ಖ್ಯಾತ ಸಾಹಿತಿ ಸ ರಘುನಾಥ್ ಅವರು ಈಗ ಸಮಗ್ರ ಸಾಹಿತ್ಯದ ಸಂಭ್ರಮದಲ್ಲಿದ್ದಾರೆ. ಅವರ ಈವೆರೆಗಿನ ಎಲ್ಲಾ ಸಾಹಿತ್ಯ ೯ ಸಂಪುಟಗಳಲ್ಲಿ ಹೊರಬರುತ್ತಿದೆ. ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.
ಕೋಲಾರ ಜಿಲ್ಲೆಯವರಾದ ಸ. ರಘುನಾಥ್ ಅವರ 34 ಕೃತಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ 14 ಕೃತಿಗಳನ್ನು ಅನುವಾದ ಮಾಡಿದ್ದಾರೆ.
ಇವರಿಗೆ ಕುವೆಂಪು ಭಾ಼ಷಾಭಾರತಿ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ.
ಈಗ ಇವರ ಕವನ, ಕತೆ, ಅನುವಾದ, ಮಕ್ಕಳ ಸಾಹಿತ್ಯ ಸೇರಿ ಒಟ್ಟು 8 ಪುಸ್ತಕಗಳು ಹೊರಬರುತ್ತಿದೆ. ಈ ಸಮಗ್ರ ಸಾಹಿತ್ಯ ಹೊರಬರುತ್ತಿರುವ ಹಿನ್ನೆಲೆ ಅವಧಿ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.
ಇದು ಸಮಗ್ರ ಪುಸ್ತಕ ಹಬ್ಬ ಅಪರೂಪದ್ದು~ ಏನನಿಸುತ್ತಿದೆ ?
ಅಪರೂಪದ್ದು ಅನ್ನುವುದರಲ್ಲಿಯೇ ಒಂದು ಸಂಭ್ರಮ ಇದೆ. ಎಲ್ಲೋ ಕಳೆದು ಹೋದವನನ್ನ ಎಳೆದು ತಂದು ನಿಲ್ಲಿಸಿದೆ ಈ ಸಮಗ್ರ ಪುಸ್ತಕ ಹಬ್ಬ.
ಸಮಗ್ರ ಅನ್ನೋದು ಬರವಣಿಗೆಗೆ ಪೂರ್ಣ ವಿರಾಮಾನಾ ?
ಸಮಗ್ರ ಅನ್ನೋದು ನಾನು ಏನೇನೆಲ್ಲ ಮಾಡದೆ ಇದೀನಿ ಅಂತಾ ಮೂಡಿಸುವ ಅರಿವದು.
ನಿಮ್ಮ ಬರಹಕ್ಕೆ ಬೇಕಿದ್ದ ಮನ್ನಣೆ ಸಿಕ್ಕಿದೆಯಾ ?
ನಾವು ಮನ್ನಣೆಯನ್ನು ನಿರೀಕ್ಷೆ ಮಾಡಿದರೆ ಮಣ್ಣಿಗೆ ಹೋದಂತೆ. ಮನ್ನಣೆ ಹಿಂದೆ ಹೋಗದೆ ಬರವಣಿಗೆಯನ್ನು ನನ್ನ ಮುಖ ಕಾಣದ ಹಾಗೆ ಇಟ್ಟು ಹೋಗುವುದೇ ನನಗೆ ಮನ್ನಣೆ.
‘ಸ’ ಅಂದ್ರೆ ಬರವಣಿಗೆಯ ‘ಸರಿಗಮ’ನಾ ?
ಸುಬ್ರಮಣ್ಯ ಅನ್ನೋದು ನನ್ನ ತಂದೆ ಹೆಸರು. ಬಾಲ್ಯದಲ್ಲಿ ನನಗೆ ಇನಿಶಿಯಲ್ ಹೇಗೆ ಇಟ್ಟುಕೊಳ್ಳಬೇಕು ಅನ್ನೋದು ತಿಳಿದಿರಲಿಲ್ಲ. ಹಾಗಾಗಿ ಸು ಹೋಗಿ ಸ ಬಂದಿದೆ.
ನಿಮ್ಮೊಳಗೆ ಅಧ್ಯಾಪಕನಿಗೆ ಮೊದಲ ಜಾಗಾನಾ, ಸಾಹಿತಿಗೆ ಮೊದಲಾ ?
ಅಧ್ಯಾಪಕ ಸಮಾಜಕ್ಕೆ ಸೇರಿದವನು. ಅವನ ನೆರಳಲ್ಲಿ ಸಾಹಿತಿ ಇರುತ್ತಾನೆ. ಹೀಗಾಗಿ ಅಧ್ಯಾಪಕ ಮುಂದೆ, ಸಾಹಿತಿ ಅವನ ಹಿಂದೆ.
0 ಪ್ರತಿಕ್ರಿಯೆಗಳು