ರವೀಂದ್ರ ಗಂಗಲ್
ಮೊನ್ನೆ ಸಂಜೆ, ಈ ಹುಡುಗನ ಮಾತುಗಳನ್ನು ಮಂತ್ರಮುಗ್ಧನಾಗಿ ಕೇಳುತ್ತಲೇ ಇದ್ದೆ.
ನನ್ನೆದೆಯ ಇಳಿಜಾರಿನಲ್ಲಿ ನೋವಿನ ಝರಿಯೊಂದು ನಿರಂತರವಾಗಿ ಹರಿಯುತ್ತಲೇ ಇತ್ತು. ಇವನು ಹುಡುಗನಾಗಿ ಹುಟ್ಟಿದ್ದು ನಿಜ. ಆದರೆ, ಹೆಣ್ಣಿನ ಪ್ರತಿ ಕದಲಿಕೆಯನ್ನು ತನ್ನ ದೇಹ, ಹೃದಯ ಮತ್ತು ಆತ್ಮಗಳಲ್ಲಿ ತುಂಬಿಕೊಂಡು ಹುಟ್ಟಿದವನು. ಹೆಣ್ಣಿನ ಪ್ರತಿ ಸೂಕ್ಷ್ಮತೆಗಳನ್ನು ತನ್ನದಾಗಿಸಿಕೊಂಡವನು.
ಒಂದಿಡೀ ನಾಗರೀಕತೆಯಿಂದ ತಿರಸ್ಕರಿಸಲ್ಪಟ್ಟವನು. ಸಮಾಜದಿಂದ ಅವಮಾನಕ್ಕೊಳಗಾದವನು. ಇವನ ನೋವು, ಹತಾಶೆ, ಸಂಕಟ, ಅಸಹಾಯಕತೆ ಮತ್ತು ಅನಿವಾರ್ಯತೆಗಳನ್ನು ಆಲಿಸಿದ ಮೇಲೆ ಹೊಟ್ಟೆಯಾಳದ ಕರುಳು ತಲ್ಲಣಿಸಿ ಹೋಗಿತ್ತು. ಮನಸ್ಸಿನ ಮೇಲೆ ಕಪ್ಪು ಮೋಡಗಳು ಮುಗಿಬಿದ್ದ ಅನುಭವವಾಗಿತ್ತು.
ಇವನು ಸಂವೇದನೆಗಳಿರುವ ಹುಡುಗ, ತುಂಬ ಓದಿಕೊಂಡಿರುವ ಹುಡುಗ, ಬದುಕಿನ ಆಳವನ್ನು ಅರಿತಿರುವ ಹುಡುಗ, ಹೆಣ್ತನದ ದೈವಿಕ ಪ್ರೇಮವನ್ನು ಹೊತ್ತುಕೊಂಡು ಅಲೆದಾಡುತ್ತಿರುವ ಹುಡುಗ. ಭೇಟಿಯಾದ ಕೆಲವೇ ಕ್ಷಣಗಳಲ್ಲಿ ತೀರಾ ಹತ್ತಿರವಾಗಿಬಿಟ್ಟ.
ಚಿತ್ರಕಲೆ, ಬರವಣಿಗೆ ಮತ್ತು ನಾಟ್ಯಕಲೆಗಳನ್ನು ಮೈಗೂಡಿಸಿಕೊಂಡಿದ್ದಾನೆ. ತುಂಬಾ ರೊಮ್ಯಾಂಟಿಕ್ ಆಗಿ ಯೋಚಿಸುತ್ತಾನೆ. ಅದ್ಭುತವಾಗಿ ಮಾತನಾಡುತ್ತಾನೆ. ನನ್ನನ್ನು ಬಾಯಿ ತುಂಬಾ ಅಣ್ಣಾ ಎಂದು ತಬ್ಬಿಕೊಳ್ಳುತ್ತಾನೆ. ಇಂಥಹ ಪ್ರೇಮ, ಮಮತೆ ಮತ್ತು ಮನುಷ್ಯತ್ವದ ಮುಂದೆ ಧರ್ಮ-ದೇವರುಗಳು ನಗಣ್ಯವೆನ್ನಿಸಿಬಿಡುತ್ತವೆ.
ಇಂಥಹ ಪ್ರೇಮ, ಮಮತೆ ಮತ್ತು ಮನುಷ್ಯತ್ವದ ಮುಂದೆ ಧರ್ಮ-ದೇವರುಗಳು ನಗಣ್ಯವೆನ್ನಿಸಿಬಿಡುತ್ತವೆ.