ಎಂ ಶೈಲೇಶ್ ಕುಮಾರ್ ಎಂದರೆ ಯಾರಿಗಾದರೂ ಗೊತ್ತಾಗುತ್ತದೋ ಇಲ್ಲವೋ..! ಅದೇ ‘ಸೈಡ್ ವಿಂಗ್’ ಶೈಲೇಶ್ ಕುಮಾರ್ ಎಂದು ಹೇಳಿ ತಕ್ಷಣ ಗುರುತು ಸಿಕ್ಕಿಬಿಡುತ್ತದೆ. ‘ಸೈಡ್ ವಿಂಗ್’ ರಂಗ ತಂಡ ಹಾಗೂ ಶೈಲೇಶ್ ಒಂದೇ ನಾಣ್ಯದ ಎರಡು ಮುಖಗಳು.
ರಂಗಭೂಮಿಯಲ್ಲಿ ಇಂದಿನ ತುರ್ತುಗಳತ್ತ ಗಮನ ಹರಿಸಿರುವ ಕೆಲವೇ ನಾಟಕಕಾರರಲ್ಲಿ ಶೈಲೇಶ್ ಪ್ರಮುಖರು. ಸದಾ ಹೊಸದನ್ನು ಅಪ್ಡೇಟ್ ಮಾಡಿಕೊಳ್ಳುತ್ತಾ ಹೋಗುವ ಶೈಲೇಶ್ ಅವರ ನಾಟಕಗಳೂ ಸಹಾ ಇಂದಿನ ಮಾಡರ್ನ್ ಪೀಳಿಗೆಯ ನಾಳಿನ ಯೋಚನೆಗಳ ಬಗ್ಗೆ.
ಚಿಕ್ಕಂದಿನಿಂದಲೇ ಸಿನಿಮಾ ರಂಗದತ್ತ ಒಲವನ್ನು ಹೊಂದಿದ್ದ ಇವರು ಮೊದಲು ಎಂಟ್ರಿ ಕೊಟ್ಟದ್ದು ಮಾತ್ರ ರಂಗಭೂಮಿಗೆ. ಈಗ ‘ಸೈಡ್ ವಿಂಗ್ ಸಿನೆಮಾಸ್’ ರೆಕ್ಕೆ ಬಿಚ್ಚಿ ಹಾರಲು ಸಜ್ಜಾಗಿದೆ.
ಸಿನಿಮಾರಂಗಕ್ಕೆ ಲಗ್ಗೆ ಇಡುತ್ತಿರುವ ಶೈಲೇಶ್ ಕುಮಾರ್ ಅವರೊಂದಿಗೆ ‘ಅವಧಿ’ ನಡೆಸಿದ ಫಟಾ ಫಟಾ ಸಂದರ್ಶನ ಇಲ್ಲಿದೆ.
ರಂಗದಿಂದ ಸಿನಿಮಾ ರಂಗಕ್ಕೆ ಏನನ್ನಿಸುತ್ತಿದೆ ?
ಚಿಕ್ಕ ವಯಸ್ಸಿನಲ್ಲಿ ಸಿನಿಮಾ ಜಗತ್ತನ್ನ ನೋಡಿ ಬೆರಗಾಗಿ ನಾನು ಸಿನಿಮಾರಂಗದಲ್ಲಿ ಏನಾದರೂ ಮಾಡಬೇಕೆಂದು ಕನಸು ಕಂಡಿದ್ದೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ತುಂಬಾ ಖುಷಿಯಾಗ್ತಿದೆ.
ʼಶೈಲೇಶ್ʼ ನೀವು ಯಾವತ್ತಾದ್ರೂ ʼಶೈʼ ಆಗಿದ್ರಾ ?
ಸಿಕ್ಕಾಪಟ್ಟೆ ಶೈ ನೇಚರ್ ನಂದು. ಕಾಲೇಜ್ ದಿನಗಳಲ್ಲಿ ಪ್ರೈಜ್ ತಗೊಳೊಕೆ ಸ್ಟೇಜ್ ಮೇಲೆ ಹೋಗೋಕೂ ನಾಚಿಕೊಂಡವನು ನಾನು. ಈಗ ಆ ಸ್ವಭಾವ ಸ್ವಲ್ಪ ಬದಲಾಗಿದೆ.
ಸಿನಿಮಾ ರಂಗಕ್ಕೆ ಬರುವ ಆಶಯ ಮೊದಲೇ ಇತ್ತೇ ?
ಖಂಡಿತವಾಗ್ಲೂ ಇತ್ತು. ಮೊದಲೇ ಹೇಳಿದ ಹಾಗೆ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಬರಬೇಕು ಎಂದು ಕನಸು ಕಂಡಿದ್ದೆ. ಬರವಣಿಗೆಯೂ ಗೊತ್ತಿರುವುದರಿಂದ ನಟನೆ ಬರವಣಿಗೆ ಯಾವುದೇ ಅವಕಾಶ ಸಿಕ್ಕರೂ ಉತ್ತಮವಾಗಿ ಬಳಸಿಕೊಳ್ಳುತ್ತೇನೆ ಎನ್ನುವ ಆತ್ಮ ವಿಶ್ವಾಸ ನನಗಿದೆ.
ನಾಟಕ ಮತ್ತು ಸಿನಿಮಾಕ್ಕೆ ವ್ಯತ್ಯಾಸವೇನು ?
ಬಿ ವಿ ಕಾರಂತರು ಒಮ್ಮೆ ಹೇಳಿದ್ದರು ಟಿವಿಯಲ್ಲಿ ನಾವಿದ್ದದ್ದಕ್ಕಿಂತ ಸಣ್ಣದಾಗಿ ಕಾಣ್ತೀವಿ, ಸಿನಿಮಾದಲ್ಲಿ ನಾವೇನಿರ್ತೀವೋ ಅದಕ್ಕಿಂತ ದೊಡ್ಡದಾಗಿ ಕಾಣ್ತೀವಿ, ಆದರೆ ರಂಗಭೂಮಿಯಲ್ಲಿ ನಾವು ಹೇಗೆ ಇರುತ್ತೇವೋ ಹಾಗೆ ಕಾಣ್ತೀವಿ ಅಂತ.
ನೀವು ನಟಿಸಿದ ಪಾತ್ರಗಳಲ್ಲಿ ಯಾವುದು ಹೆಚ್ಚು ಆಪ್ತ ?
‘ರಾಕ್ಷಸ ತಂಗಡಿ’ ನಾಟಕದ ರಾಮರಾಯರ ಪಾತ್ರ ನನಗೆ ತುಂಬಾ ಇಷ್ಟವಾದ ಪಾತ್ರ ಹಾಗೂ ನಾನೇ ಬರೆದು ನಿರ್ದೇಶನ ಮಾಡಿದ ‘ಸಡನ್ನಾಗಿ ಸತ್ತೋದ್ರೆ’ ಅನ್ನೋ ನಾಟಕದ ವೆಂಕಟೇಶಜ್ಜ ಪಾತ್ರ ನನಗೆ ಬಹಳ ಆಪ್ತ ಪಾತ್ರ.
ಶುಭವಾಗಲಿ