ನೂರುಲ್ಲಾ ತ್ಯಾಮಗೊಂಡ್ಲು
ಕೃಷ್ಣದೇವರಾಯನ ದಿಡ್ಡಿ ಬಾಗಿಲ ಮೇಲೆ
ಬಿರುಕಿ ಹೋದ ಗೋಪುರದ ತುದಿಯಂಚಲಿ
ಕಾಗೆಯೊಂದು ಕುಳಿತು
ಅಕಾಲ ಚರಿತೆಯ ಚರಮಗೀತೆ ಹಾಡುವಾಗ
ಮಗದೊಮ್ಮೆ ಈ ಹೊತ್ತಿನ
ದುರಿತ ಯಾತನೆಯೂ ಹೆಪ್ಪುಗಟ್ಟಿ ಹುತ್ತವಾಗುತ್ತದೆ.
ವೈಭವದ ಹರಿತ ಚರಿತೆಯ ಕಣ್ಣಿನಲಿ
ಉರಿವ ಸೂರ್ಯನ ಸುತ್ತ ಗಿರಗಿ ಹೊಡೆದು
ಉದುರಿದ ಹಾಗೆ ಕೆಟ್ಟ ಕನಸು.
ಅಬ್ಬಾ..! ಸಾಮ್ರಾಜ್ಯಗಳು ಉರುಳಿ ಹೋಗುವುದೆಂದರೆ
ಉಲ್ಕೆ ಜಾರಿ ಸುಟ್ಟು ಹೋದಂತೆಯೇ?
ಪ್ರಕ್ಷಿಪ್ತ ಪ್ರಹೇಲಿಯ ಅಜ್ಞಾತ ಚರಿತೆ
ಕೇವಲ ಸದ್ದು ಮಾಡುತ್ತಿದೆ
ಸಪ್ತ ಸ್ವರಗಳು ಮಾತ್ರ ಅದೇ ಲಯ ಗತಿಯಲಿ
ಇನ್ನೂ ಜೀವಂತ.
ನೆತ್ತಿ ಮೇಗಿನ ಯಾವುದೋ ಹಕ್ಕಿ
ಬೋಳು ಮರವನ್ನಪ್ಪಲು ಮೌನವಾಗಿ ತವಕಿಸುತ್ತಿದೆ
ಕತ್ತಲು ನಿಧಾನಕ್ಕೆ ಇಳಿದಂತೆ
ಶಿಲ್ಪಗಳೆಲ್ಲವೂ ಕರಗುತ್ತವೆ.
ಮಿಂಚುಹುಳವೊಂದು ಮರಳಿ
ಮರೆತು ಹೋದ ಸಾಮ್ರಾಜ್ಯದ ಸುತ್ತ ಪಹೇರಿ ಮಾಡುವಾಗ
ಎದೆ ಉಬ್ಬರಿಸಿರುವ ದಿಬ್ಬವೊಂದು ತಣ್ಣನೆ ಕೊರೆಯುತ್ತದೆ
ಸಮಾಧಿಯಂತೆ!
0 ಪ್ರತಿಕ್ರಿಯೆಗಳು