ಶಶಿಕಿರಣ್
ಇವತ್ತು ದಿನ ಆರಂಬಿಸಿದ್ದೆ ತಾಜಾ ತಿಂಡಿ ಮಸಾಲೆ ದೋಸೆ,ಕಾಫಿಯಿಂದ.
ಅನಂತರ ನನ್ನ ಪಯಣ ಜಯನಗರದ ಪುಸ್ತಕ ಮಳಿಗೆಗಳಲ್ಲಿ ಶುರುವಾಗಿ ರಾಜಾಜಿನಗರಲ್ಲಿ ಮುಗಿಯಿತು.
ಒಂದು ಪುಸ್ತಕ ಹುಡುಕಿಕೊಂಡು ಟೋಟಲ್ ಕನ್ನಡಕ್ಕೆ,ನಾಗಶ್ರೀ ಬುಕ್ ಹೌಸ್,ಸಪ್ನಾ ಬುಕ್ ಹೌಸ್ ಜಯನಗರ ಎಲ್ಲಾ ಕಡೆ ಹುಡುಕಿದೆ ಸಿಗಲಿಲ್ಲ,ಅಂಕಿತಾಗೆ ಹೋದೆ ಅಲ್ಲೂ ಸಿಗಲಿಲ್ಲ ಬೇರೆ ಎರಡು ಪುಸ್ತಕಗಳನ್ನ ತಗೊಂಡು ಬಂದೆ,ಮತ್ತೆ ಮದ್ಯ ಆಫೀಸಿನ ಕೆಲಸ ಮುಗಿಸಿಕೊಂಡು, ವಿಕಾಸ್ ಹೆಗಡೆ ಅವರನ್ನ ಬೇಟಿ ಮಾಡಿ,ಅವರು ಕೆಲವು ಪುಸ್ತಕಗಳನ್ನು ಪ್ರೀತಿಯಿಂದ ಕೊಟ್ಟರು.
ಅಲ್ಲಿಂದ ಸೀದಾ ಸಾಹಿತ್ಯ ಭಂಡಾರಕ್ಕೆ ಹೋಗಿ ಅಲ್ಲಿ ಹಿಂದೆ ಹೋದಾಗ ಎತ್ತಿಟ್ಟ ಪುಸ್ತಕಗಳನ್ನು ತಗೊಂಡು,ರಾಜಾಜಿನಗರದ ಸಾಹಿತ್ಯ ಲೋಕಕ್ಕೆ ಹೋದೆ, ಅದು ಕ್ಲೋಸ್ ಆಗಿದೆ, ಸರಿ ಇನ್ನೇನು ಮಾಡೋದು ಅಂತ ಯೋಚಿಸಬೇಕಾದರೆ ರಾಜಾಜಿನಗರದಲ್ಲಿ ಆಕೃತಿಗೆ ಒಂದು ಸಲಿಯೂ ಹೋಗೆ ಇಲ್ಲವಲ್ಲ,ಹುಡುಕಿದರೆ ಅದು ಅದೆ ರಸ್ತೆಯಲ್ಲಿ ಸ್ವಲ್ಪ ಹಿಂದೆ ಇದೆ, ಅಲ್ಲಿ ಅಬ್ದುಲ್ ರಶೀದ್ ಅವರದ್ದು ಒಂದು ಪುಸ್ತಕ ಸಿಕ್ಕಿತು.
ಮತ್ತೆರಡು ಪುಸ್ತಕ ತಗೊಂಡು ಸಾಹಿತ್ಯ ಲೋಕಕ್ಕೆ ಬಂದೆ ಇನ್ನೂ ತೆಗೆದಿರಲಿಲ್ಲ, ಮತ್ತೆ ಇನ್ನೆಲ್ಲಿ ಅಂದಾಗ ಸುಧಾ ಬುಕ್ ಹೌಸ್ ನೆನೆಪಿಗೆ ಬಂತು, ಅಲ್ಲಿ ಅಬ್ದುಲ್ ರಶೀದ್ ಅವರ ಪುಸ್ತಕ ಯಾವುದಾದರೂ ಇದೆಯಾ ವಿಚಾರಿಸಿದರೆ ಇಲ್ಲಾ ಅನ್ನೋದೆ, ಸರಿ ಮತ್ತೆ ಸಾಹಿತ್ಯ ಲೋಕಕ್ಕೆ ಬಂದೆ ಇನ್ನೂ ತೆಗೆದಿಲ್ಲ, ಆಯ್ತು ಕಾಫಿ ಹುಯ್ಕೊಂಡು ಬಂದರು ಇನ್ನೂ ತೆಗೆದಿಲ್ಲ, ಮತ್ತೆ ಸಾಹಿತ್ಯ ಲೋಕಕ್ಕೆ ಹೋದೆ ಹು ಹೂ ತೆಗೆದಿಲ್ಲಾ,
ಸೀದಾ ಲಾವಣ್ಯಕ್ಕೆ ಹೋದೆ ಅಬ್ದುಲ್ ರಶೀದ್ ಅವರದ್ದು ಯಾವುದಾದರೂ ಇದೆಯಾ ಅಂದರೆ ಇಲ್ಲ ಅಂದರು.
ಸರಿ ಕಾಂತಾಪುರ ಇದೆಯಾ….ಕನ್ನಡನಾ ಇಂಗ್ಲೀಷ್ ಹಾ,
ಸರ್ ಕನ್ನಡ ಇಲ್ವಾ, ಅವರ ಮುಖ ನೋಡಿಯೇ ತಿಳಿತು ಇಲ್ಲ ಅಂತಾ,ಇಲ್ಲ ಅಂದರು ಅವರು. ಅಲ್ಲೊಬ್ಬರು ಯಾರೋ ಬಂದಿದ್ದವರು ಹೇಳಿದರು ಅಬ್ದುಲ್ ರಶೀದ್ ಅವರು ಲಕ್ಷದ್ವೀಪದಲ್ಲಿ ಇದ್ದಾರೆ ಅಂತಾ, ಅವರ ಪುಸ್ತಕಗಳಿಗಾಗಿ ನಾ ಲಕ್ಷದ್ವೀಪಕ್ಕೂ ಹೋಗುವಾ ಅನ್ನೋ ಪ್ಲಾನ್ ಬಂದಿದ್ದೆ ತಡ, ಇವಾಗ ಅಬ್ದುಲ್ ರಶೀದ್ ಅವರನ್ನ ಹುಡುಕಿಕೊಂಡು ಲಕ್ಷ ದ್ವೀಪಕ್ಕೆ ಹೋಗೋದೆ, ಹೋಗಿ ಕೇಳಿ ಕೆಳೋದೆ ನಿಮ್ಮ ಪುಸ್ತಕಗಳನ್ನು ಯಾಕೆ ಮತ್ತೆ ಮುದ್ರಿಸಿಲ್ಲಾ ಅಂತಾ, ಅದಕ್ಕಾಗಿ ಸ್ವಲ್ಪ ಸಮಯ ದುಡ್ಡು ಎತ್ತಿಟ್ಟು ಆ ದಿನಗಳಿಗೆ ಕಾಯುವುದು ಈಗ.
ರಘುವೀರ್ ಅವರಿಗೆ ಫೋನ್ ಹಾಯಿಸಿದೆ, ಸರ್ ಎಷ್ಟು ಘಂಟೆವರಗು ತೆಗೆದಿರ್ತಿರಾ ಮಳಿಗೆ,
ಸರ್ ಛಂದದ್ದು ಹೊಸ ಪುಸ್ತಕಗಳು ಬಂದಿವೆ ಅದರ ಪ್ರೀ ಆರ್ಡರ್ ತುಂಬಾ ಇವೆ ಅದರಲ್ಲಿ ಬಿಸಿ ಅಂದರು, ಸರಿ ಎಷ್ಟೊತ್ತಿಗೆ ಬರ್ತಿರಾ ಸರ್…..೮ ಘಂಟೆ ಆಗಬಹುದು, ಸರಿ ನಾನು ೭:೩೦ ಬರ್ತಿನಿ ಬಿಡಿ ಅಂತಾ ಹೇಳಿ.
ಇವಾಗ ಏನು ಮಾಡೋದು ಅಷ್ಟೊತ್ತು…. ಮ್ಯಾಪ್ ತಗೆದು ಯಾವುದಾದರೂ ಹತ್ತಿರದ ಪುಸ್ತಕದಂಗಡಿ ಇದೆಯಾ, ಮಲ್ಲೇಶ್ವರದಲ್ಲಿ ರೈನ್ ಬೋ ಬುಕ್ ಹೌಸ್ ಕಾಣಿಸಿದ್ದೆ ಸೀದಾ ಮಲ್ಲೇಶ್ವರಕ್ಕೆ ಹೋಗಿ, ಅವಳನ್ನು ಒಂದು ಕಡೆ ಸೇಫ್ ಆಗಿ ನಿಲ್ಲಿಸಿ, ರೈನ್ ಬೋಗೆ ಹೋದರೆ ಅಲ್ಲಿ ಇದ್ದವೆ ಕೆಲವು ಕನ್ನಡ ಪುಸ್ತಕಗಳು, ಯಾವುದು ನನಗೆ ಬೇಕಾದವು ಇರಲಿಲ್ಲ, ಮತ್ತೆ.
ಮ್ಯಾಪ್ ನೋಡು, ಕೆಲವೊಂದು ಬುಕ್ ಸ್ಟೋರ್ ಗಳು ಕಾಣಿಸಿದವು ಅವನ್ನೆಲ್ಲಾ ಹುಡುಕಿಕೊಂಡು ಅಲ್ಲೆಲ್ಲಾ ಅಬ್ದುಲ್ ರಶೀದ್ ಅವರ ಪುಸ್ತಕಗಳನ್ನ ಕೇಳಿದರೆ ಒಂದು ಕಡೆಯಾದರು ಸಿಗಬೇಡವೆ. ಹು ಹೂ ಎಲ್ಲಿಯೂ ಇಲ್ಲ.
ಸರಿ ಇನ್ನೇನು ಮಾಡೋದು ಮಲ್ಲೇಶ್ವರದ ಆ ರಸ್ತೆ ತುಂಬಾ ಓಡಾಡಿದ್ದೆ ಓಡಾಡಿದ್ದು.
ನಾ ಇವಾಗ ತಾನೆ ಓದೋದಕ್ಕೆ ನಾನು ಶುರು ಮಾಡಿದ್ದೀನಿ, ಫೋನಿನಲ್ಲಿ ಯಾರೋ ಹೇಳ್ತಾ ಇದ್ದರು, ನಾ ನಿಜವಾದ ಓದುಗನಾ ಅನ್ನಿಸ್ತು, ಇಲ್ಲ B.C ನಾ (Book Collector),ಡಿ.ಸಿ ಅಂತೂ ಆಗೋಕ್ಕೆ ಆಗಲ್ಲ B.C ಆಗಿದ್ದೀಯಲ್ಲ ಖುಷಿ ಪಡು ಮಾರಾಯಾ ಅಂತಾ ಹೇಳಿಕೊಂಡು.
ಅದೆ ಹಳೆ ಜನಗಳು ಹೊಸ ಮುಖಗಳು, ಹಳೆ ಅಂಗಡಿಗಳು ನನಗೆ ಹೊಸವು. ಅಲ್ಲೊಂದು ಕಾಫಿ ಶಾಪ್ ಕಾಣಿಸ್ತು ಬರ್ತಾ ಕುಡಿಯುವಾ ಅಂತಾ ರಸ್ತೆಯ ಕೊನೆಯವರೆಗೂ ಹೋಗಿ, ಕಾಫಿ ಕುಡಿತಾ ಇರಬೇಕಾದರೆ ಒಂದು ಫೋಟೋ ಬೇಕಲ್ಲ ಈಗ ಅರ್ಜೆಂಟ್ ಆಗಿ ಅಂತ ಪಕ್ಕದಲ್ಲಿ ಇದ್ದ ದಾರಿಹೋಕನ ಹತ್ತಿರ ಈ ದಾರಿಹೋಕ ಫೋಟೋ ತೆಗೆಸಿಕೊಂಡ.
ಮಲ್ಲೇಶ್ವರದ ಆ ಬೀದಿಗಳಲ್ಲಿ ಹೋಗ್ತಾ ಇದ್ದರೆ ಜೀವನ ಎಲ್ಲಾ ಇಲ್ಲೆ ಎಲ್ಲೋ ಕಳೆದು ಹೋಗಿದೆಯಾ ಅನ್ನಿಸ್ತು. ಈಗೆ ಸುತ್ತುತ್ತಾ ಇದ್ದು ಬಿಡುವಾ, ನನ್ನ ಮೊದಲ ಕೆಲಸ ನಾನೇ ಆಯ್ಕೆ ಮಾಡ್ಕೊಂಡಿದ್ದು ಸುತ್ತೋದು, ಎರಡನೆಯದ್ದೂ ಅದೆ, ಮೂರನೇಯ ಕೆಲಸ ಆಫೀಸಿನದಾದರೂ, ಪಿಜಿಯಿಂದ ಆಫಿಸಿಗೆ, ಆಫಿಸಿನಿಂದ ಪಿಜಿಗೆ, ಅಲ್ಲಿಂದ ಊರಿಗೆ ಸುತ್ತೋದು, ನಾಲ್ಕನೇ ಕೆಲಸ ಸೇರಿದಾಗ ಸುತ್ತೋಕೆ ಅಂತಾನೆ ಸೇರಿದ್ದು ಆದರೆ ಏನು ಮಾಡೋದು, ಅವರು ನನ್ನ ಪಿಜಿ ಹತ್ತಿರಾನೆ ಆಫಿಸ್ ಕೆಲಸ ಕೊಡೋದಾ, ಸ್ವಲ್ಪ ರೆಸ್ಟ್ ತಗೋ ಅಂತಾ,
ಅದು ಲಾಕ್ ಡೌನ್ ಮುಗಿಯುವವರೆಗೂ ಮಾತ್ರ, ಆಮೇಲೆ ಅವರೇ ಕರೆದು ಸುತ್ತೋ ಕೆಲಸ ಕೊಟ್ಟರು.
ಸುತ್ತೋದು ನನ್ನ ರಕ್ತದಲ್ಲೇ ಇದೆಯೇನೋ, ಬೆಟ್ಟಗಳಾದರೆನು ಬೆಂಗಳೂರಾದರೇನೂ, ನೋಡುವ ಕಣ್ಣಿನಲ್ಲಿ, ಎಲ್ಲಾ ಅಡಗಿದೆ. ನನಗೆ ಎಲ್ಲಾ ಒಂದೆ ಅನ್ನಿಸ್ತು.
ಹೀಗೆ ಜೆ.ಪಿ ನಗರಕ್ಕೆ ಹೋಗಿ ಬಿಡುವ ಅನ್ನಿಸ್ತು, ನಿಮಗೆ ಅನ್ನಿಅಬಹುದು ಇವನಿಗೇನು ಹುಚ್ಚಾ ಅಂತಾ, ಅದು ನಿಮ್ಮ ಅಭಿಪ್ರಾಯ, ಅವಳು ಇಲ್ಲ ಅಂದಿದ್ದರೆ ಹೋಗೆ ಬಿಡ್ತಾ ಇದ್ದನೇನೋ, ಅವಳನ್ನು ಹೀಗೆ ಬೀದಿಯಲ್ಲಿ ಬಿಟ್ಟು ಹೋಗೋದು ಬೇಡಾ ಅಂತಾ,ಸಮಯ ನೊಡೋ ಅಷ್ಟರಲ್ಲಿ ೮ ಘಂಟೆ, ಸಾಹಿತ್ಯ ಲೋಕಕ್ಕೆ ವಾಪಾಸ್ಸು ಬಂದು, ರಘು ಅವರಿಗೆ ಕಾದು ಅಲ್ಲಿ ಕಾಯ್ದಿರಿಸಿದಾ ಪುಸ್ತಕಗಳನ್ನ ತಗೊಂಡು, ಅವರು ಕೆಲವು ಪುಸ್ತಕಗಳನ್ನ ಸಜೆಸ್ಟ್ ಮಾಡಿದ್ರು, ಅವನ್ನೆಲ್ಲಾ ನೋಡಿಕೊಂಡು, ಅವರೊಂದಿಗೆ ಈ ದಿನದ ಮೂರನೆ ಕಾಫಿ ಕುಕ್ಕೊಂಡು ಸೀದಾ ಪಿಜಿಗೆ ಬಂದೆ.
ರಘುವೀರ್ ಅವರಿಗೆ ಅವರು ಮಳಿಗೆ ತೆಗೆದಿದ್ದರೆ ಇಷ್ಟೆಲ್ಲಾ ಅನುಭವಗಳನ್ನು ಮಿಸ್ ಮಾಡ್ಕೋತಾ ಇದ್ದೆ, ಮತ್ತೆ ನನಗಾಗಿ ಬಂದು ಮಳಿಗೆ ತೆಗೆದು ಪುಸ್ತಕಗಳನ್ನ ಕೊಟ್ಟರು. ಧನ್ಯವಾದಗಳು ರಘುವೀರ್ ಅವರಿಗೆ.
ಮಲ್ಲೇಶ್ವರದ ಬೀದಿಗಳಲ್ಲಿ ನಿಜಕ್ಕೂ ಒಂದು ಹೊಸ ಲೋಕವೆ ದಕ್ಕಿತು ನನಗೆ, ಜೀವನದ ಅನಂತ ಪಯಣದಲ್ಲಿ ಇದು ಒಂದು. ಮರೆಯಲಾಗದ ಒಂದು ದಿನ.
ಚೆನ್ನಾಗಿದೆ ನಿಮ್ಮ ಲೋಕ ಸಂಚಾರ. ಇಂಟೆರೆಸ್ಟಿಂಗ್