ಪ್ರತಿಭಾ ನಂದಕುಮಾರ್
ಹೇಳುತ್ತಾರೆ ನೆರಳಿನ ಜೊತೆ ಕುಸ್ತಿ ಮಾಡಲಾಗುವುದಿಲ್ಲ.
ನೆರಳಿನಂತಿರುವವರ ಜೊತೆ ಕೂಡಾ
ಬೀಜ ಒಡೆದ ಹೋರಿಗಳು
ಅರೆನಗ್ನ ಅಧೀನಮುಗಳು
ತೊಡೆತಟ್ಟಿ ಬೆದರಿಸುವ ಪೈಲ್ವಾನ ಭಕ್ತರು
ಆಕಾಶದಿಂದ ಆಶರ್ವದಿಸುವ ಜರತಾರೀ ಗಡ್ಡಧಾರಿ.
At the stroke of mid night ಬಂದ
ನಲವತ್ತೇಳರ ಸ್ವಾತಂತ್ರ್ಯ ಯಾರಿಗೆ ಬಂತು
ಎಂದು ಕೇಳಿದರೆ ಉತ್ತರಿಸುತ್ತಿಲ್ಲ ಟೀವಿಯವರು
ಹೆಣ್ಣುಮಕ್ಕಳು ಅಳುತ್ತಾರೆ ಅಂದರೆ
ಭಕ್ತರು ಪುರಾವೆಗಳನ್ನು ಕೇಳುತ್ತಾರೆ.
ನಮ್ಮೂರಲ್ಲಿ ಗೋವು ಮಾತ್ರ ಮಾತೆ
ಹೆಮ್ಮಕ್ಕಳು ಕಂಡವರ ಕಾಲುಕಾಲಿಗೆ
ಬಚಾವ್ ಬಚಾವ್ ಗುಬ್ಬಿಯ ಕೂಗು
ಬ್ರಹ್ಮಾಸ್ತ್ರದ ಬೆದರಿಕೆ ಒಡ್ಡಿದ ಜಗದ್ಗುರು
ಕುಸ್ತಿಪಟುಗಳ ಬಗ್ಗೆ ಹೇಳುತ್ತಾ ಹಕ್ಕಿಪಕ್ಕಿ ಅನ್ನಬಾರದು
ಜಂತರ್ ಮಂತರ್ ನಲ್ಲಿ ಜಂಗೀ ಕುಸ್ತಿ
ಇದು ಈಡುಜೋಡಲ್ಲ
ಇಡೀ ಸೈನ್ಯ ಬಂದಿಳಿದಿದೆ ಬಲೆ ಹಿಡಿದು.
ಕಾಶಿಯ ಕಾರಿಡಾರುಗಳಲ್ಲಿ
ಹರಿದ್ವಾರದ ಗಂಗಾರತಿಗಳಲ್ಲಿ
ತೊಳೆದುಹೋಗುವುದೇ
ಭಂಡ ಬ್ರಿಜ ಭೂಷಣನ ಅತಿ ರತಿ?
ತಪ್ಪಿಹೋಗುವುದೇ ಮುರುಘಾ ಶರಣರ ಜೊತೆ
ಕಂಬಿ ಎಣಿಸುವ ಸೌಭಾಗ್ಯ?
ಹೂವೆರಚಿಸಿಕೊಂಡವರಿಗೆ ಇನ್ನೂ ಕಾವೇರಿಲ್ಲ
ಅವರು ಗೆದ್ದದ್ದು ಮೆಡಲೇ ಅಲ್ಲ, ಅಸಲಿಗೆ ಗೆದ್ದೇ ಇಲ್ಲ
ಇವರು ಜೊತೆಗೆ ನಿಂತು ಫೋಟೋ ತೆಗೆಸಿಕೊಂಡೇ ಇಲ್ಲ
ಪಾಪ ಬೆರಳಿಟ್ಟರೆ ಕಚ್ಚಲೂ ಗೊತ್ತಿಲ್ಲ
ಅಖಾಡಕ್ಕಿಳಿದ ಮೇಲೆ ಮುಕ್ಕಲೇಬೇಕು ಮಣ್ಣು
ಎದ್ದು ನಿಂತಿದ್ದಾಳೆ ಕನಲಿ ಕುದಿಯುತ್ತ ಹೆಣ್ಣು.
ಇಷ್ಟಕ್ಕೇ ಮುಗಿಯುವುದಿಲ್ಲ
ಸೆಂಗೋಲಿನ ಪಾತ್ರಧಾರಿಯ ನಾಟಕ
ಪಾತ್ರ ಬದಲಾದಂತೆ
ಸೆಂಗೋಲು
ಆಗಿ ಬಾರುಕೋಲು
ಆಗಿ ಮಡಿ ಕೋಲು
ಆಗಿ
ಊ
ರು
ಗೋ
ಲು
….
ಹೃದಯ ಹಿಂಡುವ ಘಟನೆಗಳಿಗೆ ಸಾತ್ವಿಕ ಸಿಟ್ಟಿನ ಪ್ರತಿರೋಧದ ಕವಿತೆ , ಬಡಿದೆಬ್ಬಿಸುವಂತಿದೆ
ಹೃದಯ ಹಿಂಡುವ ವೇದನೆಯ ಕೂಗಿಗೆ ಪ್ರತಿಕ್ರಯಿಸುವಾಗಿನ ಸಾತ್ವಿಕ ಸಿಟ್ಟು ಅದ್ಭುತವಾಗಿ ಬಾರುಕೋಲಿನಂತೆ ಬಡಿದೆಬ್ಬಿಸುತ್ತದೆ. ಉತ್ತಮ ಕವಿತೆ