ಹೆಚ್ ಎಸ್ ಈಶ್ವರ್
ಶ್ರೀಯುತ ಸಿ ಯು ಬೆಳ್ಳಕ್ಕಿ ಅವರ “ಕೇಳುವ ಕೌತುಕ” ಒಂದು ಅಪೂರ್ವ ದಾಖಲೆ; ಮಾಧ್ಯಮ ಕುರಿತಂತೆ, ಅದರಲ್ಲೂ ವಿಶೇಷವಾಗಿ ಬಾನುಲಿಗೆ ಸಂಬಂಧಿಸಿದಂತೆ, ವಿಶಿಷ್ಟ ಮಾಹಿತಿ ಸಂಗ್ರಹ. ಇದರಲ್ಲಿ ಏನುಂಟು, ಏನಿಲ್ಲ? ಇದೊಂದು ಇತಿಹಾಸದ ಹೊತ್ತಿಗೆ, ವ್ಯಕ್ತಿ ಚಿತ್ರಗಳ ಸಂಕಲನ, ಬಾನುಲಿ ಪ್ರಸಾರದ ಪ್ರಭಾವ ಮತ್ತು ವೈಶಿಷ್ಟ್ಯಗಳನ್ನು ವಿಶ್ಲೇಷಿಸುವ ವಿಮರ್ಶಾ ಪುಸ್ತಕ. ಇದನ್ನು ಓದಿದ ನಂತರದಲ್ಲಿ ಒಂದು ಮ್ಯೂಸಿಯಂ ಸುತ್ತಿ ಬಂದ ಅನುಭವ ಅಗುತ್ತದೆ.
ಈ ಪುಸ್ತಕ ಪ್ರಮುಖವಾಗಿ ಧಾರವಾಡದ ಆಕಾಶವಾಣಿ ಸುತ್ತ ಗಿರಿಕಿ ಹೊಡೆಯುತ್ತಾ ಇಡಿಯ ಮಾಧ್ಯಮ ಜಗತ್ತಿನ ಆಗುಹೋಗುಗಳತ್ತ ವಿಸ್ತರಿಸಿಕೊಳ್ಳುತ್ತದೆ. ಬಾನುಲಿ ಪ್ರಸಾರದ ಸಣ್ಣಪುಟ್ಟ ಸಂದರ್ಭಗಳನ್ನು ಆಸಕ್ತಿದಾಯಕವಾಗಿ ವಿವರಿಸುವ ಮೂಲಕ, ಬಾನುಲಿ ಪ್ರಸಾರದ ಚಾರಿತ್ರಿಕ ಅಂಶಗಳನ್ನು ದಾಖಲಿಸುವ ಮಹತ್ವದ ಉದ್ದೇಶವನ್ನು ಇಲ್ಲಿ ಗುರುತಿಸಬಹುದು.
ಈ ಹೊತ್ತಿಗೆ ವ್ಯಕ್ತಿ ಚಿತ್ರಣಗಳ ಒಂದು ಆಯಾಮವನ್ನೂ ಹೊಂದಿದೆ. ಮಾಧ್ಯಮ ಕುರಿತು ಬರೆಯುತ್ತಲೇ, ಆ ಕ್ಷೇತ್ರವನ್ನು ತಮ್ಮದೇ ಬಗೆಯಲ್ಲಿ ಶ್ರೀಮಂತಗೊಳಿಸಿದ ಹಲವು ಮಹನೀಯರ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. “ಸಂವಹನದ ಸರ್ವಜ್ಞ: ಸಾಬರಮತಿ ಸಂತ”: ಈ ಶೀರ್ಷಿಕೆಯೇ ಎಷ್ಟೊಂದು ಸೊಗಸಾಗಿದೆ, ಅರ್ಥಪೂರ್ಣವಾಗಿದೆ. ಈ ಲೇಖನ ಪತ್ರಿಕೋದ್ಯಮದಲ್ಲಿ ಗಾಂಧೀಜಿ ತೊಡಗಿಸಿಕೊಂಡ ರೀತಿ ಮತ್ತು ಅವರ ಮಾಧ್ಯಮ ತತ್ವದ ಸಂಕ್ಷಿಪ್ತ ಪರಿಚಯ ಸಂಪೂರ್ಣ ಯಶಸ್ವಿ ಪಡೆದುಕೊಂಡಿದೆ. ಹಾಗೆಯೇ ಇತರ ವ್ಯಕ್ತಿ ಪರಿಚಯಗಳೂ ಅಷ್ಟೇ ಚೆನ್ನಾಗಿ ಮೂಡಿಬಂದಿವೆ: ಮೆಲ್ ವಿಲ್ ಡಿಮೆಲೊ, ಹೆಚ್ ಕೆ ರಂಗನಾಥ, ಸಂಗೀತದ ದಿಗ್ಗಜರು.
ಬಾನುಲಿ ಪ್ರಸಾರದ ಪ್ರಭಾವದ ಬಗೆಗೆ ಒಳ್ಳೆಯ ಚರ್ಚೆ ಉದ್ದಕ್ಕೂ ಸಿಗುತ್ತದೆ. Invasion from Mars ಎಂಬ ರೇಡಿಯೋ ನಾಟಕ ಉಂಟು ಮಾಡಿದ ಅಲ್ಲೋಲಕಲ್ಲೋಲಗಳನ್ನು ಉದಾಹರಿಸುತ್ತಾ, ಆ ಬಗೆಯ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ ಎನ್ನುವ ಉಪಯುಕ್ತ ಚರ್ಚೆ ಪ್ರಸ್ತುತ ವಾದದ್ದು. ಆ ಕುರಿತು ಸಾಕಷ್ಟು ಮನೋವೈಜ್ಞಾನಿಕ ಅಧ್ಯನಗಳು, ವಿಶ್ಲೇಷಣೆಗಳು ನಡೆದಿವೆ ಎನ್ನುವುದನ್ನು ನಾವು ಗಮನಿಸುವ ಅಗತ್ಯವಿದೆ.
ಬಾನುಲಿ ಪ್ರಸಾರ ಹೇಗೆ ಬಾಂಧವ್ಯಗಳನ್ನು ಬೆಸೆಯಬಲ್ಲದು, ಉಳ್ಳವರು-ವಂಚಿತರ ನಡುವಿನ ‘ ಮಾಧ್ಯಮ ಕಂದರ’ವನ್ನು ಸರಿತೂಗಿಸಬಲ್ಲದು, ಹೇಗೆ ಅಭಿವೃದ್ಧಿಯ ಹರಿಕಾರ ಆಗಬಲ್ಲದು ಮುಂತಾದ ಪ್ರಸ್ತಾಪಗಳನ್ನು ಪುಸ್ತಕದುದ್ದಕ್ಕೂ ಕಾಣಬಹುದು.
ಒಟ್ಟಿನಲ್ಲಿ ಇದೊಂದು ಮಹತ್ವದ ಕೊಡುಗೆ. ಮಾಧ್ಯಮ ಚರಿತ್ರಕಾರರಿಗೆ, ವಿದ್ಯಾರ್ಥಿಗಳಿಗೆ, ಸಾಮಾನ್ಯ ಆಸಕ್ತಿಯ ವಿಸ್ತೃತ ಓದುಗರಿಗೆ ಅವಶ್ಯಕ ಮಾಧ್ಯಮ ಸಾಹಿತ್ಯ
ಈ ಪುಸ್ತಕದಲ್ಲಿ ಸನ್ಮಾನ್ಯ ಬೆಳ್ಳಕ್ಕಿ ಅವರ ಮಾಧ್ಯಮ ಕುರಿತಂತೆ ಅಪಾರ ಅರಿವು ಮತ್ತು ಪಾಂಡಿತ್ಯಗಳ ಜೊತೆಯಲ್ಲಿ ಅವರ ದೀರ್ಘಕಾಲದ ಆಕಾಶವಾಣಿಯ ಅನುಭವ ಕೂಡ ಸೇರಿಕೊಂಡಿದೆ. ಇಂತಹ ಮಹತ್ವಪೂರ್ಣ ದಾಖಲೆ ಸೃಷ್ಟಿಸಿದ ಶ್ರೀ ಬೆಳ್ಳಕ್ಕಿ ಅಭಿನಂದನಾರ್ಹರು.
0 ಪ್ರತಿಕ್ರಿಯೆಗಳು