೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ರೇಣುಕಾ ರಮಾನಂದ ಅವರ ‘ಸಾಂಬಾರ ಬಟ್ಟಲ ಕೊಡಿಸು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಬಾನು ಮುಷ್ತಾಕ್ ಮತ್ತು ಕೆ. ಫಣಿರಾಜ ಅವರು ಅಂತಿಮ ಸುತ್ತಿನ ಆಯ್ಕೆತೀರ್ಪುಗಾರರಾಗಿದ್ದರು. ‘ಬದುಕಿನ ಅಸ್ತತ್ವದ ಸ್ಥಿತಿ, ಅದರಿಂದ ಉಂಟಾಗುವ ಆತಂಕಗಳು ಹಾಗೂ ಅವುಗಳನ್ನು ಎದುರಿಸುವ ಭಂಡ ಸಂಕಲ್ಪ ಭಾವವನ್ನು ಭಾಷೆಯನ್ನು ಮಾತ್ರವೇ ಪ್ರಮಾಣವಾಗಿಟ್ಟುಕೊಂಡು ಚಿತ್ರವತ್ತಾಗಿ ಕಟ್ಟುವ ಬಗೆಗಾಗಿ ‘ಸಾಂಬಾರ ಬಟ್ಟಲ ಕೊಡಿಸು’ ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.
ರೇಣುಕಾ ರಮಾನಂದ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ವೃತ್ತಿಯಲ್ಲಿ ಶಿಕ್ಷಕಿ. ೨೦೧೭ ರಲ್ಲಿ ಪ್ರಕಟವಾದ ಇವರ ಮೊದಲ ಕವಿತಾ ಸಂಕಲನ ‘ಮೀನು ಪೇಟೆಯ ತಿರುವು’ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈ ಸುಶೀಲಾ ಶೆಟ್ಟಿ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕಾವ್ಯ ಮಾಣಿಕ್ಯ ಪುರಸ್ಕಾರ, ಹರಿಹರ ಶ್ರೀ ಪ್ರಶಸ್ತಿ, ಕೆ.ವಿ ರತ್ನಮ್ಮ ದತ್ತಿ ಇನ್ನಿತರ ಪ್ರಶಸ್ತಿಗಳು ದೊರೆತಿವೆ.
ಇವರ ಬಿಡಿ ಕಥೆ, ಕವಿತೆಗಳಿಗೆ ಮುಂಬೈ ನೇಸರು ಜಾಗತಿಕ ಬಹುಮಾನ, ಜೀವನ ಪ್ರಕಾಶನ ಯುಗಾದಿ ಕಾವ್ಯ ಬಹುಮಾನ, ಕರಾವಳಿ ಮುಂಜಾವು ದೀಪಾವಳಿ ಕಥಾ ಬಹುಮಾನ, ತುಷಾರದ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈ ಗೋಕುಲವಾಣಿ ಕಥಾ ಬಹುಮಾನ, ಗುಲ್ಬರ್ಗಾ ವಿ.ವಿಜಯತೀರ್ಥ ರಾಜಪುರೋಹಿತ ಕಥಾ ಬಹುಮಾನಗಳು ದೊರಕಿವೆ. ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಇವರ ಕವಿತೆ ದಾಖಲಾಗಿದೆ. ಕಥೆ, ಕವಿತೆ, ಅಂಕಣಗಳಲ್ಲಿ ಉತ್ತರ ಕನ್ನಡದ ದಟ್ಟ ಪ್ರಾದೇಶಿಕತೆಯ ಸೊಗಡಿದೆ.
ಖುಷಿ.
ಅಭಿನಂದನೆಗಳು ರೇಣುಕಾ. ಖುಷಿ
ಹೃತ್ಪೂರ್ವಕ ಅಭಿನಂದನೆಗಳು ರೇಣುಕಾ