ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ಕರ್ನಾಟಕ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ

ಕಳೆದ ಆರು ದಿನಗಳಿಂದ ವ್ಯೂರ್ತ್ಸ್ ಬುರ್ಗ್ ನಿಂದ ಹೊರಗೆ ಹಂಬುರ್ಗ್, ಬರ್ಲಿನ್ ಸುತ್ತಾಡಿ ಈ ದಿನ ಸಂಜೆ ಮತ್ತೆ ಇಲ್ಲಿಗೆ ಬಂದೆ. ಇಲ್ಲಿನ ವಿವಿ ಅತಿಥಿಗೃಹದಲ್ಲಿ ತಮ್ಮ ನಾಡು ದೇಶಗಳ ಬಗ್ಗೆ ಪರಿಚಯಿಸುವ ಸರಣಿಯಲ್ಲಿ ಈ ದಿನ ಸಂಜೆ ನನ್ನ ಸರದಿ. ನಾನು ಕರ್ನಾಟಕದ ಬಗ್ಗೆ ದೃಶ್ಯ ದಾಖಲೆಗಳೊಂದಿಗೆ ವಿವರಗಳನ್ನು ಕೊಟ್ಟೆ. ಅನೇಕ ದೇಶಗಳ ತಜ್ಞರು ಸಂಶೋಧಕರು ಸೇರಿದ್ದು, ಕರ್ನಾಟಕದ ಬಗ್ಗೆ ಆಸಕ್ತಿ ತಾಳಿದ್ದು ನನಗೆ ಸಂತಸ ತಂದಿತು. ಕರ್ನಾಟಕದ ಒಳಿತುಗಳ ಬಗ್ಗೆ ಮಾತ್ರ ಹೇಳಿದೆ. ನನ್ನ ನಾಡು ಜಾಗತಿಕವಾಗಿ ಮನ್ನಣೆ ಪಡೆದರೆ ಅದು ಹೆಮ್ಮೆಯ ಸಂಗತಿ. ನನ್ನ ಹೆಂಡತಿ ಕೋಕಿಲ ಮಾಡಿದ ಕರ್ನಾಟಕದ (ಮಂಗಳೂರಿನ)ಅಡುಗೆ, ನಮ್ಮಿಬ್ಬರ ಕರ್ನಾಟಕದ ಉಡುಗೆ ಎಲ್ಲರ ಗಮನ ಸೆಳೆಯಿತು. ಒಂದು ವಾರದ ಪ್ರಯಾಣದ ಆಯಾಸವನ್ನು ಮರೆಸಿತು.

ಹಂಬುರ್ಗಿನಲ್ಲಿ ಬೇಟಿಯಾದ ಮಂಗಳೂರಿನ ಇಂಜಿನಿಯರ್ ಮಂಜುನಾಥ್ ಕಾಮತ್ ಕುಟುಂಬ ,ಹಮ್ಬುರ್ಗ್ ಹೋಟೆಲಿನಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕರ್ನಾಟಕದ ಪ್ರವಾಸಿಗಳ ತಂಡ, ಬರ್ಲಿನ್ ನ ಸ್ಟೇಟ್ ಲೈಬ್ರೆರಿಯಲ್ಲಿ ನೋಡಿದ ಕನ್ನಡ ಹಸ್ತಪ್ರತಿಗಳ ಸೂಚಿ, ಬರ್ಲಿನ್ ನ ಬ್ರೆಕ್ಟ್ ರಂಗಮಂದಿರ ಬರ್ಲಿನೆರ್ ಎನ್ಸೆಮ್ಬಲ್ ನ ಸಂದರ್ಶಕರ ಪುಸ್ತಕದಲ್ಲಿ ಕನ್ನಡದಲ್ಲಿ ಮೆಚ್ಚುಗೆ ಬರೆದು ಸಹಿಹಾಕಿದ ಪ್ರಯೋಗ, ಬ್ರೆಕ್ಟ್ ನಾಟಕ ನೋಡಿದಾಗ ಕನ್ನಡದಲ್ಲಿನ ಬ್ರೆಕ್ಟ್ ನಾಟಕಗಳ {ತಾಯಿ, ಗೆಲಿಲಿಯೋ , ಮೂರು ಕಾಸಿನ ಸಂಗೀತ ನಾಟಕ ಇತ್ಯಾದಿ) ನೆನಪು..

ಲೋಹಿಯಾ ಕುರಿತು ಹುಮ್ಬೋಲ್ತ್ ವಿವಿಯ ಪತ್ರಾಗಾರದಲ್ಲಿ ಹಳೆಯ ಕಾಗದಪತ್ರ ನಿನ್ನೆ ನೋಡುತ್ತಿದ್ದಾಗ ನಾನು ಮೊದಲ ಬಾರಿ ಓದಿದ ಲೋಹಿಯಾ ಕನ್ನಡ ಅನುವಾದ ‘ರಾಜಕೀಯದ ನಡುವೆ ಬಿಡುವು’ (ಕೆ.ವಿ.ಸುಬ್ಬಣ್ಣ ) ಪುಸ್ತಕ -ನನ್ನ ‘ಕರ್ನಾಟಕ’ವನ್ನು ಮತ್ತೆ ಮತ್ತೆ ನೆನಪುಮಾಡಿ ಕೊಟ್ಟುವು. ಎಲ್ಲವೂ ನಾಸ್ತಾಲ್ಜಿಯವಾಗಿ ಮಾತ್ರ ಯಾಕೆ ಕಾಡುತ್ತವೆ -ಗೊತ್ತಾಗುತ್ತಿಲ್ಲ. ಸಮಕಾಲೀನ ಕರ್ನಾಟಕದ ಅಸ್ತಿತ್ವ ಮತ್ತು ಅನನ್ಯತೆ ಏನು ಎಂದು ಹೇಳಲು ಸಾಧ್ಯ ಆಗುತ್ತಿಲ್ಲ.

‍ಲೇಖಕರು G

16 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading