ಬೆಂಗಳೂರು ಆರ್ಟ್ ಫೌಂಡೇಷನ್ ನೀಡುವ
2015ರ ಕಲಾಧ್ಯಾನ್ ಪ್ರಶಸ್ತಿ ಪುರಸ್ಕೃತರು
ಸಿ ವಿ ಅಂಬಾಜಿ
ಕಲೆ ಸೃಷ್ಠಿಸುವ ಭ್ರಮಾತ್ಕಕ ಲೋಕದೊಳಗೆ ಇದ್ದು ವಾಸ್ತವತೆಯ ಅಂಚಿನಲ್ಲಿ ಜೀವಿಸುವ, ತನ್ನ ಬೃಹತ್ ಕಲಾಕೃತಿಗಳ ಮೂಲಕ ಭಾರತೀಯ ಕಲಾಲೋಕದೊಳಗೆ ಒಂದು ಅಪರೂಪದ ಮಹತ್ವದ ಸ್ಥಾನ ಉಳಿಸಿಕೊಂಡಿರುವರು. ಹಸಿವಿನ ಜಾಡಿನಲ್ಲೇ ಹೆಜ್ಜೆ ಇಡುತ್ತಾ ನೋಡುಗರ ದೃಷ್ಟಿಸುಖವನ್ನು ಹೆಚ್ಚಿಸಿದವರು. ಈ ಮಧ್ಯೆ ತಮ್ಮದೇ ಕಲ್ಪನೆಗಳು ಬೃಹತ್ ಸೃಷ್ಟಿಗಳ ಕಾಲಬುಡದಲ್ಲಿ ಚಿಗುರುವುದನ್ನು ಅರಿತು ಸ್ವಯಂ ಕಲಾಕೃತಿಗಳ ಧ್ಯಾನಸ್ಥ ಸ್ಥಿತಿಗೆ ಮರಳಿರುವುದನ್ನು ಇವರನ್ನು ಬಲ್ಲವರು ಅರಿತಿದ್ದಾರೆ. ಇವರೇ ಹೈದರಾಬಾದಿನ ಚಿತ್ಯಾಲ ವಿನೋಬ ಅಂಬಾಜಿ. ಇವರ ತಾಯಿಯ ಚಿತ್ರಣವಂತೂ ಅಂಬಾಜಿ ಅವರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿ ನಿಲ್ಲುವಂತಹುದು. ಸೋನಿಯಾಗಾಂಧಿ ಅವರಂತಹ ದೊಡ್ಡವ್ಯಕ್ತಿಗಳು ಕೂಡಾ ಅಂಬಾಜಿ ಅವರಿಗಾಗಿ ಕಾಯುತ್ತಿದ್ದಾರೆಂದರೆ ಇವರ ಕಲಾನಿಪುಣತೆಯ ಅರಿವು ಗೊತ್ತಾಗಬಹುದು. ಇವರ ನೂರಾರು ಕಲಾಕೃತಿಗಳು ದೇಶ-ವೀದೇಶಗಳ ಸಂಗ್ರದಲ್ಲಿರುವುದು ಇವರ ಎತ್ತರವನ್ನು ಸೂಚಿಸುತ್ತದೆ.
ಕೆ ವಿ ಸುಬ್ರಹ್ಮಣ್ಯಂ
ಬಣ್ಣ-ರೇಖೆಗಳ ಅಂಗಳದ ಕಲಾವಿದರ ಕಲಾಕೃತಿಗಳನ್ನು ಅತಿರೇಖವಿಲ್ಲದೆ ವಿವರಿಸುವ ಜಾಣ್ಮೆ ಇವರ ಪ್ರಮುಖ ವೈಶಿಷ್ಟಗಳಲ್ಲೊಂದು. ಪಶ್ಚಿಮದ ವಿಮರ್ಶಾ ನೆಲೆಯಿಂದ ಬಿಡುಗಡೆಗೊಳಿಸಿ, ಕನ್ನಡದ ನೆಲಕೊಗ್ಗುವಂತೆ ನೋಟದಿಂದ ಕಂಡ ಕಾಣ್ಕೆಯನ್ನು ಬರವಣಿಗೆಯ ಮೂಲಕ ವಿಸ್ತರಿಸಿದವರು. ಯಾವುದೇ ಕಲಾಪ್ರಕಾರಗಳಿದ್ದರೂ ಸಂಯಮದ ನಿರೂಪಣೆಯಿಂದ ಕಲಾಸಕ್ತರ ದಾಹಕ್ಕೆ ನೀರಾದವರು. ಕನರ್ಾಟಕದ ಕಲಾ ಚಳುವಳಿಯ ಜೊತೆಗೆ ಬಣ್ಣದ ನಂಟಿನೊಂದಿಗೆ ಅಕ್ಷರದ ನಂಟನ್ನು ಬಲಪಡಿಸಿ, ಬರವಣಿಗೆಯ ಬವಣೆಯನ್ನು ನೀಗಿಸಿದವರಲ್ಲಿ ಪ್ರಮುಖ ಕಲಾವಿಮರ್ಶಕರಿವರು. ಕಲಾಕೃತಿಗಳ ಒಳಮೌನದಂತೆ, ಪ್ರವಾದಿಯಂತೆ, ನಮ್ಮ ನಡುವಿನ ಅನುಭಾವದ ರಂಗನ್ನು ಹರಡಿದವರು. ಕಲೆ, ಕಲಾವಿದ, ಜನ ಸಮೂಹದ ಸೇತುವೆಯ ಕೊಂಡಿಯಂತೆ ಇವರು ನಿರ್ವಹಿಸುವ ಕಾರ್ಯಕ್ಷೇತ್ರ ಕಲಾಲೋಕಕ್ಕೆ ಪ್ರಶ್ನಾತೀತವಾದದ್ದು.
ಎಚ್.ಕೆ. ದ್ವಾರಕನಾಥ್
ರಂಗಾಯಣದ ದ್ವಾರ್ಕಿ ಎಂದೇ ಕರೆಯಲ್ಪಡುವ ಈ ಕಲಾವಿದ ತನ್ನ ಕಾರ್ಯಕ್ಷೇತ್ರವನ್ನು ರಂಗಭೂಮಿಗೆ ಮೀಸಲಿಟ್ಟಿರುವರು. ತಮ್ಮ ಅಗಾಧ ಯೋಚನೆಗಳನ್ನೆಲ್ಲ ರಂಗಕೃತಿಗಳ ಒಡಲಲ್ಲಿ ಗರ್ಭಧರಿಸುವಂತೆ ಮಾಡುತ್ತಾ ರೆಕ್ಕೆ ಬಿಚ್ಚುವ ವಿಸ್ಮಯಕ್ಕೆ ನಮ್ಮನ್ನೆಲ್ಲ ಕಾತರಿಸುವಂತೆ ಮಾಡುವುದು ದ್ವಾರಕನಾಥರ ವಿಶೇಷಗಳಲ್ಲೊಂದು. ರಂಗಾಯಣದ ವಿನ್ಯಾಸಕಾರರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸದಾ ಚಲನಶೀಲ ವ್ಯಕ್ತಿ. ರಂಗಕ್ಕೆ ರೂಪಿಸುವ ಕಲಾಸೃಷ್ಠಿ ಗಳೆಲ್ಲವುಗಳು ಇನಸ್ಟಾಲೇಷನ್ ಮಾದರಿಗಳಂತಿವೆ. ಸಧ್ಯದ ತಾಜಾ ಉದಾಹರಣೆ `ಮಲೆಗಳಲ್ಲಿ ಮದುಮಗಳು’ ನಾಟಕದ ವಿನ್ಯಾಸ. ಒಂದು ಕಲಾ ಪ್ರಕಾರ ಇನ್ನೊಂದರೊಂದಿಗಿನ ಸಮನ್ವಯತೆ ಈ ಸಂದರ್ಭದ ಜರೂರುಗಳಲ್ಲೊಂದು. ರಂಗದಂಗಳ ಸೃಷ್ಠಿಸುವ ಕಥನದ ಉಸಿರಾಟದಲ್ಲಿ ಚಿತ್ರ-ಶಿಲ್ಪದ ಬೆನ್ನುಹತ್ತಿ ವಿಸ್ಮಯದ ಲೋಕವೊಂದನ್ನು ಸೃಷ್ಠಿಸಿ ಕತ್ತಲ್ಲಲ್ಲಿ ಲೀನವಾಗಿಬಿಡುವ, ಮನದೊಡಲ ಬಿತ್ತಿಗಳನ್ನು ಅಚ್ಚಳಿಯದೇ ಉಳಿಸುವ ಕಲಾವಿದರಿವರು.
0 ಪ್ರತಿಕ್ರಿಯೆಗಳು