ಚಂದ್ರಶೇಖರ ಆಲೂರು
ರಾಮಾಯಣ ,ಮಹಾಭಾರತ ಹಿಂದಿ ಧಾರಾವಾಹಿಗಳು ಕನ್ನಡದಲ್ಲಿ ಪ್ರಸಾರವಾಗಿದ್ದರೆ ಬಹುಷಃ ಕರ್ನಾಟಕ ಇಷ್ಟೊಂದು ಹಿಂದಿಮಯವಾಗುತ್ತಿರಲಿಲ್ಲ ಅನ್ನಿಸುತ್ತದೆ .
ರಮಾನಂದ್ ಸಾಗರ್ ರಾಮಾಯಣವನ್ನ, ಫಿರೋಜ್ ಖಾನ್ sword of Tipu ಧಾರಾವಾಹಿಗಳನ್ನು ಕನ್ನಡದಲ್ಲಿಯೂ
ಡಬ್ ಮಾಡಲು ಬಯಸಿದ್ದರು. ಕನ್ನಡ ಚಿತ್ರೋದ್ಯಮದಿಂದ ವಿರೋಧ ವ್ಯಕ್ತವಾದ್ದರಿಂದ ಆ ಆಲೋಚನೆಯನ್ನು ಕೈ ಬಿಟ್ಟರು .
ಎಪ್ಪತ್ತು -ಎಂಬತ್ತರ ದಶಕದಲ್ಲಿ ಬಾಲಚಂದರ್ ಥರದ ಬಹುತೇಕ ನಿರ್ದೇಶಕರ ಚಿತ್ರಗಳು ಏಕ ಕಾಲದಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಕನ್ನಡ ಪ್ರೇಕ್ಷಕರ ತಮಿಳು ತೆಲುಗು ಚಿತ್ರಗಳ ವ್ಯಾಮೋಹ ಶುರುವಾದದ್ದು ಆಗಿನಿಂದಲೇ. ಅಕಸ್ಮಾತ್ ಈ ಚಿತ್ರಗಳು ಕನ್ನಡದಲ್ಲಿಯೂ ಬಿಡುಗಡೆ ಆಗಿದ್ದರೆ ನಮ್ಮ ಪ್ರೇಕ್ಷಕರ ತಮಿಳು ತೆಲುಗು ವ್ಯಾಮೋಹ ಈ ಮಟ್ಟದಲ್ಲಿ ಬೆಳೆಯುತ್ತಿರಲಿಲ್ಲ. ಕನ್ನಡದ ವಾತಾವರಣ ಮಾಯವಾಗುತ್ತಿರಲಿಲ್ಲ .
ರಜನಿಕಾಂತ್ ರ ರೋಬೊ ಚಿತ್ರ ಬೆಂಗಳೂರಿನಲ್ಲಿ ತಮಿಳು, ತೆಲುಗು, ಹಿಂದಿಯಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾದಾಗ ನಾನು ಪೆಚ್ಚಾಗಿ, ಅನಿವಾರ್ಯವಾಗಿ ಹಿಂದಿ ಭಾಷೆಯ ಚಿತ್ರಮಂದಿರಕ್ಕೆ ಹೋದೆ. ಅದು ಕನ್ನಡದಲ್ಲಿಯೇ ಬಿಡುಗಡೆಯಾಗಿದ್ದರೆ ಹತ್ತಾರು ಚಿತ್ರಮಂದಿರಗಳ ಮುಂದೆ ಕನ್ನಡದ ವಾತಾವರಣ ಇರುತ್ತಿತ್ತು ..
ಅ ನ ಕೃ ರವರು 1961 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಬ್ಬಿಂಗ್ ವಿರೋಧಿಸಿ ಮಾತನಾಡಿ
ಡಬ್ಬಿಂಗ್ ಚಿತ್ರಗಳನ್ನು ಪ್ರತಿಭಟಿಸಿ ಎಂದು ಕರೆ ಕೊಟ್ಟರು. ನಂತರ ರಾಜ್ ಆದಿಯಾಗಿ ಸಮಸ್ತ ಕನ್ನಡ ಚಿತ್ರರಂಗ ಈ
ಚಳುವಳಿಯಲ್ಲಿ ಭಾಗವಹಿಸಿತು. ಅದಕ್ಕೆ ಮುಖ್ಯ ಕಾರಣ ಕನ್ನಡ ಕಲಾವಿದರು ತಂತ್ರಜ್ಞರ ಹೊಟ್ಟೆ ಪಾಡಿನ ವಿಚಾರ
ಅದಾಗಿತ್ತು. 1957 -1958 ರಲ್ಲಿ ಕೇವಲ ಆರೇಳು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಶ್ರೀಮಂತಿಕೆಯಲ್ಲಿ ಕನ್ನಡ
ಚಿತ್ರಗಳನ್ನು ಮೀರಿಸುತ್ತಿದ್ದ ತೆಲುಗು ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಂದು ಕನ್ನಡ ಚಿತ್ರರಂಗಕ್ಕೆ ಪೈಪೋಟಿ
ಒಡ್ಡುತ್ತಿದ್ದವು.
1958 ರಲ್ಲಿ 7 ಕನ್ನಡ ಚಿತ್ರಗಳು 28 ತೆಲುಗು ಚಿತ್ರಗಳು 39 ತಮಿಳು ಚಿತ್ರಗಳು ಬಿಡುಗಡೆಯಾದವು. ಆದರೆ 2016 ರಲ್ಲಿ 180 ಕನ್ನಡ ಚಿತ್ರಗಳು 269 ತೆಲುಗು ಚಿತ್ರಗಳು 224 ತಮಿಳು ಚಿತ್ರಗಳು ಬಿಡುಗಡೆಯಾಗಿವೆ
ಮೇಲ್ನೋಟಕ್ಕೆ ಕನ್ನಡಕ್ಕಿಂತ ಹೆಚ್ಚು ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆಯಾಗಿರುವುದು ಕಂಡರೂ ಡಬ್ಬಿಂಗ್ ವಿರೋಧಿ ಹೋರಾಟ ಪ್ರಾರಂಭವಾಗಲು ಕಾರಣವಾದ 1958 ರ ಸ್ಥಿತಿಗೆ ಹೋಲಿಸಿದರೆ ತಮಿಳಿನಲ್ಲಿ ಆರು ಪಟ್ಟು ಹೆಚ್ಚು, ತೆಲುಗಿನಲ್ಲಿ ಹತ್ತು ಪಟ್ಟು ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿದ್ದರೆ ಕನ್ನಡದಲ್ಲಿ ಇಪ್ಪತ್ತಾರು ಪಟ್ಟು ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಅರ್ಥದಲ್ಲಿ ಕನ್ನಡ ಚಿತ್ರರಂಗ ತಮಿಳಿಗಿಂತ ಐದು ಪಟ್ಟು, ತೆಲುಗಿಗಿಂತ ಮೂರು ಪಟ್ಟು ವೇಗವಾಗಿ ಬೆಳೆದಿದೆ
.
ಹೀಗಿರುವಾಗಲೂ ಕನ್ನಡಿಗರು ಕನ್ನಡ ಚಿತ್ರೋದ್ಯಮವನ್ನ ಬೇಲಿ ಕಟ್ಟಿಕೊಂಡು ಸಲಹಬೇಕೇ? ಜಗ್ಗೇಶ್ ಥರದವರು ಬಾಯಿಯನ್ನು ಬಾಯಿಯಂತೆ ಬಳಸುತ್ತಿಲ್ಲ ಎಂಬುದೇ ಅವರ ವಾದ ಎಷ್ಟು ದುರ್ಬಲ ಎನ್ನುವುದನ್ನು ತೋರುತ್ತದೆ .
ಮತ್ತೊಂದು ನೆನಪು:
ಎಂಬತ್ತರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಸರಣಿ ರಿಮೇಕ್ ಚಿತ್ರಗಳ ಬಗ್ಗೆ ಬರೆದಾಗಲೆಲ್ಲ ಕೆಲವು ನಿರ್ದೇಶಕರು ನೀವು ಸಾಹಿತಿಗಳು ಅನುವಾದ ಮಾಡುವುದಿಲ್ಲವೇ ಎಂದು ಕೇಳುತ್ತಿದ್ದರು. ನಾವು ಹೌದು ನೀವೂ ರಿಮೇಕ್ ಬದಲು ಡಬ್ಬಿಂಗ್ ಮಾಡಬಹುದಲ್ಲ ಎಂದರೆ ಮೌನವಾಗುತ್ತಿದ್ದರು .
ಅ ನ ಕೃ, ಮ ರಾಮಮೂರ್ತಿ, ರಾಜ್, ಐಯ್ಯರ್, ಹೊನ್ನಪ್ಪ ಭಾಗವತರ್ ಮುಂತಾದವರು ಅರವತ್ತರ ದಶಕದ ಆರಂಭದ ದಿನಗಳಲ್ಲಿ ಡಬ್ಬಿಂಗ್ ವಿರೋಧಿಸುತ್ತಿದ್ದ ದಿನಗಳಿಗೂ ಇಂದಿನ ದಿನಮಾನಕ್ಕೂ ಅಜ ಗಜಾಂತರ ವ್ಯತ್ಯಾಸವಿದೆ. ಅಂದು ಹೀರೋಗಳು ಕೂಡ ತುತ್ತು ಅನ್ನಕ್ಕಾಗಿ ಪರದಾಡ ಬೇಕಾದ ಪರಿಸ್ಥಿತಿ ಇತ್ತು. ಇಂದು ಕನ್ನಡದ ಹಲವಾರು ಹೀರೋಗಳು ರಿಮೇಕ್ ಚಿತ್ರಗಳಲ್ಲಿ ನಟಿಸುವುದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ಈಗಲೂ ಡಬ್ಬಿಂಗ್ ನಂಥ ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಲು ಕನ್ನಡ ಚಿತ್ರರಂಗ ಸಜ್ಜಾಗಿಲ್ಲ ಎಂದರೆ ಅದು ನಾಚಿಕೆ ಗೇಡು. ಡಬ್ಬಿಂಗ್ ನಿಂದಾಗಿ ಅತ್ಯುತ್ತಮ ಚಿತ್ರಗಳು ಕನ್ನಡಕ್ಕೆ ಬರುತ್ತವೆ ಎಂಬ ಭ್ರಮೆಯೇನು ನಮಗಿಲ್ಲ. ಯಾವುದನ್ನೂ ತೆಗೆದು ಕೊಳ್ಳಬೇಕು, ಯಾವುದನ್ನೂ ತಿರಸ್ಕರಿಸಬೇಕು ಎಂಬ ಪ್ರಜ್ಞೆ ಕನ್ನಡ ಪ್ರೇಕ್ಷಕನಿಗೆ ಇದೆ. ಡಬ್ಬಿಂಗ್ ಶುರುವಾದರೆ ಹೆದರುವವರು ರಿಮೇಕ್ ಧೀರರು ಮಾತ್ರ!!
0 ಪ್ರತಿಕ್ರಿಯೆಗಳು