ಗೀತಾ ಹೆಗ್ಡೆ ಕಲ್ಮನೆ
ಹನುಮ ಕೇಳುತ್ತಾನೆ
“ನನ್ನ ಹಬ್ಬ ನೀವ್ ಎಂತಕ್ ಮಾಡೂದು?”
ಆದರೆ ಜನ ಕೇಳಬೇಕಲ್ಲಾ.
ಗುಡಿ ಗೋಪುರಗಳು ಎದ್ದು ನಿಂತಿವೆ
ಎಲ್ಲಂದರಲ್ಲಿ ಉದ್ಭವ ಮೂರ್ತಿಯಂತೆ
ಏಕಶಿಲಾ ಮೂರ್ತಿಯಂತೆ ಹಾಗೆ ಹೀಗೆ..
ಮತ್ತೊಂದು ಮಗದೊಂದು
ನಗರ ಬೆಳೆದಂತೆ ದಾರಿ ಸವೆದಂತೆ ಜನ ಸಂಖ್ಯೆ ಹೆಚ್ಚಾದಂತೆ
ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕಲ್ವಾ?
“ಅದೌದು,
ಅಲ್ಲಾ ನಾ ಯಾವ ಗುಡೀಲಿ ಹೇಳಿ ಹೋಗಿ ಕೂಕಳ್ಲಿ?
ಅಬ್ಬಾ! ಅದ್ಯಾವ್ ಪಾಟಿ ವಿಳ್ಯೆದೆಲೆ ಹಾರ
ಸುತ್ತಿ ಸುತ್ತಿ ನನ್ನ ಮೈಯ್ಯೆಲ್ಲ ಬಲೂ ಒಜ್ಜಿ
ಪೊಗದಸ್ತಾಗಿ ತಿನ್ನೂ ತಿನ್ನೂ ಅಂತೀರಿ
ನನಗೂ ಹೊಟ್ಟಿ ಕೇಡೂಕಿತ್ ಮತ್ತೆ…..
ಅದು ಗೊತ್ತಿತ್ತಾ ನಿಮಗೆ?”
ಹೇಳುವ ಹನುಮನ ಮಾತು
ಬಾಜಾ ಭಜಂತ್ರಿಯ ಗೌಜು ಗಲಾಟೆಯಲ್ಲಿ
ಅಖಾಡದಲ್ಲಿ ಉಡುಗಿ ಹೋಯಿತು.
ಹನುಮಾ ಮೂತಿ ಊದಿಸಿಕೊಂಡು ನೋಡ್ತಾನೇ ಇದ್ದಾ!
ಜನ ಬರೋದು ಹೋಗೋದು ನಡಿತಾನೇ ಇತ್ತು
ಬಗ್ಗಿ ಬಗ್ಗಿ ತನ್ನ ಬಾಲದ ಕಡೆ
ನೋಡ್ತಾನೇ ಇದ್ದ ನೋಡ್ತಾನೇ ಇದ್ದಾ
ಅವನಿಗೆ ಅನುಮಾನ ಬಂತು
ಅರೆರೆ ನನ್ನ ಬಾಲಕ್ಕಿಂತ ಜನರ ಕ್ಯೂ ಉದ್ದ ಜಾಸ್ತಿ ಇದೆಯಲ್ಲಾ
ಅರೆ ಇಸಕಿ!
ಕಣ್ಣಲ್ಲೆ ಅಳತೆ ಮಾಡುತ್ತಾ ಮಾಡುತ್ತಾ
ಕೋಪ ನೆತ್ತಿಗೇರಿತು.
“ಬಿಡ್ತೀನಾ ನಾನು ”
ಸುತ್ತದಾ ಸುತ್ತದಾ ಸುತ್ತದಾ…
ಮೇಲೆ ಮೇಲೆ ಮೇಲೆ ಏರಿ ಕುಳಿತಾ
ರಾವಣನ ಮುಂದೆ ಕೂತಾಂಗೆ!
ಈಗ ಸ್ವಲ್ಪ ಸಮಾಧಾನ ಆಯಿತು
ಒಮ್ಮೆ ಮುಗುಳು ನಕ್ಕ
“ಆದರೂ…
ಇಲ್ಯಾಕೊ ಇರೋದೇ ಬ್ಯಾಡಾ
ಮಂಡಿ ಬಿಸಿ ಆಯ್ತಿದೆ”
ಸುತ್ತ ಮುತ್ತ ದೃಷ್ಟಿ ಹಾಯಿಸಿದ
ದೂರದಲ್ಲಿ ಮಸಾಲೆ ಅರಿತಾ ಇದ್ದಾರೆ?
ಯಾಕೋ……ಡೌಟು…..
“ಇವತ್ತು ಏನೊ ನನ್ನ ಪೂಜೆ ಮಾಡ್ತೀರು…..
ನಮ್ಮ ವಾನರ ಸೇನೆ ಕೈಗೆ ಸಿಕ್ಕರೆ ಬಿಟ್ಟಾರಾ?
ಢಮ್ ಢಮಾರ್ ಮಾಡೂಕಿಲ್ಲಾ ಅಂತ ಯಾವ ಗ್ಯಾರಂಟಿ?”
ಮನಸಿಗಾದ ಇರಿಸು ಮುರಿಸು
ಪೂಜಾರಿ ಡೊಂಬರಾಟ, ಭಕ್ತರ ಪರದಾಟ
ಗಡಚಿಕ್ಕುವ ಮೈಕಾಟ.
“ಅಯ್ಯೋ! ಸಾಕಪ್ಪಾ ಈ ಜನರ ಸಾವಾಸ
ನೆಮ್ಮದಿ ಇಲ್ಲದ ಇವರ ಪೂಜಿಗಿಂತ
ನಮ್ಮ ಕಾಡೇ ಎಷ್ಟೋ ವಾಸಿ”
“ನಡಿ ನಡಿರಿ
ಎಲ್ಲಾ ಹೋಪಾ
ಇವರು ಮಾಡುವ ಬರ್ತಡೇನೂ ಬ್ಯಾಡಾ
ಎಂತದೂ ಬ್ಯಾಡಾ
ಇವರನ್ ನಂಬೂಕೆಡಿಯಾ”
ಹನುಮನೂ ಹೆದರಿಬಿಟ್ಟಾ!!
0 ಪ್ರತಿಕ್ರಿಯೆಗಳು
Trackbacks/Pingbacks