ಭೇಟಿ ಕೊಡಿ -C for Cuba ಇಲ್ಲಿ ಕ್ಲಿಕ್ಕಿಸಿ
—————————————————–
ಆಶ್ಚರ್ಯ ಆದ್ರೆ ಏನ್ಮಾಡೋದು- ಇದು ನಿಜ. ಚೆಗೆವಾರ ಎಲೆಕ್ಷನ್ ನಲ್ಲಿ ಕಂಟೆಸ್ಟ್ ಮಾಡಿದ್ದಾರೆ. ಅದೂ ಈ ಬಾರಿ ಭಾರೀ ಜಟಾಪಟಿ ಎದುರಿಸಲಿರುವ ಕೇರಳ ಚುನಾವಣೆಯಲ್ಲಿ. ಕಾಸರಗೋಡು ಜಿಲ್ಲೆಯ ತ್ರಿಕರಿಪುರ ಕ್ಷೇತ್ರದ ಎಡರಂಗದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದರೆ ನೀವು ನಂಬಲೇಬೇಕು.
ಹೌದು ಇವರೂ ಚೆಗೆವಾರ. ನಿರಂಜನರ ‘ಚಿರಸ್ಮರಣೆ’ ಓದಿದವರಿಗೆ ಕಯ್ಯೂರೂ ಗೊತ್ತು.. ಅಪ್ಪು, ಚಿರಕುಂಡ, ಮಾಸ್ತರ್, ಆ ತೇಜಸ್ವಿನಿ ನದಿ ಎಲ್ಲವೂ ಗೊತ್ತು. ಆ ಕಯ್ಯೂರಿನವರು ಎಂ ರಾಜಗೋಪಾಲನ್. ಆರಂಭದಿಂದಲೂ ‘ಚೆ’ ಎಂದರೆ ಪ್ರಾಣ. ತನ್ನದಲ್ಲದ ದೇಶದಲ್ಲಿ, ತನ್ನ ಸ್ನೇಹಿತರ ಕಾರಣಕ್ಕಾಗಿ ಹೋಗಿ ಕಾವ್ಯ ಹಿಡಿದ ಕೈಗಳು ಕೋವಿಯನ್ನೂ ಹಿಡಿಯಿತಲ್ಲಾ.. ಎನ್ನುವ ಕಾರಣಕ್ಕೆ ರಾಜಗೋಪಾಲನ್ ಗೆ ಚೆಗೆವಾರನ ಬಗ್ಗೆ ಅಭಿಮಾನ.
ಈ ಮಧ್ಯೆ ಒಂದಷ್ಟು ಜನ ‘ತೇಜಸ್ವಿನಿ ನೀನು ಸಾಕ್ಷಿ ‘ಎನ್ನುವ ಸಾಕ್ಷ್ಯಚಿತ್ರ ತೆಗೆಯಲು ಮುಂದಾದರು. ಅದರಲ್ಲಿ ಚೆಗೆವಾರನ ಪಾತ್ರ ಬಂದು ನೇರವಾಗಿ ಇವರ ಬುಟ್ಟಿಗೇ ಬೀಳಬೇಕೇ? ಅಲ್ಲಿಂದ ಇವರ ಹೆಸರು ಮರೆತು ಹೋಗುವಷ್ಟು ಇವರು ಚೆಗೆವಾರ ಎಂದೇ ಹೆಸರಾಗಿದ್ದಾರೆ.
ಇವರು ಹೋದ ಕಡೆಯೆಲ್ಲಾ ಜನ ಅವರಿಗೆ ಚೆಗೆವಾರನ ಟೋಪಿಯನ್ನು ಉಡುಗೊರೆಯಾಗಿ ಕೊಡುತ್ತಾರೆ. ರಾಜಗೋಪಾಲನ್ ಗೆ ಇದು ಇನ್ನಿಲ್ಲದ ಕಾಣಿಕೆ. ಈ ಮಧ್ಯೆ ಕ್ಯೂಬಾಗೆ ಹೋಗಿದ್ದ ಪ್ರಸನ್ನ ಕುಮಾರಿ ಅಲ್ಲಿಂದಲೇ ಒಂದು ಚೆ ಟೋಪಿ ತಂದುಕೊಟ್ಟಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ರಾಜಗೋಪಾಲನ್.
ಸಿ ಪಿ ಎಂ ಪಕ್ಷದಿಂದ ಸ್ಪರ್ಧಿಸಿರುವ ಈ ‘ಚೆ’ ಗೆಲ್ಲುತ್ತಾರಾ ಇಲ್ಲವಾ ಕಾದು ನೋಡೋಣ..
0 ಪ್ರತಿಕ್ರಿಯೆಗಳು