ಸತ್ಯಮಂಗಲ ಮಹಾದೇವ
ನಗುವವರ ಹೃದಯದ ಬೆಳಕನ್ನು
ದುಃಖಿತರ ಹೃದಯಕ್ಕೆ ದಾಟಿಸಿದಾಗ
ದೀಪ ಹಚ್ಚುವ ನೀರಸ ಕಾರ್ಯ ಬೇಕೆಂದೆನಿಸುವುದಿಲ್ಲ
ನೀನು ಉಣಿಸಿದ ಪ್ರೇಮಸುಧೆಯ ಪೆಸೆ ಇನ್ನೂ ಆರಿಲ್ಲ
ಉರಿದು ಒಣಗಿ ಬಿದ್ದ ಹಣತೆಗಳಿಗೆ
ನಿನ್ನ ತುಟಿಯು ದಾಟಿಸಿದ ಪ್ರೀತಿಯ ರಂಗನು ದೀಪಗಳ ತುಟಿಗೆ ಹಚ್ಚುವೆ
ನಿನ್ನ ಅಮೃತದ ಪ್ರೇಮ ತಾಗಿ ದೀಪಗಳು ಮತ್ತೆ
ಜಗಕೆ ಹಂಚುವಷ್ಟು ಪ್ರೇಮವ ಎದೆತುಂಬಿಕೊಳ್ಳಲಿ
ದೀಪಾವಳಿಯ ಈ ಹಬ್ಬದ ಅಬ್ಬರದಲ್ಲಿ
ಪಟಾಕಿಯ ಸದ್ದಿಗೆ ಸದ್ದಡಗಿದ ಪುಟ್ಟ ಪಕ್ಷಿಗಳಿಗೆ
ನಿನ್ನ ಅಪ್ಪುಗೆಯ ಬೆಚ್ಚನೆಯ ಕನಸುಗಳ ತಾಗಿಸುವೆ
ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯ ಕನಸುಗಳು
ನಾಳೆಗೆ ಜೀವಂತವಾಗಿರಲೆಂದು
ಈ ದೀಪಾವಳಿಯ ಹಣತೆಗಳು ನಿನ್ನ ಕಣ್ಣಬೆಳಕಲ್ಲಿ
ಸಾಂತ್ವನವ ಬೇಡುವ ಈ ಸಂದರ್ಭವು
ಬೆಳಕಿನ ಹಬ್ಬವಾಗುವುದು ನಿನ್ನ ನಗುವಿನಿಂದ
ನಿನ್ನ ನಗುವಿನಿಂದ ಮಾತ್ರ……..
0 ಪ್ರತಿಕ್ರಿಯೆಗಳು