ಉಗಮ ಶ್ರೀನಿವಾಸ್
ನಮ್ಮೆಲ್ಲರ ಕಣ್ಣ ಮುಂದೆ ಬೆಳೆದ ಸಂಘಮಿತ್ರೆ ನಾಗರಘಟ್ಟ ಹಾಗೂ ರಾಜೇಶ್ ಹೆಬ್ಬಾರ್ ಅವರ ಬೆನ್ನಿಗೆಲ್ಲಿಯ ಕಣ್ಣು ಕೃತಿಯನ್ನು ಈಗಷ್ಟೆ ಓದಿದೆ. ಒಂದು ಕಾಲದಲ್ಲಿ ನಾನು, ಸಂಘಮಿತ್ರೆಯ ಅಪ್ಪ ಎನ್.ಕೆ. ಹನುಮಂತಯ್ಯ ಹಾಗೂ ತಿಪಟೂರಿನ ನಾವೆಲ್ಲ ಗೆಳೆಯರು ಕವಿತೆಯನ್ನು ಪ್ರಾಣ ಜೀವಾಳ ಎನ್ನುವ ಹಾಗೆ ಓದುತ್ತಿದ್ದೆವು. ಪ್ರಾಚೀನ ಕಾವ್ಯದಿಂದ ಹಿಡಿದು ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಹೀಗೆ ಎಲ್ಲ ಬಗೆಯ ಮಾರ್ಗಗಳನ್ನು ಓದಲು ಸಾಧ್ಯವಾಯಿತು. ಈಗಲೂ ಎಲ್ಲಾದರೂ ಕವಿತೆ ಸಿಕ್ಕರೆ ಅದರ ಮೇಲೆ ಕಣ್ಣಾಡಿಸದೆ ಇರಲು ಆಗುವುದಿಲ್ಲ.
ಕವಿತೆಗಳಲ್ಲಿ ಶಕ್ತಿಶಾಲಿ ರೂಪಕಗಳನ್ನು ಬಳಸಿದ ಎನ್.ಕೆ. ಹನುಮಂತಯ್ಯನ ಜೊತೆಗಿನ ಅನೇಕ ಕಾವ್ಯ ಸಂವಾದಗಳು ಕಾವ್ಯದ ಮೇಲಿನ ಪ್ರೀತಿಯನ್ನು ಹೆಚ್ಚಿಸಿದೆ, ಹೆಚ್ಚಿಸುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಸಂಘುವಿನ ಅನೇಕ ಪದ್ಯಗಳನ್ನು, ಆಕೆ ಬಿಡಿಸಿದ ಚಿತ್ರಗಳನ್ನು, ಪದ್ಯ ಮತ್ತು ಚಿತ್ರದಲ್ಲಿ ಆಕೆ ಕಾಣಿಸುತ್ತಿದ್ದ ಹೊಳಹುಗಳನ್ನೂ ಗಮನಿಸಿದ್ದೇನೆ. ಸಂಘಮಿತ್ರೆ, ರಾಜೇಶ್ ಹೆಬ್ಬಾರ ಬರೆದಿರುವ ಕವಿತೆಗಳನ್ನು ಓದುವ ಅವಕಾಶ ಸಿಕ್ಕಿತು.
ಒಂದು ಒಳ್ಳೆಯ ಕಾವ್ಯವನ್ನು ಓದುಗ ಬೆನ್ನಟ್ಟಬೇಕು. ತಾನೇ ಬರೆದ ಕವಿತೆಯಾದರೂ ಕವಿ ಪದ್ಯದ ಹಿಂದೆ ತುಂಬಾ ಹೊತ್ತು ಕ್ರಮಿಸಬಾರದು. ಈ ಹಿನ್ನೆಲೆಯಲ್ಲಿ ಸಂಘಮಿತ್ರೆ ಮತ್ತು ರಾಜೇಶ್ ಹೆಬ್ಬಾರರು ರಚಿಸಿರುವ ಈ ಕವಿತೆಗಳು ಎಲ್ಲೂ ವಾಚ್ಯವೆನಿಸುವುದಿಲ್ಲ. ಎಲ್ಲವನ್ನೂ ತಣ್ಣಗೆ ಹೇಳಿದ್ದಾರೆ. ಪದ್ಯ ಓದಿ ಮುಗಿಸಿದ ಮೇಲೆ ನಮ್ಮೊಳಗೊಂದು ಮೌನ ಆವರಿಸುತ್ತದೆ. ಹೀಗಾಗಿ ಸಂಘುಗೆ, ರಾಜೇಶ್ ಹೆಬ್ಬಾರ್ ಗೆ ಶರಣು.
0 ಪ್ರತಿಕ್ರಿಯೆಗಳು