ಸುಧಾ ಆಡುಕಳ
ಅತಿಥಿ
ಆಚೆಯಿಂದ ಅವನ ಫೋನ್. ‘ನಾಳೆ ನಿಮ್ಮ ಮನೆಗೆ ಬರಲೇನು?’
ಅವಳೆಂದಳು, ‘ಬನ್ನಿ ಪರವಾಗಿಲ್ಲ. ಆದರೆ ಇವರು, ಮಕ್ಕಳು ಯಾರೂ ಮನೆಯಲ್ಲಿರುವುದಿಲ್ಲ.’
ಅವನೆಂದ, ‘ಇಲ್ಲ, ಹಾಗಾದರೆಇನ್ನೊಮ್ಮೆ ಬರುವೆ.’
ಅವಳು ನಕ್ಕಳು, ‘ಬನ್ನಿ, ಅದಕ್ಕೇನಂತೆ?’
ಅವನು ವಿಚಾರಿಸಿದ, ‘ನಿಮಗೇನೂ ತೊಂದರೆಯಿಲ್ಲವೆ?
ಅವಳು ನಕ್ಕಳು, ‘ನೀವು ಮಾಡಿದರೆ ಇದೆ ಅಷ್ಟೆ.’
ಏಕಾಂತ
ಅವನು ಅವಳಿಗೆ ಎಷ್ಟೊಂದು ಹೆದರುತ್ತಾನೆ. ಒಂದು ಕ್ಷಣವೂ ಅವಳೊಂದಿಗೆ ಒಂಟಿಯಾಗಿರಲಾರ. ಅವಳಿಗಿಲ್ಲ ಆ ಭಯ!
ಅವನು ಶೂರನೂ, ಧೀರನೂ ಆಗಿದ್ದನು ಎಂಬ ಪುರುಷರ ಇತಿಹಾಸವನ್ನುಓದುವಾಗಲೆಲ್ಲ ಅವಳು ಬಿದ್ದೂ ಬಿದ್ದೂ ನಗುತ್ತಾಳೆ.
ಪಾರಿವಾಳ ಮತ್ತು ಮಗು
ಮನೆಯ ಮಾಡಿನಲ್ಲಿ ಪಾರಿವಾಳವೊಂದು ಮರಿ ಹಾಕಿ ಹಕ್ಕಿಗಳ ಕಿಚಿಪಿಚಿ ತುಂಬಿತ್ತು. ಅವಳು ಮಗುವಿಗೆ ಊಟ ಮಾಡಿಸುವಾಗಲೆಲ್ಲ ಪಾರಿವಾಳದ ಕಥೆ ಹೇಳುತ್ತಿದ್ದಳು. ಈಗ ಪಾರಿವಾಳದಮ್ಮ ಮಗುವಿಗೆ ತುತ್ತು ತಿನ್ನಿಸುತ್ತಿದ್ದಾಳೆ. ಮರಿ ಪಾರಿವಾಳ ಗುಳುಂ ಎಂದು ನುಂಗುತ್ತಿದೆ. ಕಥೆ ಕೇಳುವ ಮಗು ತಾನೂ ಸಲೀಸಾಗಿ ಊಟವನ್ನು ಮುಗಿಸುತ್ತಿತ್ತು. ಕೇವಲ ಅರ್ಧ ಗಂಟೆಯ ಊಟದ ವಿರಾಮದಲ್ಲಿ ಓಡಿ ಬಂದು ಮಗುವಿಗೆ ತುತ್ತು ತಿನ್ನಿಸಿ ಹೋಗಬೇಕಾದ ಅನಿವಾರ್ಯತೆ ಆಕೆಯದು.
ಒಂದು ದಿನ ಊಟ ಮಾಡಿಸುವಾಗ ಇದ್ದಕ್ಕಿದ್ದಂತೆ ಮಗು ಹೇಳಿತು, ‘ಅಮ್ಮಾ, ನನ್ನನ್ನೂ ಪಾರಿವಾಳದಮ್ಮನಿಗೆ ಕೊಟ್ಟುಬಿಡು.’ ಅವಳು ಅವಾಕ್ಕಾಗಿ ಕೇಳಿದಳು, ‘ಯಾಕೋ ಪುಟ್ಟಾ?’ ಮಗು ನಿರಾಳವಾಗಿ ಹೇಳಿತು, ‘ಪಾರಿವಾಳದಮ್ಮ ಇಡೀ ದಿನ ಮರಿಯೊಂದಿಗೇಇರತ್ತೆ. ಗೂಂ… ಗೂಂ… ಅಂತಾ ಮುದ್ದು ಮಾಡತ್ತೆ. ನಿನ್ನ ಹಾಗೆ ಊಟವಾದ ಕೂಡಲೇ ಓಡಿಹೋಗಲ್ಲ.’ ಅವಳು ಭುಜಗಳಿಂದಲೇ ಕಣ್ಣೊರೆಸಿಕೊಂಡಳು.
ದಿಗಿಲು
ಅವಳು ಎಲ್ಲರನ್ನೂ ತನ್ನವರೆಂಬಂತೆ ಪ್ರೀತಿಸುತ್ತಿದ್ದಳು. ಒಂದು ದಿನ ಆಕಸ್ಮಿಕವಾಗಿ ಜಾರಿಬಿದ್ದಳು. ಅವರೆಲ್ಲ, ‘ನೋಡಿ ನಡೆಯಬಾರದಿತ್ತೆ?’ ಎಂದು ಅಣಕಿಸಿದರು. ಅವಳಿಗಾಗ ಎಲ್ಲಿಲ್ಲದ ದಿಗಿಲು!
ಪ್ರೀತಿ
ಅವಳು ಅವನ ಒಂದು ಸಂದೇಶಕ್ಕಾಗಿ ಹಗಲಿರುಳು ಕಾಯುತ್ತಿದ್ದಳು. ತನಗೆಂದೇ ಬರೆಯುವ ಅವನ ಸಾಲುಗಳನ್ನು ನಿಧಾನವಾಗಿ ಆಸ್ವಾದಿಸುತ್ತಿದ್ದಳು. ಒಮ್ಮೆ ಅವನ ಮೊಬೈಲ್ ಅವಳ ಕೈಗೆ ಸಿಕ್ಕಿತು. ಇವಳಿಗೆ ಬರುತ್ತಿದ್ದ ಸಂದೇಶ ಅವನ ಎಲ್ಲಾ ಗೆಳತಿಯರಿಗೂ ಹೋಗಿತ್ತು. ಅವನ ಸಂದೇಶಗಳೀಗ ಅವಳನ್ನು ಚುಚ್ಚುತ್ತವೆ.
ಭಯ
ಅವಳಿಗೆ ಮೊದಲಿನಿಂದಲೂ ಗುಡುಗು ಮಿಂಚು ಎಂದರೆ ತೀರ ಭಯ. ಗುಡುಗು ಪ್ರಾರಂಭವಾದರೆ ಸಾಕು, ಎರಡೂ ಕಿವಿಯಲ್ಲಿ ಹತ್ತಿಯಿಟ್ಟು ಮೈತುಂಬಾ ಹೊಚ್ಚಿಕೊಂಡು ಕಣ್ಮುಚ್ಚಿ ಮಲಗಿಬಿಡುತ್ತಿದ್ದಳು. ಒಮ್ಮೆ ಅವನು ಆರ್ಭಟಿಸಿದ ನೋಡಿ, ಈಗವಳು ಮಿಂಚನ್ನು ಮೋಜಾಗಿ ನೋಡಬಲ್ಲಳು.
ಜ್ಞಾನೋದಯ
ಮಗ ಏನನ್ನಾದರೂ ಕೇಳಿದಾಗಲೆಲ್ಲ ಅವಳು ಹೇಳುತ್ತಿದ್ದಳು, ‘ಯಾರ್ಯಾರಿಗೋ ಏನೇನನ್ನೋ ಕೊಡುತ್ತೇನೆ. ನಿನಗೆ ಇಲ್ಲವೆನ್ನುವೆನೆ?’ ಒಮ್ಮೆ ಅವನು ತಿರುಗಿ ಉತ್ತರಿಸಿದ, ‘ಒಂದೋ ಯಾರ್ಯಾರಿಗೋ ಕೊಡುವುದನ್ನು ನಿಲ್ಲಿಸು, ಇಲ್ಲವಾದರೆ ಹಾಗೆ ಹೇಳುವುದನ್ನು…’ ಅವಳಿಗೆ ಜ್ಞಾನೋದಯವಾಯಿತು.
ಸುಧಾ, ಎದೆಯಾಳವನ್ನು ಹೊಕ್ಕು ಜಾಲಾಡುತ್ತಿದ್ದೀರಿ ಎಂಬ ಅನಿಸಿಕೆ ಅರಿಯದಂತೆ ನನ್ನೆದೆಯಾಳದಲ್ಲಿ ಒಂದು ಚಣ ಮಿಂಚಿ ಮರೆಯಾಯ್ತು. ಸಶಕ್ತ ಶಬ್ದ ಜಗವನ್ನೇ ತೋರಬಲ್ಲದು . ಅಲ್ವಾ? ತುಂಬ ಇಷ್ಟವಾಯಿತು.
ಧನ್ಯವಾದಗಳು ಮೇಡಂ