ಸಂಧ್ಯಾರಾಣಿ
ನನಗೊಂದು ಆಸೆಯಿತ್ತು. ಅಜ್ಜ ಇದ್ದಾಗಲೇ ಸಾಧನಕೇರಿಗೆ ಹೆಜ್ಜೆ ಹಾಕಬೇಕು ಎಂದು. ‘ಜೇನು ತುಂಬಿ ತೊಟಗುಟ್ಟುತಾವ ಅದ ಬಯಸತಾವ ಕಣ್ಣು’ ಎನ್ನುವಂತೆ ಮನಸ್ಸು ಅದನ್ನು ಬಯಸಿತ್ತು. ಆದರೆ ‘ಸಖೀಗೀತ’ದ ಅಜ್ಜ ಮುಗಿಲಲ್ಲಿ ಹಾರುವ ಹಕ್ಕಿಯಾದರು. ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂದಾಗ ಮನಸ್ಸಿಗೆ ನೋವಾಗಿತ್ತು . ಅಜ್ಜ ಇಲ್ಲದ ಮನೆಗೆ, ಅಜ್ಜ ಇಲ್ಲದ ಸಾಧನಕೇರಿಗೆ ಬರಲು ಏನೋ ಅಳುಕು. ಆದರೂ ‘ಬಾರೋ ಸಾಧನಕೇರಿಗೆ..’ ಎಂದು ಪ್ರೀತಿಯಿಂದ ಕರೆದರೂ ಒಲ್ಲೆ ಎನ್ನಬಾರದು ಎನ್ನುವಂತೆ ನಾನು ಬಾಗಿಲು ತಟ್ಟಿಯೇ ಬಿಟ್ಟೆ
‘ಕುರುಡು ಕಾಂಚಾಣ’ದ ಕಾಲದಲ್ಲಿ ಸಖೀಗೀತಕ್ಕೆಲ್ಲಿ ನೆಲೆ ಎಂದೇ ಮನ ಹೊಯ್ದಾಡುತ್ತಿದ್ದಾಗ ಅಜ್ಜನ ಮುಗುಳು ನಗೆಯ ಚಿತ್ರ ಮತ್ತೆ ‘ಯಾರಿಗೂ ಹೇಳೋಣುಬೇಡ ಯಾರಿಗೂ..’ ಎನ್ನುವಂತೆ ಅಲ್ಲಿದ್ದ ನೆನಪುಗಳನ್ನೆಲ್ಲ ಆಯ್ದು ಹೂಮಾಲೆ ಕಟ್ಟಿಕೊಂಡು ಮುಡಿಗೇರಿಸಿಕೊಂಡಿತು.
ಅಜ್ಜ ಸಕ್ಕರೆ ನೀಡುತ್ತಿದ್ದರಂತೆ ಬಂದವರೆಲ್ಲರಿಗೂ.. ಇಲ್ಲವಾಯಿತಲ್ಲ ಎಂದುಕೊಂಡೆ ಅಷ್ಟೊತ್ತಿಗೆ ಮನೆಯೊಳಗೆ ಸದ್ದಾಯಿತು. ಸಕ್ಕರೆ ಬಂದೇ ಬಂತು. ಅಜ್ಜ ಅಲ್ಲದಿದ್ದರೂ ಅಜ್ಜನ ಭಾವ ಕೈ ದಾಟಿ ಬಂತು.
ಹೊರಗೆ ಬಂದಾಗ ಅರೆ! ಅಜ್ಜನ ಮನೆ ಅಂಗಳದಲ್ಲಿ ಎಷ್ಟೊಂದು ಹೆಜ್ಜೆಗಳು. ಪುಟ್ಟ ಪುಟಾಣಿಗಳ ಕಲರವ. ನಾಳೆ ಯಾರಿಗೂ ಇಲ್ಲ ಎನ್ನುವ ಮಾತನ್ನು ಸುಳ್ಳು ಮಾಡಿತ್ತು. ಅಜ್ಜ ಸಿಗೋಣು..ಎಂದು ಹೇಳಿ ಹೊರಗೆ ಹೆಜ್ಜೆ ಹಾಕಿದೆ. ಈಗ ನನ್ನ ಮನದಲ್ಲಿ ‘ಮರಳು ಮಾಡಾಕ ಹೋಗಿ/ ಮರಳುಸಿದ್ಧನ ನಾರಿ/ ಮರುಳಾಗ್ಯಾಳೋ ಜಂಗಮಯ್ಯಗ..’ ಎನ್ನುವಂತೆ ಆಗಿದೆ. ಆ ಜಂಗಮಯ್ಯ ಬೇಂದ್ರೆಯೇ ಏನು..??
0 ಪ್ರತಿಕ್ರಿಯೆಗಳು