ಅರುಣ್ ಜೋಳದಕೂಡ್ಲಿಗಿ
ಇದೇ 9,10 ರಂದು ಕೇರಳ ಫೋಕ್ ಲೋರ್ ಅಕಾಡೆಮಿ ಮತ್ತು ಫೋಕ್ ಲೋರ್ ಫೆಲೋಸ್ ಸಂಯುಕ್ತವಾಗಿ `ಜಾನಪದದ ನೆಲೆಯಲ್ಲಿ ಜಾತ್ಯಾತೀತತೆಯ ಸ್ವರೂಪ’ ಎಂಬ ವಿಷಯದಲ್ಲಿ ಎರಡನೇ ದೇಸಿ ಸೆಮಿನಾರನ್ನು ಆಯೋಜಿಸಿತ್ತು. ಇದರ ಮೊದಲ ದಿನದ ರಾಷ್ಟ್ರೀಯ ಸೆಮಿನಾರಿನಲ್ಲಿ ಆಂದ್ರ, ಕೇರಳ, ತಮಿಳುನಾಡು, ಕರ್ನಾಟಕದ ನಾಲ್ಕು ರಾಜ್ಯಗಳಲ್ಲಿ ಜಾನಪದದ ನೆಲೆಯ ಜಾತ್ಯಾತೀತತೆಯ ಸ್ವರೂಪವನ್ನು ಹಂಚಿಕೊಂಡರು.
ವಿಶೇಷವೆಂದರೆ ಈ ಗೋಷ್ಠಿಯ ಪ್ರಧಾನ ಭಾಷಣ ಮಾಡಿದ್ದು ಕನ್ನಡದ ಮುಖ್ಯ ಜಾನಪದ ವಿದ್ವಾಂಸರಾದ ಪ್ರೊ.ಬಿ.ಎ. ವಿವೇಕ ರೈ ಅವರು. ರೈ ಅವರು ಕನ್ನಡದ ಮಲೆ ಮದೇಶ್ವರ, ಮಂಟೇಸ್ವಾಮಿ, ಸಿರಿ ಮುಂತಾದ ಮಹಾಕಾವ್ಯಗಳನ್ನು, ಇಲ್ಲಿನ ಆಚರಣ ಲೋಕವನ್ನೂ, ತುಳು ನಾಡಿದ ಬೊಬ್ಬರ್ಯ ಆರಾಧನೆಯನ್ನೂ ಒಳಗೊಂಡಂತೆ ಜಾನಪದದ ಜಾತ್ಯಾತೀತತೆಯ ನೆಲೆಯನ್ನು ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಟ್ಟರು. ಇದು ಕರ್ನಾಟಕದ ಸಾಂಸ್ಕೃತಿಕ ಲೋಕಗಳನ್ನು ವಿವರಿಸುತ್ತಲೇ ಭಾರತದ, ಅದರಲ್ಲೂ ದಕ್ಷಿಣ ಭಾರತದ ಜಾನಪದದ ಜಾತ್ಯಾತೀತ ನೆಲೆಗಳನ್ನು ಸೂಕ್ಷ್ಮವಾಗಿ ರೈ ವಿವರಿಸಿದರು.
ನಂತರ ನಾನು ಕರ್ನಾಟಕದ ಜಾನಪದದಲ್ಲಿ ಜಾತ್ಯಾತೀತತೆಯನ್ನು ಕರ್ನಾಟಕದ ಮೊಹರಂ ಆಚರಣೆಯನ್ನೂ, ಗ್ರಾಮದೇವತೆಗಳ ಜಾತ್ರೆಗಳನ್ನು, ಕರ್ನಾಟಕದ ಜನಪದ ಕಲೆಗಳು ಸೆಕ್ಯುಲರ್ ಆಗುತ್ತಿರುವುದನ್ನು ಬಹಳ ಮುಖ್ಯ ಸಂಗತಿಗಳ ಟಿಪ್ಪಣಿ ಮಂಡಿಸಿದೆ.
ಸಾಹಿತ್ಯ ಸಮ್ಮೇಳನ ನಡೆಯುವ ಇದೇ ದಿನ ಕೇರಳದಲ್ಲಿ ದೇಸಿ ಸೆಮಿನಾರಿನಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದ ವಿಶಿಷ್ಟತೆಗಳನ್ನು ಅನಾವರಣ ಮಾಡುತ್ತಾ ಕನ್ನಡದ ಕಂಪನ್ನು ಕೇರಳದ ನೆಲದಲ್ಲಿ ಬಿಂಬಿಸಿದಂತಿತ್ತು. ಆ ಕಾರಣಕ್ಕೆ ಖುಷಿಯೂ ಆಯಿತು.
0 ಪ್ರತಿಕ್ರಿಯೆಗಳು