-ನಾ.ಬಾಲಕೃಷ್ಣ
ದೂರದ ಮಿನಾದಲ್ಲೆಲ್ಲೋ
ಕಲ್ಲು ಹೊಡೆದು ಸೈತಾನನ್ನು ಅಟ್ಟಿಬಿಡುತ್ತಾರಂತೆ
ಮತ್ತೆಲ್ಲೋ ಆತ ಹಿಂದಿರುಗದಂತೆ
ಗೋರಿಗೆ ಮೊಳೆ ಜಡಿದಿದ್ದಾರಂತೆ
ಇಂತೆಲ್ಲಾ ಅಂತೆಕಂತೆಯೆಡೆಗೆ
ನಾನಿನ್ನೂ ಭೇಟಿಯಿತ್ತಿಲ್ಲ.
ಹುಟ್ಟಿನ ಸಂಕೋಲೆಯೊಳಗೇ
ಬಂಧಿಯಾದವನಿಗೇಕೆ ಈ ಹಂಬಲ?
ಹೊತ್ತುಗೊತ್ತಿಲ್ಲದ ಅವೇಳೆ
ಈ ಸೈತಾನ ಮೈದಾಳುತ್ತ
ಹಪಹಪಿಸಿ ಹಂಬಲಿಸಿ
ಉಬ್ಬು ತಗ್ಗುಗಳ ಜೀವಂತ ಹೊಸಕಿ
ಯಾವ ಸೂತ್ರದ ಕುಣಿಕೆಗೂ
ಉರುಳಾಗದ ಈ ಪಿಪಾಸು
ದ್ವಿಲಿಂಗಿಯೋ ಸಲಿಂಗಿಯೋ
ಅರಿವಾಗುವ ಮುನ್ನ
ಹಿಟ್ಲರನಂತೆ ಫೂತ್ಕರಿಸಿ
ನೆತ್ತರ ಹೀರುತ್ತ
ಉಳ್ಳವರ ಸರಕಾಗಿ
ದಶಾವತಾರ ತಾಳಿ
ಚಾಲ್ತಿಯ ಕಿಮ್ಮತ್ತಾಗಿ
ಎಲ್ಲರನ್ನೂ ಹುರಿದು ಮುಕ್ಕುತ್ತಾನೆ.
ಇವನ ಚಹರೆ ವಿಳಾಸಕ್ಕಾಗಿ
ಅಂತರ್ಜಾಲ ಜಾಲಾಡಿ
ಕಾನೂನಿನ ಅಧ್ಯಯನದಲ್ಲಿ
ಮುಳುಗಿ ತೇಲುವ ಮಹನೀಯರು
ಬರಿಗೈ ಅಲ್ಲಾಡಿಸಿಬಿಡುತ್ತಾರೆ.
ಇವನ ಹುಡುಕಿ
ಹೆಡೆಮುರಿ ಕಟ್ಟಿ
ವಿನಾಶಮಾಡುವ
ಸಾಧ್ಯತೆಯ ವ್ಯವಸ್ಥೆಯತ್ತ
ಛಲದಿಂದ ನಡೆದವರ
ಉದ್ದನೆಯ ಸಾಲಲ್ಲಿ
ನಾನೂ ಉಪಸ್ಥಿತನಿದ್ದೇನೆ.







chennagide.
nice..nimmondige naavu iddeve..!!!