ಕಾಂಕ್ರೀಟ್ ಕಾಡಿನಲಿ ಒಂದು ಮರ
ಆರೀಫ಼್ ರಾಜ
ನಿದ್ರೆಯಲಿ ಚಲಿಸುವ ಮರ
ರಾತ್ರಿಯಿಡೀ ಸಂಚರಿಸಿ
ಸ್ವಸ್ಥಾನಕ್ಕೆ ಬಂದು ನಿಂತಿದೆ
ಇಡೀ ರಾತ್ರಿ ಅಲುಗದೆ
ಯಾವ ಜ್ಞಾನೋದಯಕ್ಕಾಗಿ ಕಾಯುತ್ತದೆ
ಕೆಲವೊಮ್ಮೆ ಬೇರುಗಳ ಇಳಿಬಿಟ್ಟು
ಮರಕ್ಕೆ ಬೀಳುವ ಕನಸು
ಎರಡು ರೀತಿ
ಹಣ್ಣಿನಲಿ ಮೂಡಿ ಸಿಹಿಯಾಗುವ
ಎಲೆಗಳಲಿ ಚಿಗುರಿ ಉದುರಿಹೋಗುವ
ಆದರೂ ತುರ್ತುಗಾಲದಲಿ
ಲೋಹದ ಹಕ್ಕಿಗಳು ತತ್ತಿ ಇಡುವ
ದು:ಸ್ವಪ್ನ ಕಂಡ ಮರ
ಇಡೀ ರಾತ್ರಿ
ಎಲೆಗಳಲ್ಲಿ ಕನವರಿಸುತ್ತದೆ
ಮತ್ತೇ ದೂರದಲ್ಲೆಲ್ಲೋ
ಗರಗಸದ ಸದ್ದು ಕೇಳಿಸುತ್ತದೆ
ನಿಂತಲ್ಲೇ ಮರ ನಡುಗುತ್ತದೆ
ಮೊದಲ ಸಲ ಹೂಬಿಟ್ಟಾಗ ಮರ
ಮಳ್ಳಿಹಾಗೆ ನಾಚಿಕೊಂಡಿದ್ದಿರಬಹುದು
ಏಕೆಂದರೆ
ಹೋದ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿದವರು
ಈ ಜನ್ಮದಲಿ ಮರವಾಗಿ ಬರುತ್ತಾರಂತೆ
ಕಾಡಿನಿಂದ ತಪ್ಪಿಸಿಕೊಂಡು ಬಂದ ಮರ
ಈ ಲೋಕದ ಕೊನೆಯ ಮರ
ಕರೆಯುತ್ತದೆ:
ಯಾವ ಹಕ್ಕಿಗಳೂ ಹತ್ತಿರ ಬರುತ್ತಿಲ್ಲ !
ಕಾಡು ಬೆಟ್ಟ ನದಿ ಸಮುದ್ರ
ಮಳೆ ಗಾಳಿ ಆಕಾಶ ಹಕ್ಕಿಗಳನ್ನು ಕಳೆದುಕೊಂಡು
ತಬ್ಬಲಿಯಾದ ಮರ
ಧೂಳಿಡಿದು ಒಣಗಿ ಹೋಗುತ್ತದೆ
ಬದುಕಿಡಿ ಬಿಸಿಲಲ್ಲೇ ನಿಂತು…
ಆಗೊಮ್ಮೆ ಈಗೊಮ್ಮೆ
ಮರಕ್ಕೆ ಕೊಡೆ ಹಿಡಿಯುವ
ಕಾಂಕ್ರಿಟ್ ಕಾಡಿನಲಿ
ಮರ ಮಾತನಾಡುತ್ತದೆ
ಒಂದು ಮರದ ಭಾಷೆ
ಮರವನ್ನು ಸೃಷ್ಟಿಸಲಾಗದ ಮನುಷ್ಯ
ಅರ್ಥಮಾಡಿಕೊಳ್ಳಲಾರ
ತನ್ನೆಲ್ಲ ಪಂಚೇಂದ್ರಿಯಗಳನ್ನು ತೆರೆದುಕೊಂಡು
ಪೃಥ್ವಿಯ ಮೇಲೆ ಸದಾ ಎಚ್ಚರವಿರುತ್ತೆ
ಒಂದು ಮರ.






nice… raja,keep it up!
ಆರಿಫ್ ಅವರ ಕಾವ್ಯಕ್ಕೆ ಅದರದೇ ಆದ ಶಕ್ತಿಯಿರುತ್ತದೆ. ಅದು ಈ ಕವನದಲ್ಲಿ ಕೂಡ ರುಜುವಾತಾಗಿದೆ. ಎಂದಿನಂತೆ..
ಮೊದಲ ಸಲ ಹೂಬಿಟ್ಟಾಗ ಮರ
ಮಳ್ಳಿಹಾಗೆ ನಾಚಿಕೊಂಡಿದ್ದಿರಬಹುದು
ಏಕೆಂದರೆ
ಹೋದ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿದವರು
ಈ ಜನ್ಮದಲಿ ಮರವಾಗಿ ಬರುತ್ತಾರಂತೆ
beatiful lines. e reetiya saalugale kaviteyannu gellisuttave.. beligge beligge olleya kavite odisiddakke dhanyavaadagalu avadhi ge.
ಅರಿಫ್ ರಾಜ ಕವಿತೆಗೆ ಕಸುವು ತುಂಬಿದವರು
hooda janmadalli naanu maravaagiddenaa?!!
kavigala bhavaneye antahaddu!! ennuvudu arif matte torisikottidiya,these are buatifull feelings, like you….