ಈ ಹೊತ್ತಿನ ಕವಿತೆ
~ದರ್ಶನ್ ಎಸ್ ಆರ್
ಕವಿತೆಯನ್ನು ಹುಡುಕುತ್ತಾ ಹೊರಟ ಅವನು ಕೇಳಿದ
ಕವಿತೆ ಎಂಂದರೇ ಏನು ?
ಕವಿತೆ ಎಲ್ಲಿದೆ? ಅದೀಗ ಏನು ಮಾಡುತ್ತಿದೆ ?
ತನ್ನೆಲ್ಲಾ ಆಸೆ-ಕನಸುಗಳ ಮೂಲೆಗಿರಿಸಿ
ಮನೆಯ ಒಳಗು ಹೊರಗು
ಬಿಡುವಿಲ್ಲದೆ ದುಡಿವ ಅಮ್ಮನ ಸೆರಗಿನಲ್ಲಿ
ನಾಳೆಗಳಿಗಾಗಿ ಜವಾಬ್ದಾರಿಯ ನೊಗ ಹೊತ್ತು ಉಳುವ ಅಪ್ಪನ ಒಡೆದ ಹಿಮ್ಮಡಿಯಲ್ಲಿ ಕವಿತೆಯಿದೆ..!
ರಸ್ತೆಬದಿಯಲ್ಲಿ ಹೂ-ಮಾರುವ ಹೆಣ್ಣುಮಗಳ ಕಣ್ಣುಗಳಲ್ಲಿ
ತುತ್ತು ಅನ್ನಕ್ಕಾಗಿ ಸಾಲುಗಟ್ಟಿ
ನಿಂತ ಮಕ್ಕಳ ಹಸಿವಿನಲ್ಲಿ
ಮಕ್ಕಳು ಮೊಮ್ಮಕ್ಕಳ ಬರುವಿಕೆಗಾಗಿ ಕಾಯುವ ಸುಕ್ಕುಗಟ್ಟಿದ ವೃದ್ಧಾಪ್ಯರ ಹೃದಯದಲ್ಲಿ ಕವಿತೆಯಿದೆ..!
ಬಂಡೆಗಳ ನಡುವೆ ಚಿಗಿಯುವ ಅಂತಃಕರಣದಲ್ಲಿ
ಬಾನು-ಭುವಿಯ ನಿಸ್ವಾರ್ಥ ಪ್ರೀತಿಯಲ್ಲಿ
ಬಯಲಿನ ಅಗಾಧ ಪ್ರಶಾಂತತೆಯಲ್ಲಿ
ಮಾತುಗಳಾಚೆಗಿನ ಮೌನದಲ್ಲಿ ಕವಿತೆಯಿದೆ
ಕವಿತೆ ಎಂಬುದು ನೋಟಕ್ಕೆ ಕಾಣುವಂತದಲ್ಲ
ನಮ್ಮ ನೋಟದೊಳಗಿನ ಕಾಣ್ಕೆಗೆ ದಕ್ಕುವಂತದ್ದು
ಮತ್ತೇನಿಲ್ಲ
ಜಗತ್ತು ರೊಟ್ಟಿಗಿಂತಾ ಪ್ರೀತಿಗಾಗಿ ಹಸಿದಿರುವಾಗ
ಈ ಹೊತ್ತಿಗೆ ಕವಿತೆ ಎಂದರೇ
ಅಂತಃಕರಣ ತುಂಬಿದ ಹೃದಯ ಆರ್ದ್ರತೆಯ ಕಣ್ಣು






0 Comments