ಸಂಗಮೇಶ ಸಜ್ಜನ್
ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್….
– ಬೇಂದ್ರೆ ಅಜ್ಜ
ನಿನ್ನೆಯ ಕಪ್ಪಣ್ಣ ಅಂಗಳದಲ್ಲಿನ ಬೆಳಗು ಹೀಗೆ ಅಜ್ಜನ ಪದಗಳಿಂದ ತುಂಬಿ ಬಂತು, ಹರಿದು ಬಂತು, ಬೈರಾಗಿ ಬಂತು…
ಪರಾಕಿ ಗೀರಾಕಿಯ ನಾದದೊಂದಿಗೆ ಶುರುವಾದ ಬಿಂದು ಮಾಲಿನಿಯವರ ಗಾಯನದ ಧನಿಯು ನಮ್ಮನ್ನೆಲ್ಲ ಸದ್ದಿಲ್ಲದ ಗುಂಗಿನಲ್ಲಿ ಏಕಾಂತದೆಡೆಗೆ ಕರೆದೊಯ್ದದ್ದು ನಿಗೂಢವೇ.
ಎಂದಿನಂತೆ ನಾನು ಬೇಂದ್ರೆ ಅಜ್ಜನನ್ನು ಕಾಣೋದು Somathanahalli Diwakar ಅವರಲ್ಲೇ, ಪ್ರತೀಸಲದ ಮಾತಿನಲ್ಲಿಯೂ ಹೊಸತು ಮತ್ತು ವಿಶೇಷತೆಯನ್ನು ಕೊಡಬಲ್ಲ ದಿವಾಕರರ ಬಾಯಲ್ಲಿ
ಎನು ಬಣ್ಣ ಬಣ್ಣ/ನಡುವೆ ನವಿಲಗಣ್ಣ!
ರೇಶಿಮೆ ಪಕ್ಕ ನಯ/ಮುಟ್ಟಲಾರೆ ಭಯ!
ಹೂವಿನ ಪಕಳಿಗಿಂತ /ತಿಳಿವು ತಿಳಿವು ಅಂತ?
ಹೂವಿಗೆ ಹೋಗಿ ತಾವ/ಗಲ್ಲಾ ತಿವಿತಾವ.
ಪಾತ್ರಗಿತ್ತಿ ಪಕ್ಕಾ/ ನೋಡಿದೇನs ಅಕ್ಕಾ! ಹೀಗೆ ಬೇಂದ್ರೆ ಅಜ್ಜನಂತೆಯೇ ಹಾಡಿ, ಕೂತವರನ್ನು ಮನಸೆಳೆಯುತ್ತ ಬಂದಿದ್ದಾರೆ. ಆದರೆ ಈ ಸಲದ ಮಾತುಗಳಲ್ಲಿ ಬೇಂದ್ರೆ ಅಜ್ಜನಿಗಿದ್ದ ಸಂಗೀತ, ರಾಗ, ತಾಳ, ನಾದ ಮತ್ತು ಲಯಗಳ ಬಗ್ಗೆ, ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡ ಸಂಗೀತದ ಬಗ್ಗೆ ಹೇಳುತ್ತಿದಾಗ ಎದುರಿಗಿದ್ದ ನಾವುಗಳೆಲ್ಲ ಬೆಚ್ಚಿ ಬೆರಗಾಗಿದ್ದಂತೂ ನಿಜ.
ಜೋಗಿಯವರ ಮಾತುಗಳನ್ನು ಕೇಳುತ್ತ ಹೋದಂತೆಲ್ಲ ಬೇಂದ್ರೆ ಅಜ್ಜನ
“ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ
ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs…”
ಜೋಗಿಯೆ ಎದುರಿಗೆ ಬಂದಂತಾಯಿತು.
Seetharam Talagavar ಸರ್ ಅವರ ಕಾವ್ಯ ಪ್ರೀತಿಗೆ ಕಿರಂ ಅವರೇ ಬಂದು ಪದ್ಯ ಓದಿದಂತಾಗಿತ್ತು.
ಕಾರ್ಯಕ್ರಮದುದ್ದಕ್ಕೂ ವಿಶೇಷವಾಗಿ ಕಂಡವರು ಜಯಂತ್ ಕಾಯ್ಕಿಣಿ ಸರ್. ಬೇಂದ್ರೆ ಮತ್ತು ಚಿತ್ತಾಲರನ್ನು ಇವರ ಬಾಯಿಯಿಂದ ಕೇಳೋದಿದೆಯಲ್ಲ ಅದು ವಿಶೇಷವೇ ಸರಿ. ಯುವ ಪೀಳೆಗೆಗೆಲ್ಲ ಕಾವ್ಯದ ಮತ್ತು ಕತೆಯ ಹುಚ್ಚು ಹಚ್ಚಿಸಿದವರಲ್ಲಿ ಕಾಯ್ಕಿಣಿ ಕೂಡ ಒಬ್ಬರು. ನಿನ್ನೆಯ ಕಾರ್ಯಕ್ರಮದಲ್ಲಿ ಕಾಯ್ಕಿಣಿ ಬಂದಿದ್ದಲ್ಲದೆ ನಮ್ಮ ಜೊತೆಗೆ ಕೂಡಿ
“ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವೇ
ದೀಪ ತೇಲಿ ಬಿಟ್ಟೆವು…”
ಹೀಗೆ ಅಜ್ಜನ ಕಾವ್ಯ ಪ್ರೀತಿಯ ದೀಪ ಹಚ್ಚಿ ಕಾರ್ಯಕ್ರಮದುದ್ದಕ್ಕೂ ಬೆಳಕು ಹರಿಸಿದರು.
Geeta Vasant , Rajkumar Madiwalar , ವಿಮಾ , ಮೌನೇಶ ಕನಸುಗಾರ , Madhav Ajjampur , ಇವರೆಲ್ಲರ ಶ್ರದ್ಧೆ ಮತ್ತು ಪ್ರೀತಿಯಿಂದ “ಕಂಡವರಿಗಷ್ಟೇ” ಪುಸ್ತಕ ನಮಗೆ ದೊರಕಿಸಿದ್ದು ಕನ್ನಡಿಗರೆಲ್ಲರ ಪುಣ್ಯ.
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಂದು ಹರಸಿ ಹಾರೈಸಿದ ಎಲ್ಲರಿಗೂ ಶರಣು.
“ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.”
ಇನ್ನೇನಿದ್ರು ನೀವು ಕಂಡವರಿಗಷ್ಟೇ ಪುಸ್ತಕ ಓದಿಯೇ ತಿಳಿಬೇಕು.
ಪುಸ್ತಕಕ್ಕಾಗಿ ಸಂಪರ್ಕಿಸಿ : +91 89708 70271
P C : ಮೌನೇಶ & ಅಮೃತಾ
0 ಪ್ರತಿಕ್ರಿಯೆಗಳು