ಗಾಂಧಿ (ಅತಿ ಸಣ್ಣ ಕತೆ)
ಸವಿತಾ ನಾಗಭೂಷಣ
ಇದೊಂದು ಹಳೆಯ ಕತೆ. ಮಂಗಳೂರಿಗೆ ಗಾಂಧಿ ಬಂದಾಗ ಹದಿ ಹರೆಯದ ಹುಡುಗಿ ಗುಲಾಬಿ ಗಾಂಧಿಯನ್ನು ನೋಡಲು ದೇಯಿಯನ್ನು ಜತೆಗೆ ಕರೆದುಕೊಂಡು ಹೋಗುವಳು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧಿ ‘ಸ್ವರಾಜ್ಯ ಪಡೆಯಲು ಕೈಜೋಡಿಸಿ ‘ ಎಂದು ಎಲ್ಲರಿಗೆ ಮನವಿಮಾಡಿ ಅನುಕೂಲಸ್ತರು ಹಣ ಒಡವೆ ವಸ್ತು ನೀಡಬಹುದು ಅದು ಸದ್ವಿನಿಯೋಗ ಆಗುವುದು ಎನ್ನುವರು.
ಗಾಂಧಿಯಿಂದ ಪ್ರಭಾವಿತಳಾದ ಗುಲಾಬಿ ತನ್ನ ಕುತ್ತಿಗೆಯಲ್ಲಿದ್ದ ಸರ ಕೈ ಬಳೆ ಬಿಚ್ಚಿ ಗಾಂಧಿಗೆ ನೀಡುವಳು. ಒಡತಿಯನ್ನೇ ಅನುಕರಿಸಿ ಅವಳ ಮನೆಯ ಅಡಿಗೆಯವಳಾದ ದೇಯಿ ತನ್ನ ಕಿವಿಯೋಲೆ ಬಿಚ್ಚಿ ಗಾಂಧಿಗೆ ನೀಡುವಳು.
ಗಾಬರಿಯಾದ ಗುಲಾಬಿ ಅಯ್ಯೋ ನಿನ್ನ ಬಳಿ ಇದ್ದದೊಂದೇ ಒಡವೆ ನೀನೇಕೆ ನೀಡಿದೆ ನಿನಗೆ ಆಪತ್ಕಾಲಕ್ಕೆ ಆಗುತಿತ್ತು ಎನ್ನುವಳು.’ ಕೊಡಬೇಕು ಅಂತ ಮನಸ್ಸಿಗೆ ಬಂತು ಕೊಟ್ಟೆ ‘ಎಂದು ದೇಯಿ ನುಡಿವಳು.
ಅದಾದ 27 ವರುಷಗಳ ವರ್ಷಗಳ ಬಳಿಕ ದೇಶಕ್ಕೆ ಸ್ವತಂತ್ರ ವಾಯಿತು ಎಂದು ಸುದ್ದಿ ಬಂದಾಗ ಗುಲಾಬಿ ಹೇಳದಿದ್ದರೂ ದೇಯಿ ತಾನೇ ಮುಂದಾಗಿ ಸಡಗರದಿಂದ ಪಾಯಸ ಮಾಡಿ ಗುಲಾಬಿಗೆ ಬಡಿಸುವಳು.
ಅಷ್ಟೇ ಅಲ್ಲ ಗುಲಾಬಿಗೆ ಅಂದು ಗಾಂಧಿಗೆ
ಒಡವೆ ಕೊಟ್ಟದ್ದನ್ನು ನೆನಪಿಸಿ ‘ ಓಲೆ ಕೊಟ್ಟದ್ದು ಸಾರ್ಥಕವಾಯಿತು…. ಆ ಮುದುಕ ಸ್ವಾತಂತ್ರ್ಯ ತಂದು ಕೂಟ್ಟ ಮೋಸ ಮಾಡಲಿಲ್ಲ ಮಾತು ತಪ್ಪಲಿಲ್ಲ…’ ಎಂದು ನುಡಿವಳು. ದೇಯಿಯ ಹಣ್ಣಾದ ತಲೆಗೂದಲು ಬೊಚ್ಚು ಬಾಯಿ ನೋಡುತ್ತಾ…. ಗುಲಾಬಿ ‘ಅಬ್ಬಾ ನಿನ್ನ ನೆನಪೇ.’…ಎಂದು ಬೆರಗಾಗುವಳು..
0 ಪ್ರತಿಕ್ರಿಯೆಗಳು