ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ದ ಎಂದರೆ ಬಾಬಾ ಸಾಹೇಬರ ಮಾರ್ಗ…

ಮಹಾ ಕಾವ್ಯಗಳ ಚಲನೆಯೆಂದರೆ ….

ನಾಗರಾಜ್ ಹೆತ್ತೂರ್


ಬುದ್ದ
ಬಾಬಾ ಸಾಹೇಬರು ಪರಿಚಯಿಸಿದ ಗುರು
ಇತ್ತೀಚೆಗಷ್ಟೆ ನನಗೆ ಸಿಕ್ಕರು
ದೇವರಲ್ಲ , ಮತ್ತೇನು ಎನ್ನುವ ಹೊತ್ತಿಗೆ
ಜಗತ್ತಿನ ಮಹಾಕಾವ್ಯ, ಜ್ಷಾನ ವಿಜ್ಷಾನವೆಲ್ಲ
ಅವರ ಪಾದದ ಅಡಿಯಲ್ಲಿ ಬಿದ್ದಿದ್ದವು
 
ಬುದ್ದ ಎಂದರೆ ಬೆಳಕು
ಕಾಲೂನಿಯಲ್ಲಿ ಹಾಕಿರುವ ಅಂಬೇಡ್ಕರ್ ಬೋರ್ಡಿನ ಒಳಗಣ್ಣು
ಸಮಾನತೆಯ ಚಿಗುರು ಹುಡುಕುವ ದಲಿತ ಕೇರಿಗಳಲ್ಲೀಗ
ಜ್ಞಾನದ ಟಿಸಿಲೊಡೆದ ಬುದ್ದ-ಬಾಬಾ ಸಾಹೇಬರ ಅಸಂಖ್ಯಾತ ಕಣ್ಣುಗಳು
 
ಬುದ್ದ ಎಂದರೆ ಪ್ರಕೃತಿ
ಅನ್ನದ ಅಗುಳಿನ ಮೇಲೆ ಹೆಸರಿಲ್ಲವೆಂದು
ಹಸಿವನ್ನೇ ಹಾಡಾಗಿಸಿದ್ದ ಗುಬ್ಬಚ್ಚಿಗಳು
ಗೂಡನ್ನೆ ಬಯಲಂತೆ ಕಂಡು ಹಾರಿದವು, ಹಾರಾಡಿದವು
ಸಂವಿಧಾನದ ಮರದಲ್ಲಿ ಕುಳಿತು ನಕ್ಕವು
ಹೆಸರು ಯಾರಿಗೂ ಇಲ್ಲವೆಂದು ಕೆಲವು ಹಕ್ಕಿಗಳು
ಗರಿಬಿಚ್ಚಿ ಕುಣಿದವು,
ಬುದ್ದಂ ಸರಣಂ ಗಚ್ಛಾಮಿ ಎಂದು ಧ್ಯಾನಿಸಿದವು…
 
ಬುದ್ದ ಎಂದರೆ ಚಲನೆ
ದಿಕ್ಕು ದೆಸೆಯಿಲ್ಲದಿದ್ದಾಗ
ಆಕಾಶವೇ ಸ್ವಂತವಾಗಿ ಕಣ್ತುಂಬಿತ್ತು
ನಾಳೆಗಳ ಬಿಡುಗಡೆಗೆ ಮೈಯೆಲ್ಲ ಪರಿಮಳ
ನಿಂತ ನೆಲದಷ್ಟು ಸಂತ್ವಾನ, ನಿರುಮ್ಮಳ ನಡಿಗೆಯೀಗ
ಆದರೂ ಆಗಾಗ ಹಸಿವಿನ ಸದ್ದುಗಳು
ಭಯವಿಲ್ಲ, ಈಗ ನಮ್ಮೊಂದಿಗೆ ಬಾಬಾ ಸಾಹೇಬರಿದ್ದಾರೆ
ಗುರುವಾಗಿ ದಾರಿ ತೋರುವ ಬುದ್ದನಿದ್ದಾನೆ
`ಸಮ’ ಸಮಾಜದ ನಗು ಈಗ ನನ್ನ ಆಯುಧ
 
ಬುದ್ದ ನಗುವ ಮುನ್ನ
ಬಾಬಾ ಸಾಹೇಬರು ನಡೆವ ಮುನ್ನ
ಹೀಗೇ ಭವ್ಯ ಭಾರತಕ್ಕೆ ಎರಡು ಮಹಾಕಾವ್ಯಗಳಿವೆ
ಬುದ್ದ ನಕ್ಕು,ಸಾಹೇಬರು ನಡೆಯುತ್ತಾರೆ
ಮಹಾಕಾವ್ಯಗಳ ಚಲನೆಯೆಂದರೆ
ನನ್ನಂತಹವರ ಸ್ವತಂತ್ರತೆ
 
ಬುದ್ದ ಎಂದರೆ ಕರುಣೆ, ಮೈತ್ರಿ
ಕೈರ್ಲಾಂಜಿ, ಕಂಬಾಲಪಲ್ಲಿ ಯ
ಬೋರ್ಡುಗಳಲ್ಲಿ ಅಂಬೇಡ್ಕರ್ ಮಾತ್ರವೇ ಇದ್ದರು
ಕೊಂದ ನಿಮ್ಮಲ್ಲೇ ಬುದ್ದನನ್ನು ಹುಡುಕುತ್ತಿದ್ದೇವೆ
ಬೋಧಿ ವೃಕ್ಷ ದ ಅಡಿ ಅನಂತತೆಯ ಸುಖ ಕಾಣುತ್ತೇವೆ …..
ಬುದ್ದ ಎಂದರೆ ಬಾಬಾ ಸಾಹೇಬರ ಮಾರ್ಗ
 

‍ಲೇಖಕರು G

5 May, 2015

3 Comments

  1. Nagarajyk kamble

    Channagide sir

  2. suvarna.c

    ಚನ್ನಾಗಿದೆ ಕವನ

  3. Rohini Satya

    Kavana tumbaa chennaagide sir! Ijagala nijaa _nijavu , deha , dharmagaia daatidava ava!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading