ಸ್ಮಿತಾ ಅಮೃತರಾಜ್, ಸಂಪಾಜೆ
ಯಾರದ್ದು ಎಷ್ಟೆಷ್ಟೋ..
ತುಂಬಿಕೊಂಡ ಮೌನದ ಭಾರಕ್ಕೆ ಮುಗಿಲು
ಏದುಸಿರು ಬಿಡುತ್ತಾ ತೇಕುತ್ತಿದೆ.
ಗತದ ಬಂಡೆಯ ಹೊರಲಾರದೆ
ಗುಡುಗುಡು ದುಮ್ಮಾನ ದುಡು ದುಡೂ ಉರುಳಿ
ಶಬ್ದ ಸ್ಫೋಟಗೊಳ್ಳುತ್ತಿದೆ.
ತಟ್ಟನೆ ನೆತ್ತಿ ಮೇಲೆ ಉದುರಿ ಬಿದ್ದದ್ದು
ಹನಿಬಿಂದು.
ಕಣ್ಣು ತಂಪಾಗಿ, ಕಿವಿಗೆ ಇಂಪಾಗಿ
ಒಳಗೊಂದು ನದಿಯ ಹರಿವು
ಎದೆ ದಡ ಕಾಣದ ಕಡಲು.
ಬೆಟ್ಟ ದುಗುಡ ಮಿದುವಾಗಿ
ಅಲ್ಲಿದ್ದು-ಇಲ್ಲಿಗೆ,ಇಲ್ಲಿದ್ದು-ಅಲ್ಲಿಗೆ
ಚದುರಿ ಚೆಲ್ಲಾಪಿಲ್ಲಿಯಾಗಿ
ನವಿಲು ರೆಕ್ಕೆ ಬಿಚ್ಚಿ, ಮುಂಗಾರು ಹಿಂಗಾರು
ಸ್ವಾತಿ ಮುತ್ತಾಗಿ ತಟ ತಟಾ ತೊಟ್ಟಿಕುತ್ತಿದೆ.
ಎಲ್ಲಿತ್ತೋ? ರಕ್ತ ಕೆಂಪು,ಕಡುಕಪ್ಪು
ನಾರುವ ಕಸ ಕಡ್ಡಿ ಬಗ್ಗಡ
ಕೊಳೆ ತೊಳೆದು ಹದ ನೆಲ
ಮನ ತಿಳಿ ತೊರೆ.
ನೆಲ ನಕ್ಕು ಹಸುರುಕ್ಕಿ, ತೆರೆಸರಿದು
ಪುಳಕಗೊಂಡು ಜೀವನಾಡಿ ಮಿಡಿಯುವಾಗ
ತೂಗಿ ತೊನೆದದ್ದು ತೆನೆ.
ಒಳ ಒತ್ತಡಕ್ಕೆ ಸ್ಫೋಟ ಅಸಹಜವೇನಲ್ಲ
ಬೆಂಕಿ ಲಾವಾರಸ, ಚಿಲುಮೆ ನೀರು ಕಾರಂಜಿ
ಅವರವರ ಹಿಡಿ ಹೃದಯದೊಳಗಿನ ತೀವ್ರತೆಗೆ
ರೂಪಾಂತರ ಪ್ರಕ್ರಿಯೆ ಅಂತಹ ಅಸಾಧ್ಯವೇನಲ್ಲ.
ಅದೋ… ಧೋ… ಧೋ… ಕಲ್ಲುನೋವು
ಆಲಿಕಲ್ಲಾಗಿ ಹನಿಯುತ್ತಿದೆ.
ಜೀವನದಿಯಾಗಿ ತೊಟ್ಟಿಲಾಗಿ ಪೊರೆಯುತ್ತಿದೆ.
ಬಹಳ ಚೆನ್ನಾಗಿದೆ ಸ್ಮಿತಾ… ಮಳೆ – ಮೋಡ, ಭಾವನೆಗಳ ಸಮೀಕರಣ ಕವನ ತುಂಬಾ ಹಿಡಿಸಿತು.
All the best
Nice
ನಿಸರ್ಗದ ಹೊಡೆತಕ್ಕೆ ಮನುಕುಲದ ತಲ್ಲಣಗಳನ್ನು ಮನಮುಟ್ಟುವಂತೆ ಕಟ್ಟಿ ಕೊಟ್ಟಿರುವಿರಿ….
ಕವಿತೆ ಚಂದ ಅದ್ಭುತ ಎಂದರೆ ಅದು ಕಾವ್ಯದ ಕಟ್ಟುವಿಕೆಗೆ ಮಾತ್ರ ಸೀಮಿತ ಆದರೆ ವಿಷಯ ವಸ್ತು ಈ ಮೇಲಿನ ,’ಚಂದ ಅದ್ಭುತ’ಗಳನ್ನು ಕಾಮೆಂಟಿಸಲು ಮನಸು ಒಪ್ಪುತ್ತಿಲ್ಲ…
ಮಡಿಕೇರಿ ಭಾಗ ಕಳೆದೆರಡು ವರ್ಷಗಳಿಂದ ಪದೇ ಪದೇ ನಿಸರ್ಗದ ಹೊಡೆತಕ್ಕೆ ನಲುಗಿ ಹೋಗಿದೆ ಅಲ್ಲಿನ ಬೆಳೆ ನಾಶ ಜೊತೆಗೇ ಬದುಕು ನಾಶವಾಗುವ ಹಂತಕ್ಕೆ ತಲುಪಿರುವುದು ನಮಗೆಲ್ಲ ಬೇಸರದ ಸಂಗತಿ.