ಶ್ರೀಧರ ಪತ್ತಾರ
ನಾನಿನ್ನೂ ಮಾತಾಡಬೇಕೇ..
ಹೇಳಲು ಉಳಿದಿದ್ದಾದರೂ ಏನು..?
ಸ್ವಗತದಲ್ಲಿ ನನಗೆ ನಾನೇ
ಕೇಳಿಕೊಂಡ ಪ್ರಶ್ನೆಯಿದು…
ಪ್ರಶ್ನೆಗಳು ಎಷ್ಟಿದ್ದರೇನಂತೇ
ನನ್ನಲ್ಲೀಗ ಸೂಕ್ತ ಉತ್ತರಗಳಿಲ್ಲ…
ಮಾತಿಗೆ ನಿಂತಾಗಲೆಲ್ಲ
ಸಣ್ಣದೊಂದು ಅಳಕು
ಎಲ್ಲರೂ ಹೇಳುತ್ತಾರೆ
‘ಇಲ್ಲಿ ಗೋಡೆಗಳಿಗೂ ಕಿವಿಗಳಿವೆ”
ಯಾರು ಕೇಳಿಸಿಕೊಂಡರೂ
ಕೇಳಿಸಿಕೊಳ್ಳಲಿ ಬಿಡಿ
ಅವರೂ ಎಂದಾದರೊಮ್ಮೆ
ನನ್ನಂತೆ ಯೋಚಿಸಿದವರೇ
ಎನ್ನುತ ಹುಂಬ ಧೈರ್ಯದಿ
ಬಿಟ್ಟೆ ನಿಟ್ಟುಸಿರು…
ದಿನವೂ ನಲುಗುವವರ
ನರಳಿಕೆ ಯಾರಿಗೂ ಕೇಳಿಸಲಿಲ್ಲ
ಎಲ್ಲರ ಕಿವಿಗಳು ಕಿವುಡು..
ಅಷ್ಟು ಸಾಕು
ಅಟ್ಟಹಾಸದ ನಗೆ ಮತ್ತಷ್ಟೂ ಪ್ರತಿಧ್ವನಿಸಲು….
ನನ್ನಂತರಂಗದ ಧ್ವನಿಗೆ ಬೆಲೆ ಎಲ್ಲಿ…?
ಪ್ರತಿಕ್ಷಣವೂ ಮನ ಕದಡುವ
ತರ್ಕಕ್ಕೆ ಸಿಗದ
ಮತ್ತದೇ ಉತ್ತರವಿಲ್ಲದ ಪ್ರಶ್ನೆಗಳು…
ಹೊರಳುವುದು
ಅನಂತ
ಶೂನ್ಯದತ್ತ ನೋಟ….
ಖಾಲಿ ನಿರ್ವಾತದಿ ಮೂಡಿವೆ
ಬಣ್ಣಮಾಸಿದ ನನ್ನವರ ಚಿತ್ರಗಳು….
ಲೆಕ್ಕಕ್ಕೆ ಸಿಗದವರ
ಲೆಕ್ಕದ ಸೂತ್ರವೇ ತಪ್ಪೆಂದರೂ..
ನಮ್ಮೊಳಗಿಂದಲೇ ಎದ್ದು ಪರಭಾರೆಯಾದವರಿಗೆ
ಸಾವಿರ ದಾರಿಗಳು ತೆರೆದುಕೊಳ್ಳಬೇಕು..
ಬದುಕು ನೂರು ಕೊಂಬೆಗಳಾಗಿ ಕವಲೊಡೆಯಬೇಕು…
ಆದೇ ನಿಜ ಬದುಕಿನ ಲೆಕ್ಕ .
0 ಪ್ರತಿಕ್ರಿಯೆಗಳು