ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳಿ ಚಲಂ ನಿಮಗ್ಯಾಕೆ ‘ಚೆ’ ಇಷ್ಟವಾದ ಅಂದದ್ದಕ್ಕೆ..

ಭೇಟಿ ಕೊಡಿ -C for Cuba ಇಲ್ಲಿ ಕ್ಲಿಕ್ಕಿಸಿ 

chalam hadlahalli

ಚಲಂ ಹಾಡ್ಳಹಳ್ಳಿ 
‘ಚೆಗುವೆರಾ ಮುಂತಾದವರ ಮೂಲಕ ಜೀವನಾಶಕ ಶಕ್ತಿಗಳಿಂದ ದೂರ ಬಂದೆ..’ ಎಂದು ಚಲಂ ಎಂದೇ ಹೆಸರಾದ ಬರಹಗಾರ ಚಲಂ ಹಾಡ್ಳಹಳ್ಳಿ ಫೇಸ್ ಬುಕ್ ನಲ್ಲೊಮ್ಮೆ ಬರೆದುಕೊಂಡಿದ್ದರು. ಕುತೂಹಲವಾಗಿ ‘ಹೇಳಿ ಚಲಂ ನಿಮಗ್ಯಾಕೆ ಚೆ ಇಷ್ಟವಾದ?’ ಅಂದಿದ್ದಕ್ಕೆ ಅವರು ಕೊಟ್ಟ ಉತ್ತರ ಇಲ್ಲಿದೆ

—–
ಅವನ ಪರಿಚಯ ಮೊದಲ ಬಾರಿ ಎಲ್ಲಿಯಾಯಿತು ಅಂತ ಗೊತ್ತಿಲ್ಲ. ಆದರೆ ಯೂನಿಫಾರಂ ಬಿಟ್ಟು ಸ್ವತಂತ್ರತೆಯ ಪ್ರತೀಕವಾಗಿದ್ದ ಕಲರ್ ಬಟ್ಟೆಗಳ ಪ್ರಪಂಚದ ಮೂಲಕ ಆತ ಪರಿಚಯವಾದ ಅಂತ ಮಾತ್ರ ಹೇಳಬಲ್ಲೆ.

ಆಗ ಕೆಲವರ ಟೀ ಶರ್ಟುಗಳ ಮೇಲೆ, ಬಾಯಲ್ಲಿ ಸಿಗಾರ್ ಇಟ್ಟುಕೊಂಡ, ಪ್ರಪಂಚದ ಯಾವುದೇ ಶಕ್ತಿಯನ್ನಾದರೂ ಮುಖಾಮುಖಿಯಾಗಬಲ್ಲೆ ಎಂಬ ಖಚಿತ ಮುಖಭಾವದ, ತಲೆಯ ಮೇಲೆ ನಾನು ಕನಸಿನಲ್ಲಿ ಮಾತ್ರ ಧರಿಸಬಹುದಾದ ಟೋಪಿಯನ್ನು ಧರಿಸಿದ್ದ ಆತನ ಹೆಸರನ್ನು ಕೆಲವರು ” ಚೆ ” ಎನ್ನುತ್ತಿದ್ದರು… ಮತ್ತೆ ಕೆಲವರು ” ಚೆಗುವೆರಾ” ಅಂತ.

che and bhagathಆಗೆಲ್ಲಾ ಅವನ ಕ್ಯೂಬಾ, ಹೋರಾಟ ಯಾವುದೂ ಗೊತ್ತಿರಲಿಲ್ಲ. ಆತ ನಮ್ಮ ನಮ್ಮ ಭಗತ್ ಸಿಂಗ್ ನನ್ನು ತುಂಬಾ ನೆನಪಿಸುತ್ತಿದ್ದ. ಭಗತ್ ಸಿಂಗ್ ಬಗ್ಗೆ ಅಷ್ಟರಲ್ಲಾಗಲೇ ಪಠ್ಯಗಳಲ್ಲಿ ಓದಿಕೊಂಡಿದ್ದೆ.
ಇವನೂ ಕೂಡ ಭಗತ್ ಸಿಂಗನಂತೆ ಬಂದೂಕು ನೆಟ್ಟು ಅದು ಮುಂದೆ ಬಂದೂಕಿನ ಫಸಲನ್ನೇ ಕಾಯುತ್ತಾ ಕುಳಿತ ಕ್ರಾಂತಿಕಾರಿ ಅನಿಸಿತ್ತು.

ಚೆಗುವೆರಾನನ್ನು ನೋಡಿದಾಗಲೆಲ್ಲಾ ಈತ ನಮ್ಮೆಲ್ಲಾ ಸಮಸ್ಯೆ, ತುಮುಲಗಳ ಬಿಡುಗಡೆಗಾಗಿ ಬಂದವನು ಎಂಬ ಭಾವ ಮೂಡುತ್ತಿತ್ತು. ಕದ್ದು ಮುಚ್ಚಿ ಸಿಗರೇಟು ಸೇದುತ್ತಿದ್ದ ನನಗೆ ಡೈರೆಕ್ಟಾಗಿ ಬಾಯಲ್ಲಿ ಸಿಗಾರ್ ಹಚ್ಚಿಕೊಂಡಿರುವ ಆತನ ಚಿತ್ರಗಳು ರೋಮಾಂಚನ ಮೂಡಿಸುತ್ತಿದ್ದವು.

ಮಿಲಿಟರಿ ಸಮವಸ್ತ್ರದ ಜೊತೆಗೆ ಶೇವ್ ಮಾಡದ ಗಡ್ಡದ ಚಹರೆ ಒಂದಕ್ಕೊಂದು ಲಿಂಕ್ ಆಗದೇ ಎನ್.ಸಿ.ಸಿ ಗೆ ನೀಟಾಗಿ ಹೋಗುತ್ತಿದ್ದ ನನಗೆ ಶೇವ್ ಮಾಡದಿರುವಂತೆ ಪ್ರಚೋದಿಸಿ ಒಂಥರಾ ” ಕ್ರಾಂತಿ”ಯ ಪರಿಕಲ್ಪನೆ ಕೊಟ್ಟವನು ಚೆಗುವೆರಾ..

ಅವನ ಯಾವ ವಿಚಾರವೂ ಗೊತ್ತಿಲ್ಲದೇ ಆತನ ಮುಖ ಭಾವದ ಮೂಲಕ ಮಾತ್ರವೇ ಆತ ” ಕ್ರಾಂತಿ” ಎಂಬ ರೋಮಾಂಚನಕ್ಕೆ ಈಡು ಮಾಡಿದ್ದ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಈ ಶುದ್ದಾತಿಶುದ್ದ ಒರಟನಂತೆ ಕಾಣುವ, ಶಿಸ್ತಿಗೂ ವಿನಾಯ್ತಿ ನೀಡುವಂತೆ ಕಾಣುವ, ನೋಡಿದಾಕ್ಷಣ ಆತ್ಮೀಯ ಭಾವ ಸೂಸುತ್ತಿದ್ದ ಈತನಲ್ಲಿ ಉತ್ತರವಿದೆ ಅನ್ನಿಸಿತ್ತು.

ಅಡ್ವಾನಿ ರಥಯಾತ್ರೆ, ಬಾಬ್ರಿ ಮಸೀದಿ ಧ್ವಂಸದಂತಹಾ ವಿನಾಶಕಾರಿ ಘಟನೆಗಳು ದೇಶದ ತುಂಬಾ ಹರಡುವ ಸಮಯದಲ್ಲಿ ಚೆಗುವೆರಾನ ಕುರಿತಾದ ಮಾತುಗಳು ಇಂತಹಾ ಜೀವನಾಶಕ ಶಕ್ತಿಗಳಿಂದ ಈತನಲ್ಲಿ ಮಾತ್ರ ಉತ್ತರವಿದೆ ಅನ್ನಿಸಿತ್ತು..

ಮೊನ್ನೆ ಮೊನ್ನೆ ” ಮೋಟಾರ್ ಸೈಕಲ್ ಡೈರಿ” ಎಂಬ ಆತನ ಕುರಿತಾದ ಸಿನೆಮಾ ನೋಡಿದೆ…
ತನ್ನ ಹುಟ್ಟು ಹಬ್ಬದ ದಿನವನ್ನು ದ್ವೀಪದ ಅ‌ತ್ತ ತುದಿಯ ಕುಷ್ಟ ರೋಗಿಗಳೊಂದಿಗೆ ಆಚರಿಸಿಕೊಳ್ಳಲು ಈಜಿ ಹೋಗಿ ಅವರನ್ನು ಸೇರಿದ ಚೆಗುವೆರಾ..
ನಮ್ಮಲ್ಲಿಗೂ ಬರುತ್ತಾನೆಂಬ ಬಲವಾದ ಭಾವವೊಂದೇ ಸಾಕು…
ನಾನು ಯಾವ ಶೋಷಣೆಯ ವಿರುದ್ದವಾದರೂ ಸರಿಯೇ ದನಿಯೆತ್ತುತ್ತೇನೆ.

‍ಲೇಖಕರು admin

28 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading