ಸದಾಶಿವ್ ಸೊರಟೂರು
ಕನ್ನಡಿಗನಾಗಿ ಕನ್ನಡಿಗನ ಬಳಿ
ಕನ್ನಡದಲ್ಲೇ ಮಾತನಾಡದ
ನಿರಾಭಿಮಾನಿಯನ್ನು ಕಂಡರೂ
ನಿಜ
ನಾನು ಕನ್ನೆಗೆ ಬಾರಿಸಲಾರೆ..
ನಾಡ ನೆಲ-ಜಲ ಹೀರಿ
ಬೆಳೆದ ಹೊಟ್ಟೆಬಾಕನ
ನಾಡದ್ರೋಹ ಕಂಡರೂ
ನಿಜ
ನಾನು ಕೆನ್ನೆಗೆ ಬಾರಿಸಲಾರೆ..
ಯರಲವ ಕಲಿಸಿದವರನ್ನೆ
ಯಾರ್ಲಾ ಅಂವಾ
ಅನ್ನುವ ಅಕ್ಷರದ್ರೋಹಿ ಕಂಡರೂ
ನಿಜ
ನಾನು ಕೆನ್ನೆಗೆ ಬಾರಿಸಲಾರೆ..
ಕನ್ನಡವನ್ನು ಬದಿಗೆ ತಳ್ಳಿ
ಅನ್ಯಭಾಷೆ ಹೇರುವ
ದಬ್ಬಾಳಿಕೆಯ ಮನಸುಗಳಿದ್ದರೂ
ನಿಜ
ನಾನು ಕೆನ್ನೆಗೆ ಬಾರಿಸಲಾರೆ..
ಒಂದು ನಾಡು ಒಂದು ಭಾಷೆ
ಒಂದುಗೂಡಿ ಬಾಳುವಾಸೆಗೆ
ಕಡ್ಡಿ ಆಡಿಸುವವರ ಕಂಡರೂ
ನಿಜ
ನಾನು ಕೆನ್ನೆಗೆ ಬಾರಿಸಲಾರೆ..
ನನ್ನ ಮೂರ್ಖತನಕ್ಕೆರಡೇಟು
ಬೀಳುವವರೆಗೂ
ನಿಜ
ನಾನು ಕೆನ್ನೆಗೆ ಬಾರಿಸಲಾರೆ..
0 ಪ್ರತಿಕ್ರಿಯೆಗಳು