ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿ ಹೊಸ ಕವಿತೆ – ತುಸು ಇನ್ನೊಮ್ಮೆ ನೋಡಬೇಕು…

ಡಾ ಸದಾಶಿವ ದೊಡಮನಿ

ತಕರಾರವೇನೂ ಇಲ್ಲವೆಂದರೆ
ಎಲ್ಲಿ, ಕರೆಯಿರಿ ಅವಳ
ತುಸು ಇನ್ನೊಮ್ಮೆ ನೋಡಬೇಕು
ಮರಳಿ ಹೋಗುವಾಗ
ನನ್ನೂರು ದಾರಿಯುದ್ದಕ್ಕೂ
ಅವಳ ಚೆಲುವು, ಸವಿ ನೆನಪು
ಸಿರಿಯ ಹೊತ್ತು ನನ್ನೂರು ತಲುಪುವೆನು

ಎಣ್ಣೆಗೆಂಪಿನ ನಯನ
ನಗೀ ನವಿಲಾಡುವ ವದನ
ಜೋಡು ಹೆಳಲನು ಕುಣಿಸಿ
ಕುಂಟು ಬಿಲ್ಲೆಯ ಥರ
ಉಟ್ಟ ಸೀರೆಯ ನಿಲುಗೆ ಒದೆಯುತ
ನಡೆದು ಬರುವ, ಹೋಗುವ
ಅವಳು ಹಂಸ ನಡಿಗೆಯನು
ತುಸು ಇನ್ನೊಮ್ಮೆ ನೋಡಬೇಕು

ಬರಲ್ಲೊಲ್ಲೆನೆಂದು
ನಾಚಿಕೆಯ ಬಳ್ಳಿಯಾಗಿಯೋ
ತುಟಿ ಕುಣಿಸಿ, ಗಲ್ಲ ಉಬ್ಬಿಸಿ
ತುಸು ಕೋಪಿಸಿಕೊಂಡೋ,
ಮುನಿಸು ತೋರಿದರೆ
ಗದರಿಸಿ, ಬೆದರಿಸಿ ಕರೆದು ತರದಿರಿ
ಅವಳ
ಹುಸಿ ಕೋಪದಲಿ ಅವಳನು
ನೋಡುವುದು ಇನ್ನೂ ಚಂದ
ಇರುಳು ಚುಕ್ಕಿಗಳ ನಡುವೆ
ಕಂಡಂತೆ ಚಂದ್ರ

ಚೆಲುವಿನ ಮುದ್ದು ಬಳ್ಳಿ ಅವಳು
ಹೃದಯ ಗೆದ್ದ ಒಲವಿನ ಕೆಳದಿಯವಳು
ಬರಲ್ಲೊಪ್ಪದಿದ್ಧರೆ ಇರಲಿ ಬಿಡಿ
ಒತ್ತಾಯಿಸಬೇಡಿ
ನೋಯುವುದು ನನ್ನೆದೆ
ಅವಳ ಹುಸಿ ಕೋಪ, ಮುನಿಸು
ಕಣ್ಣು ಮುಂದೆ ತಂದುಕೊಂಡು
ನನ್ನೂರು ಹೊಸಿಲು ತುಳಿಯುವೆನು

ಅವ್ವ, ಅಪ್ಪ, ತಂಗಿಯನ್ನು ಒಪ್ಪಿಸಿ
ಅವಳನ್ನೇ ವರಿಸುವೆನು
ಇದಕ್ಕೆ ಅವಳ ಒಪ್ಪಿಗೆಯೇ…?
ತುಸು ಕೇಳಿ ಹೇಳಿ
ಕಾಯುವುದರಲ್ಲಿ ಸುಖವಿದೆ
ಜಗವು ಇದರ ನಿಜವ ತಿಳಿಯಲಿ

‍ಲೇಖಕರು Admin

2 September, 2022

1 Comment

  1. prathibha nandakumar

    ಚೆನ್ನಾಗಿದೆ, ನರಸಿಂಹ ಸ್ವಾಮಿಯವರ ಕವನ ನೆನಪಿಸುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading