ನಾನು ಜಾನಿಯಲ್ಲ ಅಂಜಲಿ.. ನನಗೆ ಅಮ್ಮನ ಪ್ರೀತಿ ಬೇಕು…
ನಾಗರಾಜ್ ಹೆತ್ತೂರು
ನಾನು ಅವನಲ್ಲ ಅವಳು..ಮಂಗಳಮುಖಿಯರ ಬದುಕಿನ ಕುರಿತಾದ ಚಿತ್ರ
ಇತ್ತೀಚೆಗೆ ಸದ್ದು ಮಾಡಿದ ಸಿನಿಮಾ. ಈ ಚಿತ್ರದ ನಟನೆಗೆ ಸಂಚಾರಿ ವಿಜಯ್ ಗೆ ರಾಷ್ಟ್ರಪ್ರಶಸ್ತಿಯೂ ಬಂದಿದೆ… ಮಂಗಳಮುಖಿಯರ ಬದುಕೆ ಹಾಗೆ ಮೂರಬಟ್ಟೆಯಾದ ಬದುಕು. ಈ ದೇಶದಲ್ಲಿ ಅಸ್ಪೃಶ್ಯತೆ ದೊಡ್ಡ ಸಮಸ್ಯೆಯಾದರೆ ಅಸ್ಪೃಶ್ಯರಿಗಿಂತಲೂ ಅಸ್ಪೃಶ್ಯರು ಈ ಮಂಗಳಮುಖಿಯರು ಅಥವಾ ತೃತೀಯ ಲಿಂಗಿಗಳು.
ಕಳೆದ ಕೆಲ ದಿನದ ಹಿಂದೆ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದ ಅಂಜಲಿ ಫೋನ್ ಮಾಡಿದ್ದಳು. ನೋಡಲು ಸಂದರವಾಗಿರುವ ಇವಳನ್ನು ಮಂಗಳಮುಖಿ ಎಂದು ಯಾರೂ ಅನ್ನುವುದಿಲ್ಲ. ”ಅಣ್ಣಾ ನನ್ನ ಅಮ್ಮನಿಗೆ ನನ್ನಣ್ಣ ಸಿಕ್ಕಾಪಟ್ಟೆ ಹೊಡೆದಿದ್ದಾನೆ. ತಲೆಗೆ 8 ಹೊಲಿಗೆ ಹಾಕಿದ್ದಾರೆ” ಏನು ಮಾಡುವುದು ಎಂದಳು.
ಇಷ್ಟಕ್ಕೂ ಅವಳು ಮಾಡಿದ ತಪ್ಪೇನು..? ಅಮ್ಮ ಮಾಡಿದ ತಪ್ಪೇನು..? ಎಂದು ಕೆದಕುತ್ತಾ ಹೋದಾಗ ಜಾನಿ ಅಂಜಲಿಯಾದ ಕತೆಯನ್ನು ಬಿಚ್ಚಿಡುತ್ತಾ ಹೋದಳು.
ಜಾನಿ.. ಆಕೆ ಅಮ್ಮ ಪ್ರೀತಿಯಿಂದ ಇಟ್ಟ ಹೆಸರು, ಎಲ್ಲರಂತೆ ಮಗ ಬೆಳೆಯುತ್ತಿದ್ದ ಎಂದುಕೊಂಡಿತ್ತು ಕುಟುಂಬ. ಆದರೆ ಜಾನಿಗೆ ತಾನು ಬೆಳೆದಂತೆ ನಾನು ಗಂಡಸಲ್ಲ ಎಂದು ಮನದೊಳಗೆ ಅನಿಸುತ್ತಿತ್ತು. ಹೆಣ್ಣುಮಕ್ಕಳಂತೆ ವತರ್ಿಸುತ್ತಿದ್ದ, ಹೆಣ್ಣುಮಕ್ಕಳ ಜೊತೆ ಆಟವಾಡುವುದು, ಅವರಂತೆ ವೇಶಭೂಷಣ ಧರಿಸುವಂತೆ ಮನಸ್ಸಿಗೆ ಆಗುವುದು ನಡೆಯುತ್ತಿತ್ತು. 12 ವರ್ಷದ ದಾಟಿದ ನಂತರ ಇದು ಹೆಚ್ಚಾಗತೊಡಗಿತು.
ಈ ಮಧ್ಯೆ ತನ್ನ ಓರಗೆಯ ಹುಡುಗರು ಆಡಿಕೊಳ್ಳಲು ಆರಂಭಿಸಿದರು ಏನೋ `ಹೆಣ್ಗ’ ಎಂದು ಛೇಡಿಸಿದರು…
ನಾನು ಅವನಲ್ಲ ಅವಳು.. ಎಂದು ಹೇಳಿಕೊಳ್ಳಬೇಕೆಂಬ ಆತುರ, ಆದರೆ ಯಾರೊಟ್ಟಿಗೆ ಹೇಳಿಕೊಳ್ಳಬೇಕು. ಅಣ್ಣನಿಗೋ ಅಮ್ಮನಿಗೋ ಗೆಳೆಯರೊಟ್ಟಿಗೋ ಒಂದು ವೇಳೆ ಇದನ್ನು ಹೇಳಿಕೊಂಡರೆ ಏನಾಗಬಹುದು..? ಯಾರು ಏನೆಂದುಕೊಳ್ಳುತ್ತಾರೆ ಎಂದು ಮನಸ್ಸನ್ನು ಹಿಡಿದು ಹಿಡಿದು ಸಾಕಾಗಿತ್ತು.
ಅದೊಂದು ದಿನ ಬಂದೇ ಬಿಟ್ಟತು. ಒಳು ಉಡುಪುಗಳ ಬಗ್ಗೆ ಆಸಕ್ತಿ ಇದ್ದಿದ್ದಿ ಅಮ್ಮನಿಗೆ ಗೊತ್ತಾಗಿತ್ತು. ಅಮ್ಮನೊಟ್ಟಿಗೆ ಮನದಾಳದ ಮಾತುಗಳನ್ನು ಹೇಳಿಕೊಂಡು ನಾನು ಅವನಲ್ಲ ಅವಳು ಎಂದಾಗ ಅಮ್ಮನ ಕಣ್ಣಲ್ಲೂ ನೀರು…
ನಾನೊಬ್ಬಳೇ ಮಾತ್ರ ಹೀಗೆಯೇ.. ಎಂದು ಹುಡುಕಿದಾಗ ಇಲ್ಲ ಎಂದು ನನ್ನಂತಹವರು ಅದೆಷ್ಟೋ ಜನರಿದ್ದಾರೆ ಎಂದು ಗೊತ್ತಾಗಿದ್ದೆ ಹಾಸನಕ್ಕೆ ಬಂದಾಗ ಅಲ್ಲಿ ಹಿಮ್ಮ ತ್ ಸಿಂಗ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಅಲ್ಲಿ ಒಂದು ದಿನ ಎಲ್ಲರೂ ನೃತ್ಯ ಮಾಡುವಾಗ ಹೆಣ್ಣುಮಕ್ಕಳೊಟ್ಟಿಗೆ ನೃತ್ಯ ಮಾಡಿ ನಾನು ಇನ್ನು ಮುಂದೆ ಯಾವತ್ತೂ ಹೆಣ್ಣಾಗಿಯೇ ಇರುತ್ತೇನೆ ಎಂದು ಮನದಲ್ಲೇ ಅಂದುಕೊಂಡಳು..ಅಂದಿನಿಂದ ಮತ್ತೆಂದು ಗಂಡಸರ ಉಡುಪು ಹಾಕಲೇ ಇಲ್ಲ.
ಜೊತೆಗೆ ಮಂಗಳಮುಖಿಯರು ಸಿಕ್ಕಾಗ ಮಾತನಾಡಿದಾಗ ಅವರೊಟ್ಟಿಗೆ ಬೆರೆತು ನಾನೂ ನಿಮ್ಮವನೇ ಎಂದಾಗ ಜಗತ್ತನ್ನೇ ಗೆದ್ದ ಖುಷಿಯಲಿದ್ದಳು ಅಂಜಲಿ.
ಅಷ್ಟರಲ್ಲಿ ಕುಟುಂಬದವರಿಗೆ ಗೊತ್ತಾಗಿತ್ತು .. ಜಾನಿ ಅಂಜಲಿಯಾಗಿದ್ದಳು. ಬೆಂಗಳೂರಿನಲ್ಲಿ ತಮ್ಮದೇ ಗೆಳೆಯರ ಜೊತೆ ಒಂದಷ್ಟು ದಿನ ಇದ್ದ ಅಂಜಲಿ ಒಂದೂವರೆ ವರ್ಷದ ಹಿಂದೆ ನಿವರ್ಾಣ (ಲಿಂಗ ಬದಲಾವಣೆ) ಹೊಂದಿದ್ದಳು. ಆದರೂ ಅಮ್ಮನ ಪ್ರೀತಿ ಮನೆಗೆ ಕರೆತಂದಿತ್ತು
ಕಳೆದ ವಾರ ಅಮ್ಮನ ಪ್ರೀತಿಗೆ ಓಗೊಟ್ಟ ಅಂಜಲಿ ಮನೆಗೆ ಬಂದಿದ್ದಳು. ಇವಳೇಕೆ ಮನೆಗೆ ಬಂದಿದ್ದಾಳೆ ಎಂದು ಜಗಳ ತೆಗೆದ ಅಣ್ಣಾ ಇವಳನ್ನು ಮನೆಗೆ ಸೇರಿಸಿ ನಮ್ಮ ಮಾನ ಮರ್ಯಾದೆ ಹೋಗಿದೆ. ತಲೆ ಎತ್ತಿ ತಿರುಗಲು ಆಗುತ್ತಿಲ್ಲ ಎಂದು ಇವಳ ಸಿಟ್ಟನ್ನೆಲ್ಲ ತೆಗೆದು ಅಂಜಲಿ ಅಮ್ಮನ ಮೇಲೆ ತೀರಿಸಿಕೊಂಡ.
ಅಂಜಲಿಗೆ ಹೊಡೆಯುವ ಧೈರ್ಯವಿರಲಿಲ್ಲ. ಏಕೆಂದರೆ ಅಂಜಲಿ ಅವನಿಗೆ ಅವರದೇ ಶೈಲಿಯಲ್ಲಿ ಉತ್ತರ ಕೊಡಲು ಸಿದ್ದಳಾಗಿದ್ದಳು. ಗಲಾಟೆ ನಡೆದು ಮಾಧ್ಯಮದವರಿಗೆ ವಿಚಾರ ಮುಟ್ಟಿಸಿದ ಅಂಜಲಿ ದೂರು ದಾಖಲಿಸಿದಳು. ಆದರೆ ಆಕೆಯ ಅಮ್ಮ ಮಗನ ಪ್ರೇಮಕ್ಕೆ ದೂರು ವಾಪಾಸ್ ತೆಗೆದುಕೊಂಡಳು.
ಇದೀಗ ಅಂಜಲಿ ಅಮ್ಮನನ್ನು ತನ್ನ ಬಳಿಯೆ ಇಟ್ಟುಕೊಂಡಿದ್ದಾಳೆ. ಅಮ್ಮನನ್ನು ನಾನೇ ಸಾಕುತ್ತೇನೆ ಎನ್ನುತ್ತಾಳೆ. ತಾಯಿ ಪ್ರೀತಿಗಿಂತ ದೊಡ್ಡದೇನಿದೆ ಎನ್ನುವ ಅಂಜಲಿಗೆ ಕೊನೆಯವರೆಗೂ ನನ್ನ ತಾಯಿ ನನ್ನ ಬಳಿಯೇ ಇರಬೇಕು ಎಂಬ ಅಧಮ್ಯ ಬಯಕೆ.
ಈ ನಡುವೆ ಈ ವಿಚಾರ ತಿಳಿದು ಮತ್ತೊಂದು ಸಮಸ್ಯೆ ಎದುರಾಗಿದೆ. ಇವರಿಗೆ ಬದುಕಲು ಎಲ್ಲೂ ಯಾರೂ ಬಾಡಿಮೆ ಮನೆ ನೀಡುವುದಿಲ್ಲ.. ಅದೇ ಸಮಸ್ಯೆ ಇವರಿಗೂ ಎದುರಾಗುವ ಸ್ಥಿತಿ ಬಂದು ಇದೀಗ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ.
ಇಡೀ ಹಾಸನದಲ್ಲಿ ಮಂಗಳಮುಖಿಯರಿಗೆ ಮನೆಯನ್ನು ಯಾರು ಬಾಡಿಗೆಗೆ ಕೊಡದ ಸ್ಥಿತಿ ಹೀಗಾಗಿ ಎಲ್ಲರೂ ಒಂದು ಕಡೆ ಕಚೇರಿ ಮಾಡಿಕೊಂಡು ಬದುಕುತ್ತಿದ್ದಾರೆ ಕಷ್ಟ ಸುಖಗಳನ್ನು ಮಾತನಾಡಿಕೊಳ್ಳುತ್ತಾರೆ. ಪ್ರಕೃತಿ ಪೆಹಚಾನ್ ಹೆಸರಿನ ಈ ಕಚೇರಿ ನಡೆಸುತ್ತಿದ್ದು ಇದು ಮಂಗಳಮುಖಿಯರ, ತೃತೀಯ ಲಿಂಗಿಗಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ. ಇಡೀ ಜಿಲ್ಲೆಯಾದ್ಯಂತ ಒಂದೂವರೆ ಸಾವಿರಕ್ಕೂ ಅಧಿಕ ಮಂಗಳಮುಖಿಯರಿದ್ದು ಇಲ್ಲಿ ಸದಸ್ಯತ್ವ ಪಡೆದಿದ್ದು ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುತ್ತಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪುರಸ್ಕೃತರಾದ ಅಕ್ಕಯ್ಯ, ರೇವತಿ ಅಂತಹವರ ಹೋರಾಟಗಳೇ ಇವರಿಗೆ ಆದರ್ಶವಾಗಿದೆ ಎನ್ನುತ್ತಾರೆ ಸಂಘದ ಅಧ್ಯಕರಾದ ರಮ್ಯ ಮತ್ತು ಕಾರ್ಯದಶರ್ಿ ಅಶ್ವಥ್
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಇವರಿಗೆ ಪೊಲೀಸರ ಕಿರುಕುಳವಿಲ್ಲ. ಈ ಹಿಂದೆ ಒಬ್ಬರು ಮೃತಪಟ್ಟಾಗ ಕೆಲವರನ್ನು ಅನಾವಶ್ಯಕವಾಗಿ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ನಮ್ಮ ತಪ್ಪಿದ್ದರೆ ಶಿಕ್ಷಿಸಲಿ ನಾವು ಇರುವುದೇ ಹೀಗೆ ಅನಾವಶ್ಯಕವಾಗಿ ನಮಗೆ ಕಿರುಕುಳ ನೀಡಬೇಡಿ ನಾವೂ ನಿಮ್ಮಂತೆಯೇ ಮನುಷ್ಯರು ಎನ್ನುತ್ತಾರೆ ರಮ್ಯ.
ಮಗಳಮುಖಿಯರಿಗೆ ವಸತಿ ಸಮಸ್ಯೆ ಇದೆ . ನಮ್ಮನ್ನು ಯಾವ ವರ್ಗಕ್ಕೆ ಸೇರಿಸಬೇಕು ಎನ್ನುವುದೇ ದೊಡ್ಡ ಸಮಸ್ಯೆ ಯಾಗಿದೆ ಮನೆ ಬಾಡಿಗೆ ಕೊಡುವುದಿಲ್ಲ. ಬಸ್ ಸ್ಟಾಂಡ್ ನಲ್ಲಿ ಜೀವಿಸುವರಿದ್ದಾರೆ. ನಮಗೂ ನಿವೇಶನ ಕೊಡಿ ಎನ್ನುತ್ತಾರೆ ಮುಖಂಡರು.
ಯಾವ ಮಂಗಳಮುಖಿಯರಿಂದ ಹಲ್ಲಿನಿಂದ ಕಚ್ಚಿಸಿಕೊಂಡು ಒಂದು ರೂಪಾಯಿ ಪಡೆದರೆ ಅದೃಷ್ಟ ಎಂದು ಜೋಬಿನಲ್ಲಿ ಇಟ್ಟುಕೊಳ್ಳುತ್ತಾರೋ ಇದೇ ಜನ ಇವರನ್ನು ನೋಡುವ ದೃಷ್ಠಿಕೋನ ಇನ್ನೂ ಬದಲಾಗಿಲ್ಲ… ನೋಡುವ ದೃಷ್ಠಿಕೋನ ಬದಲಾಯಿಸಿಕೊಳ್ಳಿ ನಮ್ಮನ್ನೂ ಎಲ್ಲರಂತೆ ನೋಡಿ ಎನ್ನುತ್ತಾರೆ. ಹಾಗೆಯೇ ಮಂಗಳಮುಖಿ ಹೆಸರಲ್ಲಿ ಜನರಿಗೆ ತೊಂದರೆ ಕೊಡುವರ ಬಗ್ಗೆ ಇವರಿಗೂ ಆಕ್ರೋಶವಿದೆ. ಅಂತಹವರ ಮೇಲೆ ದೂರು ಕೊಡಿ ಎನ್ನುತ್ತಾರೆ ಅಧ್ಯಕ್ಷೆ ರಮ್ಯ.
ಅದೇನೆ ಇರಲಿ ಜಾನಿ ಅಂಜಲಿಯಾದ ಕತೆಯಂತೆ ಇಲ್ಲಿರುವ ಸಾವಿರ ಜನರ ಕತೆಯೂ ಒಂದೊಂದು ದುರಂತ ಕತೆ.. ಇವರಿಗೆ ಬೇಕಿರುವುದು ಜನರಿಂದ`ಪ್ರೀತಿ’ ಕೇಳಿಕೊಂಡು ಹೀಗೆ ಹುಟ್ಟಲಿಲ್ಲ ನೋಡುವ ಮನೋಭಾವ ಬದಲಾಗಬೇಕು ಎನ್ನುತ್ತಾರೆ…
ನಾಗರಾಜ್ ಈ ಬರಹ ಓದಿ ಸಂತೋಷವಾಯಿತೆಂದರೆ ತಪ್ಪಾದೀತು.ಬದಲಿಗೆ ನನ್ನೊಳಗೊಂದು ವಿಷಾದ ಮಡುಗಟ್ಟಿತು.ಮಧು