ಸುನೀತ ಹೆಬ್ಬಾರ್
ಪೂತಿನಿಯ ಮೊಲೆ ಹಾಲ ಕುಡಿದಂತೆ
ಗೋರಖ್ ಪುರದಲ್ಲಿ ಬಲಿಯಾದ ಕಂದಮ್ಮಗಳೆಲ್ಲ ಮತ್ತೆ
ತನ್ನಮ್ಮ ತೂಗುವ ತೊಟ್ಟಿಲಲ್ಲಿ
ನಗುತ್ತ ಮಲಗುವಂತೆ ಮಾಡುವ
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು .
ಪ್ಯಾಲೆಸ್ತೇನ್ ,ಬರ್ಮಾದ ರೊಹಿಂಗ್ಯ
ಮಕ್ಕಳೆಲ್ಲ ಎಂದಿಗೂ ಎಡವದಂತೆ ,
ಜಾರಿ ಬೀಳದಂತೆ ,ಮುಳ್ಳುಕಂಟಿಗಳನ್ನೆಲ್ಲ
ಅವರ ಹಾದಿಯಿಂದ ಕಿತ್ತೊಗೆದು
ಮಕ್ಕಳಿಗೆಲ್ಲ ಒಂದೊಂದೇ ಹೂ ಮುತ್ತನಿಟ್ಟು ಹೂದೋಟದಲ್ಲಿ ಆಟವಾಡಲು ಬಿಡುವಂತಹ
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು
ಸಿರಿಯಾದ ಸಮುದ್ರತೀರದಲ್ಲಿ ಬಿದ್ದಿದ್ದ
ಹಸುಗೂಸು ಅಯಾನನನ್ನು ಎತ್ತಿ
ಅವನ ಮೊಣಕಾಲಿಗೂ ಅಲೆತಾಗದಂತೆ
ದಡದ ಮರಳಲ್ಲಿ ಪುಟ್ಟ- ಪುಟ್ಟ ಹೆಜ್ಜೆಯನ್ನಿಡಿಸಿ ನಡೆಸುತ್ತಾ
ಸಮುದ್ರದ ಬೆರಗನ್ನು ಅವನಿಗೆ ತೋರಿಸಲು
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು.
ಕೊಲೆಯಾದ ದಾನಮ್ಮ , ನಿರ್ಭಯಾರೆಲ್ಲ
ಮತ್ತೊಮ್ಮೆ ನಮ್ಮ ನಡುವಲ್ಲಿ
ಘನತೆಯ ಬದುಕು
ಹೊಂದುವಂತೆ ಮಾಡಲು
ಯಕ್ಷಿಣಿವಿದ್ಯೆಯೊಂದು ಇರಬೇಕಿತ್ತು
ಸದಾ ಬಾವಲಿಯಂತೆ
ಎಲ್ಲವನ್ನೂ ತಲೆಕೆಳಗಾಗಿಯೇ ನೋಡುವಂತ
ಈ ರಕ್ತಪಿಪಾಸುಗಳಿಗೆಲ್ಲ
ಗಾಂಧಿಯೋ,ಬುದ್ಧನೋ ಶಾಂತಿಯ ಪಾಠ ಕಲಿಸುವಂತ
ಜಗದ ಗಾಯಗಳಿಗೆಲ್ಲ ಮುಲಾಮು ಸವರುವಂತ
ಯಕ್ಷಿಣಿವಿದ್ಯೆಯೊಂದು ಇರಬೇಕಿತ್ತು.
ಅದ್ಭುತ ಕವಿತೆ