ಇಮ್ತಿಯಾಜ್ ಶಿರಸಂಗಿ
ಮನಸುಗಳು ಮಾರಾಟಕ್ಕಿವೆ ಇಲ್ಲಿ
ಧರ್ಮದ ಅಮಲು ನೆತ್ತಿಗೇರಿಸಿ
ಕೊಳ್ಳುವವರು ಬೇಕಷ್ಟೇ.
ಮೆದುಳನ್ನು ಕೊಂಡುಕೊಳ್ಳುವುದು
ಇಲ್ಲಿ ಬಾರಿ ಸುಲಭ,,
ಇತಿಹಾಸವನ್ನು ಕೆದಕಬೇಕು
ಬೇಕಾದವರನ್ನು ಸೇರಿಸಬೇಕು
ಬೇಡವಾದವರನ್ನು ಕೈಬಿಡಬೇಕು
ಪುಂಖಾನುಪುಂಖ ಸುಳ್ಳುಗಳನ್ನು
ಶೃಂಗರಿಸಿ ಬಿತ್ತರಿಸಬೇಕು ಅಷ್ಟೇ!…
ಎಲ್ಲಿಯೂ ಇರದ ಒಂದು
ವಿಶೇಷ ಅಳತೆಗೋಲು ಇಲ್ಲಿದೆ
ಕಣ್ಣಿಗೆ ದೇಶಪ್ರೇಮದ ಬಟ್ಟೆ ಕಟ್ಟಿ
ಅನ್ಯಾಯವನ್ನು ಹುಡುಕು ಎನ್ನುತ್ತಾರೆ
ಸುಳ್ಳು ಹೇಳಿದರಷ್ಟೇ ಅಟ್ಟ….!
ಸತ್ಯವಾಡಿದರೆ ಜೈಲು…!
ಮಡಿಕೆ ಮುಟ್ಟಿದರಂತೂ ಚಟ್ಟ ….!
ನಿರ್ಧಯವಾಗಿ ಮುಕ್ಕಿ ತಿಂದ
ಅತ್ಯಾಚಾರಿಗಳನ್ನು
ಸೋಕಾಲ್ಡ್ ಪುರುಷರನ್ನು,
ಹಾರಹಾಕಿ ತಿಲಕವಿಟ್ಟು
ಸ್ವಾಗತಿಸುತ್ತಾರೆ.
ಸನ್ನಡತೆ ಆಧಾರದ ಮೇಲೆ
ಬಿಡುಗಡೆಯಾದವರನ್ನು.
ಇದು ಸ್ವತಂತ್ರೋತ್ಸವದ ವಿಶೇಷ ಕೊಡುಗೆ.
ಸನ್ನಡತೆಯೇ?? ಹೌದು ಹೌದು
ನೀವು ನಂಬಲೇಬೇಕು.
ಈಗ ಬದಲಾಗಿಹೋಗಿದೆ
ಪದಕೋಶದ ಶಬ್ದಗಳು.
ಅತ್ಯಾಚಾರಿಗಳೆಂದರೆ
ಸನ್ನಡತೆ ಉಳ್ಳವರು,
ಸತ್ಯವನಾಡುವವರು
ದೇಶದ್ರೋಹಿಗಳು,
ಪ್ರಶ್ನಿಸುವವರು
ಅರ್ಬನ್ ನಕ್ಸಲರು..
ಉದ್ದುದ್ದ ನಾರೀಶಕ್ತಿ ಭಾಷಣ…
ನೀರಲ್ಲಿ ತೊಳೆದ ಹಾಗೆ ಹುಣಸೆಹಣ್ಣ..
ಎಲ್ಲವೂ ಬರಿ ಕಾಂಚಾಣ. ಕಾಂಚಾಣ…
ಜನರನ್ನು ಮಳ್ಳು ಮಾಡುವುದು ಹೇಗೆ??
ಎಂಬ ಸಮಿತಿಯನ್ನು ರಚಿಸುತ್ತಿದ್ದಾರೆ.
ಮನಸ್ಸು-ಮೆದುಳು
ಇನ್ನೂ ಮಾರಾಟವಾಗದೆ
ಇರುವವರನ್ನು ಹುಡುಕುತ್ತಿದ್ದಾರೆ..
ಹೇಳಿ
ನಿಮ್ಮದ್ಯಾವ
ಗುಂಪು ??.
0 ಪ್ರತಿಕ್ರಿಯೆಗಳು