆಗಿರುವ, ಜಿ.ಕೆ.ಜಿಯವರ ಹಿರಿಯ ಮಗಳು ಶ್ಯಾಮಲಾಗುರು ಪ್ರಸಾದ ಭಾವನಾತ್ಮಕವಾಗಿ ನೆನೆಸಿಕೊಳ್ಳುತ್ತ ‘ಅಪ್ಪನ ಅನುಭವದ ಮಾತುಗಳು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿವೆ. ಅವರ ಓದಿನ ಅಭ್ಯಾಸ ನನಗೆ ಸಿಕ್ಕ ದೊಡ್ಡ ಉಡುಗೊರೆ, ಆದರೆ ತಂದೆಯವರು ತಮ್ಮಕಡೆಯ ದಿನಗಳಲ್ಲಿ ಒಂದು ರೀತಿಯ ನಿರಾಶಾದಾಯಕ ಸ್ಥಿತಿಯಲ್ಲಿದ್ದಂತೆ ಕಾಣುತ್ತಿದ್ದರು, ತಮ್ಮ ವೈಚಾರಿಕ ಮಾತುಗಳಿಂದ ಈ ಯುವಜನಾಂಗವನ್ನುಎಷ್ಟರ ಮಟ್ಟಿಗೆ ತಲುಪಬಲ್ಲೆ ಎಂಬ ವಿಷಾದವೊಂದು ಅವರನ್ನುಕಾಡುತ್ತಿದ್ದಂತೆ ಅನಿಸುತ್ತಿತ್ತು’ ಎಂದರು. ಅಕ್ಷರ ವೇದಿಕೆಯ ಎಂ.ಬಿ ಅಡ್ನೂರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ‘ಇಂಥವರು ಇನ್ನೂ ಹೆಚ್ಚು ಕಾಲ ನಮ್ಮೊಂದಿಗಿದ್ದು ಜನರ ಅರಿವನ್ನು ಹೆಚ್ಚಿಸಬೇಕಿತ್ತು’ ಎಂದರು.
ತಂದೆಯ ಕುರಿತು ಒಂದು ಪುಸ್ತಕವನ್ನು ಬರೆಯುವಂತೆ ಶ್ಯಾಮಲಾ ಅವರಿಗೆ ಸಲಹೆ ನೀಡಿದ ಸುನಂದಾ ಕಡಮೆ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿದರು. ವಿರುಪಾಕ್ಷ ಕಟ್ಟೀಮನಿ ವಂದಿಸಿದರು. ಪ್ರಕಾಶ ಕಡಮೆ, ಸಂಗಮೇಶ ಮೆಣಸಿನಕಾಯಿ, ಸುಭಾಸ ಶೆಟ್ಟಿ, ಮಹಾಂತಪ್ಪ ನಂದೂರ, ಸಿ.ಎಂಚೆನ್ನಬಸಪ್ಪ, ನಿರ್ಮಲಾ ಶೆಟ್ಟರ್, ಶಾಲಿನಿ ರುದ್ರಮುನಿ, ರಾಮು ಮೂಲಗಿ, ಗಂಗಾಧರ ಬಡಿಗೇರ, ಭುವನಾ ಲಕ್ಷ್ಮಣ, ಶಶಿಕಲಾ, ಮಹಾಂತೇಶ, ಅರುಣ, ರಮೇಶ ಮೊದಲಾದವರು ಪಾಲ್ಗೊಂಡಿದ್ದರು.
0 ಪ್ರತಿಕ್ರಿಯೆಗಳು