ಉದಯ ಗಾಂವಕರ
**
ಮಕ್ಕಳು ಬರೆಯೋದಿಲ್ಲ. ಏಳನೆಯ ತರಗತಿ ಮಕ್ಕಳಿಗೆ ಐದನೆಯ ತರಗತಿಯ ಪುಸ್ತಕ ಓದಲು ಬರೋದಿಲ್ಲ. ಇತ್ಯಾದಿ ಸಮೀಕ್ಷೆಗಳ ನಡುವೆ ಮಕ್ಕಳ ಸಾಹಿತ್ಯ ಸಂಭ್ರಮ ನಡೆಯಿತು. ಎಪ್ಪತೈದು ತಾಲೂಕುಗಳ ಸುಮಾರು 300 ಶಾಲೆಗಳ ಮಕ್ಕಳು ಕವಿತೆ ಬರೆದರು, ಕತೆ ಕಟ್ಟಿದರು, ಸಂದರ್ಶನ ನಡೆಸಿದರು, ನಾಟಕವಾಡಿದರು. ಕತೆ ಕಾರ್ನರಿಗೆ ಬಂದ ಪ್ರತಿ ಮಗುವೂ ಕತೆ ಬರೆದು ಹಂಚಿಕೊಂಡಿದೆ. ಈ ಎಪ್ಪತೈದು ಸಂಭ್ರಮಗಳಲ್ಲಿ ಏನಿಲ್ಲವೆಂದರೂ ಹತ್ತು ಸಾವಿರ ಕತೆಗಳು ಹುಟ್ಟಿಕೊಂಡಿವೆ.
ಈವತ್ತು ಉಡುಪಿಯ ಮಕ್ಕಳು ಬರೆದ ಕತೆಗಳನ್ನು ಓದಲು ಸೇರಿದ್ದೆವು. ಒಂದು ಮಗು ಬೆಕ್ಕೊಂದು ತನ್ನ ಮರಿಗಳೊಡನೆ ಮಾತಾಡುತಿತ್ತು- “ಅಲ್ಲ, ಈ ಮನುಷ್ಯರಿಗೆ ಸ್ವಲ್ಪನೂ ಬುದ್ಧಿ ಇಲ್ಲ, ಗಾಜಿನ ಚೂರುಗಳನ್ನೂ ಮೀನಿನ ತಲೆಯನ್ನೂ ಒಂದೇ ಕಸದ ಬುಟ್ಟಿಯಲ್ಲಿ ಹಾಕ್ತಾರಾ?!” ಎನ್ನುತ್ತದೆ. ಮೂರ್ಖ ಬೇಟೆಗಾರನೊಬ್ಬ ಆನೆಯನ್ನು ಕೊಲ್ತಾನೆ. ಆ ನಂತರ ಸತ್ತ ಆನೆಯನ್ನು ಸಾಗಿಸಲು ಪ್ರಯತ್ನ ಮಾಡ್ತಾನೆ. ಬಾಲ ಎಳಿತಾನೆ, ಕಾಲುಗಳನ್ನು ಹಿಡಿದು ಎಳಿತಾನೆ. ಸೊಂಡಿಲು ಹಿಡಿದು ಎಳಿತಾನೆ. ಕೊನೆಗೆ ಸುಸ್ತಾಗಿ ಸಾಯ್ತಾನೆ.
ಒಬ್ಬಳು ಹುಡುಗಿ ತನ್ನ ಸಾಧನೆಯ ಕತೆ ಬರೆದಿದ್ದಾಳೆ. ತಾನು ಚರ್ಚಾ ಸ್ಪರ್ಧೆಯಲ್ಲಿ ಗೆದ್ದಿದ್ದು, ಪ್ರಶಸ್ತಿ ಸನ್ಮಾನಗಳನ್ನು ಪಡೆದದ್ದು ಎಲ್ಲವನ್ನೂ ಹೇಳ್ಕೊಳ್ತಾ ಶಾಲಾ ಮಂತ್ರಿಮಂಡಳ ರಚನೆಯ ಚುನಾವಣೆಯಲ್ಲಿ ಸ್ಪರ್ಧಿಸಿದ ನೆನಪುಗಳನ್ನು ಬರೆದಿದ್ದಾಳೆ. ಆಕೆಗೆ ಚುನಾವಣೆಯಲ್ಲಿ ತನ್ನೊಬ್ಬಳ ವೋಟ್ ಹೊರತುಪಡಿಸಿ ಬೇರೆ ವೋಟ್ ಸಿಗಲಿಲ್ವಂತೆ. ಆಕೆಗೆ ಆ ಸೋಲನ್ನೂ ಹೇಳಿಕೊಳ್ಳುವ ತೆರೆದ ಮನವಿದೆ. ಧೈರ್ಯವಿದೆ. ಇದು ದೊಡ್ಡದೊಂದು ಗಣಿ. ಈಗಷ್ಟೇ ಓದಲು ಕುಳಿತಿರುವೆ.
0 ಪ್ರತಿಕ್ರಿಯೆಗಳು