ಸತ್ಯಪ್ರಕಾಶ್ ಎಂ ಆರ್
ನಿತ್ಯಹರಿದ್ವರ್ಣದ ಕಾಡು
ಕಾಡಿನ ನಡುವೆ ಒಂದು ಸುಟ್ಟ ಮರ
ಬೆರಗುಗಣ್ಣಿನಲೊಂದು ಕಳೇಬರ
ನೀರವ ಆಕಾಶದಲಿ ಸತ್ತ ಚಂದಿರ
ಗರಬಡಿದ ಚಿತ್ತದೊಳಗೆ ಸ್ಮೃತಿ ಸಂಚಾರ
ವಿಚ್ಚಿದ್ರಗೊಂಡ ಹೊಂಗನಸು
ದಿಗಿಲು ಹುಟ್ಟಿಸುವ ದಾಹ
ಮಹಾಸಾಗರದ ತೀರದಲಿ
ದಿಕ್ಕು ಕಾಣದೆ ನಿಂತ ಒಂಟಿ ದೇಹ
ಶೂನ್ಯದಂಚಿನಲ್ಲೆಲ್ಲೋ ಸೂರ್ಯಕಿರಣ
ಗೆದ್ದಲು ಹಿಡಿದ ಮೈಮನಸು
ಅದರ ಸುತ್ತ ಸಾವಿರ ನೆನಪು
ನಿರ್ವಾತದ ಅಂತರಾಳದಲಿ
ಜೋತಾಡುವ ಬಾವಲಿಗಳು
ಆದರೂ ಇದೆ ಈ ದೇಹಕೊಂದು ಹೆಸರು
ಬೆನ್ನ ಹಿಂದೆಯೇ ನಿಂತ ಸೈತಾನನಿಗೆ
ಯಾವ ಹೆಸರಿನ ಅಂಕೆಯಿಲ್ಲ
ಮುಸುಕಿನ ಗುದ್ದಾಟವಿದು
ಅರಿವಿಗೆ ನಿಲುಕುವ ಮುನ್ನ
ಅಸ್ತಿತ್ವದ ಕುರುಹೂ ಇಲ್ಲ…
0 ಪ್ರತಿಕ್ರಿಯೆಗಳು