ಜಯರಾಮಾಚಾರಿ
**
“ಮೋಹನ ಎಲ್ಲಿ?”
ಎರಡು ವರ್ಷಗಳ ಹಿಂದೆ ನಡೆದ ಚಿತ್ರೋತ್ಸವದಲ್ಲಿ ಒಂದು ವಿಚಿತ್ರ ಅನುಭವಕ್ಕೆ ಸಾಕ್ಷಿಯಾಗಿದ್ದ ಮೋಹನ ಈ ಸಲ ಎಲ್ಲೂ ಕಾಣಲಿಲ್ಲ.
ಫೇಸ್ಬುಕ್ಕಲ್ಲಿ ಭಯಂಕರ ಸಕ್ರಿಯನಾಗಿದ್ದ ಮೋಹನ ಎರಡು ವರ್ಷಗಳ ಹಿಂದೆ ನಾನು ಯಾವುದೋ ಸಿನಿಮಾ ನೋಡಲು ಕ್ಯೂನಲ್ಲಿ ಕಾಯುತ್ತಿದ್ದಾಗ ಅಲ್ಲಿ ಅವನೂ ಇದ್ದ, ಫೇಸ್ಬುಕ್ಕಲ್ಲಿ ಹೇಳ್ಕಳಕ್ಕೆ ಫ್ರೆಂಡು, ಅವನು ಅಲ್ಲಿ ಬರುವ ಅವನ ಫೇಸ್ಬುಕ್ ಸಿನಿಮಾಸಕ್ತ ಗೆಳೆಯರನ್ನ ನೋಡಿದ ಕೂಡಲೇ “ಓ ನೀವು ಇವರಲ್ವ? ಓ ನೀವು ಅವರಲ್ವ?” ಎಂದು ಗುರುತು ಹಿಡಿದು ಮಾತಾಡಿಸಿದಾಗ ಅವರೆಲ್ಲ ಅವನನ್ನು ನೋಡಿ ನೋಡದೆಯೂ ಮಾತಾಡದೆಯೂ ಹೋಗಿಬಿಡುತ್ತಿದ್ದರು.
ವರ್ಚುಯಲ್ ಗೆಳೆಯರು ರಿಯಲ್ ಅಲ್ಲ ಎಂದು ನಿರೂಪಿಸಿದವನು ಅವನು
ಈ ಸಲ ಅವನಿದ್ದಾನ ನೋಡುತ್ತಿದ್ದೆ. ಸಿಗಲೇ ಇಲ್ಲ
—
ಪರಮಾತ್ಮ ನಿಲ್ಲುವ ಅವಶ್ಯವಿಲ್ಲ
ಈ ಸಲ ರಾಷ್ಟ್ರಗೀತೆ ಆರಂಭದಲ್ಲಿ ಹಾಕುತ್ತಿಲ್ಲ. ಅಯ್ಯೊ ನಿಲ್ಲಬೇಕಲ್ಲ, ಯಾಕ್ ನಿಲ್ಲಬೇಕು ಎಂದೆಲ್ಲ ಒದ್ದಾಡುತ್ತಿದ್ದವರು ನಿರಾಳ.
ಒಂದು ವರ್ಷದ ಫೆಸ್ಟಿವಲ್ ಅಲ್ಲಿ ಇದಕ್ಕಾಗಿಯೇ ದೊಡ್ಡ ಗಲಾಟೆಯಾಗಿತ್ತು. ಆಗ ಮಧ್ಯದಲ್ಲೊಬ್ಬ ಬಂದು “ರೀ ನಾನು ಬಿಯರ್ ಕುಡಿದು ಬಂದಿರ್ತೀನಿ ನಿಂತ್ಕಳಿ ಅಂದ್ರೆ ಹೆಂಗ್ ನಿಂತ್ಕಳಿ ಅಂತಿದ್ದ”
ಆ ಪರಮಾತ್ಮನನ್ನು ಇವತ್ತು ನೋಡಿದೆ. ಎಸ್ಕಲೇಟರಲ್ಲಿ ಮೇಲೇರುತ್ತಿದ್ದ ಪಕ್ಕದವನಿಗೆ ಮಿಸ್ ಮಾಡಬೇಡ ಎಂದು ಕೆನ್ ಲೋಚ್ ಸಿನಿಮಾ ಬಗ್ಗೆ ಹೇಳುತ್ತಿದ್ದ
—
ಅಕಾಲದಲ್ಲಿ ಸುರಿದ ಮಳೆಯ ಆಲಿಕಲ್ಲು-
ಫೆಸ್ಟಿವಲ್ ಮೂಲಕ ಅರಳುವ ಪ್ರೀತಿಗಳೆಲ್ಲ ಸಂಬಂಧಗಳೆಲ್ಲ ಅಕಾಲದಲ್ಲು ಉದುರಿದ ಆಲಿಕಲ್ಲು ತರ. ಹೋದ ಸಲ ಸಿಕ್ಕಿ ಪರಿಚಯವಾಗಿ ಆ ಸ್ಕ್ರೀನ್ ಹೋಗೋಣ ಈ ಸ್ಕ್ರೀನ್ ಗೆ ಕೈ ಕೈ ಹಿಡಿದು ಹೋಗುತ್ತಿದ್ದ ಪ್ರೀತಿಯ ಪಾರಿವಾಳಗಳು ಈ ಸಲ ಗೊತ್ತೇ ಇಲ್ಲದಂತೆ ಡವ್ ಮಾಡುವುದು ನೋಡಿ ಕರುಳು ಹಿಂಡೋಯ್ತು.
ಪಾಪ ಗಂಡ್ ಪಾರಿವಾಳದ ಪಾಡು ‘ಪ್ರೀತಿಯ ಪಾರಿವಾಳ ಹಾರಿಹೋತೋ ಗೆಳೆಯ..’
—
ಸೆವೆನ್ ವಿಂಟರ್ಸ್ ಇನ್ ಟೆಹ್ರಾನ್ ~
ಟೆಹ್ರಾನಿನ 19 ವರ್ಷದ ರೇಹಾನಿ ಹುಡುಗಿಗೆ ಒಂದು ಮಧ್ಯಾಹ್ನ ಡಾ.ಸರಬದಿ ಎಂಬುವವರಿಂದ ಕ್ಲೈಂಟ್ ಮೀಟಿಂಗ್ ಬರುತ್ತದೆ, ಅಲ್ಲಿಗೆ ಹೋದ ರೇಹಾನಿ ಮೇಲೆ ಅತ್ಯಾಚಾರದ ಪ್ರಯತ್ನ ನಡೆಯುತ್ತದೆ, ಧೈರ್ಯಗಾರ್ತಿ ರೇಹಾನಿ ಅತ್ಯಾಚಾರ ಮಾಡಲು ಬಂದವನಿಗೆ ತನ್ನನ್ನು ರಕ್ಷಿಸಿಕೊಳ್ಳಲು ಚಾಕುವಿನಿಂದ ಚುಚ್ಚುತ್ತಾಳೆ.
ಹಾಗೇ ಸತ್ತವನ ಕುಟುಂಬ ಪ್ರಭಾವಶಾಲಿ, ಮರುದಿನ ರೇಹಾನಿಯ ಬಂಧನವಾಗುತ್ತದೆ, ರಾಜಕೀಯ, ಪ್ರಭಾವಶಾಲಿ ವಲಯ, ಭ್ರಷ್ಟಾಚಾರದಿಂದಾಗಿ ರೇಹಾನಿ ಏಳು ವರ್ಷ ಜೈಲಿನಲ್ಲಿರುತ್ತಾಳೆ, ರೇಹಾನಿಯ ಮನೆಯವರು ಅವಳ ಬಿಡುಗಡೆಗಾಗಿ ಎಷ್ಟೆಲ್ಲ ಒದ್ದಾಡಿ ಹೋಗುತ್ತಾರೆ, ಸತ್ತವನ ಮಗನನನ್ನು ಬೇಡಿಕೊಳ್ಳುತ್ತಾರೆ, ನಮ್ಮಪ್ಪ ರೇಪ್ ಮಾಡಲು ಹೋಗಿಲ್ಲ ಎಂದು ಬರೆದುಕೊಡಿ ಎನ್ನುತ್ತಾನೆ, ಕೊನೆಕೊನೆಗೆ ಎಲ್ಲರೂ ಮೆತ್ತಗಾದರೂ ರೇಹಾನಿ ಮಾತ್ರ ಅದಕ್ಕೆ ಒಪ್ಪುವುದಿಲ್ಲ. ಕೊನೆಗೆ ಅವಳನ್ನು ಗಲ್ಲಿಗೇರಿಸಲಾಗುತ್ತದೆ.
ರೇಹಾನಿ ಅಮ್ಮ ಮತ್ತು ತಂಗಿ ಇರಾನಿನಿಂದ ತಲೆಮರೆಸಿಕೊಂಡು ಎಸ್ಕೇಪು ಆಗಿ ಜರ್ಮನ್ ತಲುಪಿ ಅಲ್ಲೇ ನೆಲಸಿ, ಇರಾನಿನನಲ್ಲಿ ಪ್ರತಿ ವರ್ಷ ನಿರಪರಾಧಿಗಳಾಗಿದ್ದರೂ ಅಪರಾಧಿಯಂತೆ ಜೈಲಲ್ಲಿ ಕೊಳೆಯುತ್ತಿರುವವರ ಬಿಡುಗಡೆಗೆ ದುಡಿಯುತ್ತಿದ್ದಾರೆ, ರೇಹಾನಿ ಅಪ್ಪನಿಗೆ ಇನ್ನೂ ಪಾಸ್ ಪೋರ್ಟ್ ಸರ್ಕಾರ ಕೊಟ್ಟಿಲ್ಲ.
ರೇಹಾನಿ ಮನೆಯವರು ಸ್ವತಃ ಮಾಡಿರುವ ಫೂಟೇಜು ಮತ್ತು ರೇಹಾನಿ ಬರೆದ ಪತ್ರಗಳ ಮೂಲಕ ಎದೆಯೊಳಗೆ ಇಳಿದು ಉಳಿದುಬಿಡುವ ಡಾಕ್ಯುಮೆಂಟರಿ.
ಮಿಸ್ ಮಾಡಿಕೊಳ್ಳಲೇಬೇಡಿ.
0 ಪ್ರತಿಕ್ರಿಯೆಗಳು