ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ಯಾಮಲಾ ಮಾಧವ ಅನುವಾದಿತ ಕವಿತೆ -ಪ್ರಿಯ ಅಕ್ಕ ತುಳಸಿ

ತುಳಸಿ ವೇಣುಗೋಪಾಲ್ ಸಮಗ್ರ ಕತೆಗಳು  ಪ್ರಿಸಮ್ ಬುಕ್ಸ್‌ನಿಂದ ಪ್ರಕಟವಾಗಿದೆ. ತುಂಬ ಅಚ್ಚುಕಟ್ಟಾಗಿ ಮುದ್ರಿತವಾಗಿರುವ ಕೃತಿಗೆ ಡಾ. ಎಂ.ಎಸ್. ಆಶಾದೇವಿ ಬರೆದ ಮೌಲಿಕ ಪ್ರಸ್ತಾವನೆ ಇದೆ. ಅವರ ಕೃತಿಗೆ ಯಶವಂತ ಚಿತ್ತಾಲರು, ಟಿ.ಪಿ. ಅಶೋಕ ಬರೆದ ಮುನ್ನುಡಿ, ವಿಶ್ಲೇಷಣೆಗಳು ಇವೆ. ತುಳಸಿಯ ಸ್ನೇಹದ ಸವಿಯುಂಡ ಆಪ್ತರು ಬರೆದ ಸ್ಮೃತಿ ಚಿತ್ರಣಗಳೂ ಇವೆ.

ಪುಟಗಳ ಮಧ್ಯದ ನವಿಲುಗರಿ ಆಗಿ, ಅದೇ ತಾನೇ ಮೀಯಿಸಿ ಕಟ್ಟಿ ಮಲಗಿಸಿದ ಕಂದನ ಬಿಸುಪಾಗಿ ನಮ್ಮ ಹೃದಯಗಳಲ್ಲಿ ಉಳಿದು ಹೋದ ತುಳಸಿಯ ಅದ್ಭುತ ಕಥನಲೋಕ ಓದುಗರಿಗಾಗಿ ಈ ಸಂಕಲನದಲ್ಲಿದೆ.

ಅನುವಾದ : ಶ್ಯಾಮಲಾ ಮಾಧವ

ಪ್ರಿಯ ಅಕ್ಕ ತುಳಸಿ
ಅವಳಿರದ ನೋವೇ
ಸುರಿವ ಕಣ್ಣೀರ ಬುಗ್ಗೆ
ಸೂರ್ಯರಶ್ಮಿಯಂತೆ ಅವಳ ನಗು
ಶೈತ್ಯದಾ ದಿನಗಳಲು
ಎಣೆಯಿರದ ಬೆಚ್ಚನೆ ಪ್ರೀತಿ.

ಸುವಾಸಿತ ಪಕಳೆಗಳ
ಅಪ್ರತಿಮ ಕುಸುಮ
ಎಣೆಯಿರದ ದಯೆಯ ಅರಳು ಗುಲಾಬಿ
ಬೆಳಕ ಬೀರುವ ದೀಪಸ್ತಂಭ

ಗಗನದೆತ್ತರಕೆ ಏರುವ ಹಕ್ಕಿಯಂತೆ
ಅವಳ ಚೇತನ
ನೋವು ನುಂಗಿ ನಗುವ
ಸಂತಸದ ಇಂಪುಗಾನ.

ನಗುವ ಕಂಗಳ ಹೊಳಪು
ದಿವ್ಯ ಅನುಸಂಧಾನ
ಪವಿತ್ರಾತ್ಮಳು ತುಳಸಿ
ನಮ್ಮ ನಂದಾದೀಪ
ಅರ್ಬುದವು ಕಸಿದರೂ ಆ ಕ್ಷೀಣಕಾಯ
ಆತ್ಮವದು ಅಮರ, ಕೀರ್ತಿ ಶಾಶ್ವತ.
ಸರಿದರೂ ದಿನಗಳು, ನೆನಪು ಅಮರ,
ಪ್ರೀತಿ ತುಂಬಿ ಹರಿವ ಕಥನಗಳ ಪೂರ.
ಕೊನೆಯಿರದ ನೋವಿನಲು
ಶಾಂತಿ ಸಾಂತ್ವನವನುಸುರುವ ದಿವ್ಯಚೇತನ.

ನಿನ್ನ ಪ್ರೀತಿಯ ಸ್ಪರ್ಶಕೆ ಅರಳಿದ
ಜೀವ ಭಾವಗಳು ನೂರು
ನಿನ್ನ ಪ್ರೀತಿಯೆ ಇರುಳ ಧ್ರುವತಾರೆಗಳು
ಮೃದು ಮಧುರ ಸಗ್ಗಗಾನಗಳು.

ಹೃದಯದಲೆನ್ನ ಕಾಪಿಡುವೆ ನಿನ್ನನೆಂದಿಗೂ ತುಳಸೀ
ತುಂಬಿ ಬರೆ ಕಳೆದ ದಿನಗಳ ನೆನಪು
ಕಣ್ಣೀರು ಉಕ್ಕಿ ದುಃಖ ಉಮ್ಮಳಿಸೆ
ನಿನ್ನ ಪ್ರೀತಿಯೆ ನನ್ನ ಪಥವ ಬೆಳಗುತಿರೆ

ಬಾಳ ಈ ಬಟ್ಟೆಯಲಿ
ನೀನೊಂದು ಹೊಳೆವ ಎಳೆ
ಪ್ರೀತಿ ತುಂಬಿ ಹೆಣೆದ ಅನಂತದೆಳೆ
ಚಿರಶಾಂತಿಯಲಿ ಪವಡಿಸಿರು ಸಗ್ಗದಲಿ
ಅಮರ ಪ್ರೀತಿಯ ಸಿರಿ, ಓ ಎನ್ನ ಸೋದರಿ.

‍ಲೇಖಕರು admin j

28 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading