ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಖನಾಗುವ ಹೊತ್ತು

ಸಖನಾಗುವ ಹೊತ್ತು

ಅನಂತ ರಮೇಶ್

ಗಂಡು ಕ್ರಾಪಿಗೆ
ತುಂಡು ಉಡುಗೆಗೆ
ಮಾಲ್ಗಳಲ್ಲಿಯ ಮೊಬೈಲ್ ನಡಿಗೆಗೆ
ಕ್ಲಿಕ್ಕಿಸುವ ಪ್ರವಾಹಿಗರಲ್ಲಿ
ಪಳೆಯುಳಿಕೆಯ ಕಡೆಗೆ ಕ್ಯಾಮರ
ಕಣ್ಣನಿಟ್ಟ ಪಂಟಗೆ!
ಕ್ಷಮೆ ಕೇಳಿ…

ec93b546c5103667b488e3e2c099714eತರಳೆ
ನೀಳ ಜಡೆ ಬಿಲ್ಲೆ
ತ್ರಿಭಂಗಿ ಬಿಂಕವಿಲ್ಲದೆ ಬೆನ್ನು
ತೋರಿ ನಿರ್ಲಜ್ಜ ಕಣ್ಣುಗಳಿಗೆ
ಭರ್ಜರಿ ಆಹಾ..ರ ವಾದವಳಿಗೆ…

ಯಾವ ಸಮೀಕರಣದಲ್ಲಿ
ಉಳಿ ಹಿಡಿದವನ ಬೆರಳ
ಲೆಕ್ಕಕ್ಕೆ ಸಿಕ್ಕಿ ಅರಳಿದ
ಅಳೆಯಲಾಗದ
ಕಲೆಗೆ ಉಳಿದೆ

ಲೇಖನಿಯ ಮೋಹಿಗರ
ಘನ ಸೆರೆಯಲ್ಲಿ ದ್ರವಿಸಿ
ಕಾವ್ಯ ಹರಿತ್ತಿಗೆ ಹರಿದೆ
ನೋಡುಗರ ಕನಸ ಪುಚ್ಚಗಳಿಗೆ
ಬಣ್ಣಗಳ ಹಚ್ಚಿ
ಕಲೆಯ ಆಲಯದೊಳಗೆ
ನಿಂತ ನೀ ಶಿಲಾಗೀತೆ

ತಿರುಗದಿರು ಇತ್ತ!
ನಿನ್ನ ಮುಖದ ಮಂದಹಾಸದ
ಕಲ್ಪನೆಯಲ್ಲಿ ಚಿತ್ತಾಗಲಿ ಚಿತ್ತ
ಇದು ಉಳಿಗೆ ಲೇಖನಿ ಸೋತು
ಜಡವಲ್ಲದ ಜಡೆಗೆ ಕವಿತೆ ಸೋತು
ಕವಿ ನಿನಗೆ ಸಖನಾಗುವ ಹೊತ್ತು!

ಕಲ್ಲಾಗಬೇಡ ನೀಳವೇಣಿ

nagaraja harapanahalli

ನಾಗರಾಜ ಹರಪನಹಳ್ಳಿ. (ಕಾರವಾರ)

ಕಲ್ಲಾಗಬೇಡ ನೀಳವೇಣಿ
ಪದ್ಮಪೃಷ್ಠ ಪೃಥಿವಿ
ನಾಗವೇಣಿ ನೀಲಾಲಕಿ
ನೀಲಾಂಬರಿ
ನಿನ್ನಲ್ಲಿ ; ನಿನ್ನ ಬಳಿ ಒಂದು
ನಿವೇದನೆಯುಂಟು
ಕಲ್ಲಾಗಬೇಡ ನಿತಂಬಿನಿ

sheನೀನು ಬೆನ್ನು ತೋರಿಸಿದ್ದು ಸಾಕು
ಕೈಮುಗಿದು ಕರದಿ ಪುಷ್ಪಗಂಧಿಯಾಗಿ
ನಿಲಕಂಬದ ನಿಲುವು ಸಾಕು

ಪಾದಗಳ ಬಳಿ ಕುಳಿತು
ಭಾವಗಳ ಭಿನ್ನಹವಿಸಬೇಕಿದೆ
ಒಮ್ಮೆ ತಿರುಗಿದೆಯಾದರೆ
ಸಾರ್ಥಕವಾದೀತು ಭಾವಜೀವ
ಕಲ್ಲಾಗಬೇಡ ದಂಡೆಯಂಥವಳೇ

ಒಮ್ಮೆ ಸಸಿಯಾಗಿ ಬೆಳೆದು
ಮೊಗ್ಗಾಗಿ ಬಿರಿದು
ಹೂವಾಗಿ ಅರಳಿ
ನಾಗರಜಡೆಯಲ್ಲಿ ಜಗವ ಬಿಗಿದು
ಕೊನೆಗೆ
ಶಿಲಾಬಾಲಕಿಯಾಗಿ ಗುಡಿ ಸೇರಿದವಳೇ
ಮತ್ತೆ ಕಲ್ಲಾಗಬೇಡ ನೀಲೋತ್ಪಲೆ

ಹಂಚಿಕೊಳ್ಳಲು ಮೈಯಲ್ಲಾ ಕಣ್ಣಾಗಿ
ಪದ್ಮಪತ್ರದ ಜಲಬಿಂದುವಾಗಿ
ಕಿರುಬೆರಳ ಸ್ಪರ್ಶಕೆ ಕಾದಿರುವೆ
ಕಲ್ಲಾಗಬೇಡ ನೀಳವೇಣಿ

ಇರುಳು ಹಗಲಹೊದ್ದು
ಮಲಗಿರುವ ಪೃಥ್ವಿಯೇ
ನಿನ್ನಲ್ಲಿ ಬೀಜವಾಗಿ ಬಿದ್ದಿರುವೆ
ಜೀವಸೆಲೆಯ ಚೆಲ್ಲಿಬಿಡು
ಬೀಜ ಅರಳಿ ಒಮ್ಮೆ
ಮಡಿಲ ಒಡಲಲ್ಲಿ
ಕಲ್ಲಾಗಬೇಡ ನೀಲಾಂಬರಿ

ಒಮ್ಮೆ ನದಿಯಾಗಿ ನಡೆದು ಬಿಡು
ಕುಟಿಲಪಥಗಳಲಿ; ಹಾಡಾಗಿ ಹರಿದು ಬಿಡು
ತಾಯಾಗಿ ಕ್ಷಮಿಸಿ ಬಿಡು
ಕಲ್ಲಾಗಬೇಡ ನೀಳವೇಣಿ

‍ಲೇಖಕರು Admin

30 August, 2016

*

0 Comments

Trackbacks/Pingbacks

  1. ಸಖನಾಗುವ ಹೊತ್ತು | ಅನಂತರಮೇಶ್ - […] (‘ಅವಧಿ’ ಇ ಪತ್ರಿಕೆಯಲ್ಲಿ ಪ್ರಕಟಿತ: Link address :http://avadhimag.online/2016/08/30/%E0%B2%B8%E0%B2%96%E0%B2%A8%E0%B2%BE%E0%B2%97%E0%B3%81%E0%B2%B5-%E0%…) […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading