ಶೋಭಾ ಕಾಡುವ ಕವಿತೆಗಳನ್ನು ಮುಂದಿಟ್ಟಿದ್ದಾರೆ..

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’
ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.
ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.
ಕಳೆದ ವಾರ ಸಿದ್ದಾಪುರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಶೋಭಾ ಹಿರೇಕೈ  ಕಂಡ್ರಾಜಿ ಅವರ ಕವಿತೆಗಳನ್ನು ಪ್ರಕಟಿಸಿದ್ದೆವು. ಅದು ಇಲ್ಲಿದೆ.
ಅದಕ್ಕೆ ವಿಮರ್ಶಕಿ ಡಾ ಶ್ವೇತಾರಾಣಿ ಅವರು ಬರೆದ ಮೊದಲ ನೋಟ ಇಲ್ಲಿದೆ-
ಶ್ವೇತಾರಾಣಿ ಮಹೇಂದ್ರ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದವರು. ಸದ್ಯ, ತುಮಕೂರಿನಲ್ಲಿ ನೆಲೆ ನಿಂತಿದ್ದಾರೆ. ತುಮಕೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜನಪ್ರಿಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೇಮಾಭಟ್ ಅವರ ಸಮಗ್ರ ಸಾಹಿತ್ಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರೆ.
ಅಪ್ಪಟ ಗ್ರಾಮೀಣ ಹಿನ್ನೆಲೆಯ ಇವರು, ಕಣ್ಮರೆಯಾಗಿರುವ ಜಾನಪದ ಕಥೆಗಳನ್ನು’ ಏಳು ಮಲ್ಲಿಗೆ ಗನ್ನೆ’ಮತ್ತು ಇತರ ಕತೆಗಳ’ ಮೂಲಕ ಕಟ್ಟಿಕೊಟ್ಟಿದ್ದಾರೆ. ರಾತ್ರಿ ವೇಳೆ ಮೊಮ್ಮಕ್ಕಳಿಗೆ ಅಜ್ಜಿಯಯರು ತೆರೆದಿಡುತ್ತಿದ್ದ ಕಥಾ ಲೋಕಕ್ಕೆ ಈ ಕಥಾ ಸಂಲಕಲನದ ಕಥೆಗಳು ಕೊಂಡೂಯ್ಯುವಂತಿವೆ.
ಇವರ ಮತ್ತೊಂದು ಕೃತಿ ‘ಒಳಗುದಿ’ ವಿಮರ್ಶಾಲೇಖನಗಳ ಸಂಕಲನವಾಗಿದೆ. ಹಲವು ಸಂಶೋಧನಾ ಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಲವು ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಿ ಗಮನ ಸೆಳೆದಿದ್ದಾರೆ.
ಕೃಷಿಯೊಂದಿಗೆ ನಿಕಟ ಸಂಬಂಧಹೊಂದಿರುವ ಲೇಖಕಿ, ನೆಲಮೂಲದ ಚಿಂತನೆಗಳನ್ನು ರೂಢಿಸಿಕೊಂಡಿದ್ದಾರೆ.
ಡಾ. ಶ್ವೇತಾರಾಣಿ ಹೆಚ್
ಶೋಭಾ ಹಿರೇಕೈ ಕಂಡ್ರಾಜಿಯವರ ಕವನಗಳನ್ನು ಒಮ್ಮೆಲೆಗೆ ಓದಿದೆ. ಸಾಮಾನ್ಯನೂ ಕೂಡ ಸುಲಭವಾಗಿ ದಕ್ಕಿಸಿಕೊಳ್ಳಬಹುದಾದ ಕವನಗಳು.
ಶೋಭಾ ಅವರಿಗೆ ಕಾವ್ಯ ಸೃಜಿಸುವ ಪ್ರತಿಭೆ, ಭಾಷಾ ನೈಪುಣ್ಯತೆ ಎರಡೂ ಕರಗತವಾಗಿವೆ. ಗಂಭೀರವೆನ್ನುವ ವಿಚಾರಗಳನ್ನು ಸರಳೀಕರಿಸಿ ಹೇಳುವ ಚಾಕಚಕ್ಯತೆಯಿಂದ ಇವರ ಕವಿತೆಗಳು ಕಾಡುತ್ತವೆ. ಯುದ್ಧದ ಭೀಕರ ಪರಿಣಾಮವನ್ನು ಸಾಮಾನ್ಯೀಕರಿಸಿ ಹೇಳುವ ರೀತಿಯಿಂದಾಗಿ ವಿಶೇಷವೆನಿಸುತ್ತವೆ.
ಯುದ್ಧ-ಬುದ್ಧ ಕವಿತೆಯಲ್ಲಿ

ಸಿದ್ಧ ಮಾಡುತ್ತಾರಲ್ಲಿ
ಹೆರವರ ಮಕ್ಕಳನ್ನು
ಬಲಿಕೊಡುವ ಪೀಠಕ್ಕೆ
ಇಲ್ಲಿ ಎದೆಯ ಕರಿಮಣಿಯನೊಮ್ಮೆ
ಮುಟ್ಟಿ ಮುಟ್ಟಿ ಅವಚುತ್ತಾರಿವರು

ಯುದ್ಧದಲ್ಲಿ ಬಲಿಯಾಗುವ ಯೋಧರ ಕುಟುಂಬದ ತಳಮಳ, ಅಭದ್ರತೆಯ ಭಾವ, ಆತಂಕ ಓದುಗರ ಮನಮುಟ್ಟುತ್ತವೆ.ರಾಜಕೀಯ ಚದುರಂಗದಾಟದ ಒಳಗುಟ್ಟುಗಳನ್ನು ನೇರವಾಗಿ ಹೇಳಿಬಿಡುವಲ್ಲಿ ಕವಿತೆಗಳು ಸಶಕ್ತವಾಗಿವೆ.
ಯಾವುದೇ ಮಡಿವಂತಿಕೆಯನ್ನು ಕಾಯ್ದುಕೊಳ್ಳದೆ ಹೆಣ್ಣಿನ ಮನದ ಒಳತೋಟಿಗಳನ್ನು ನಿರೂಪಿಸುವ ‘ಬದಿಗಿಟ್ಟ ಬಟ್ಟೆ’,’ಕಡಲು ಮತ್ತು ನದಿ’ ಕವಿತೆಗಳು ಆತ್ಮೀಯ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಮಸುಕಾಗುವ ಸಂಕಟ ಕವನದಲ್ಲಿ ಹೆಣ್ಣಿನಲ್ಲಿ ಬತ್ತದೆ ಇರುವ ವಾತ್ಸಲ್ಯದ ಒರತೆ, ಮಮತೆ, ನೆನಪು ಮಸುಕಾಗುವಲ್ಲಿ ಇರುವ ನೋವು ಇಲ್ಲಿ ಅಕ್ಷರರೂಪ ಪಡೆದಿದೆ.
‘ತವರು ತಾರಸಿಯಾಗುತ್ತಿದೆ’ ಕವಿತೆಯಲ್ಲಿ ಆಧುನೀಕರಣಗೊಂಡಂತೆ ಕಳಚುವ ಬಾಂಧವ್ಯ ವಿಘಟನೆಯಾಗುವ ಸಂಬಂಧ ಅಟ್ಟವೇರಿದ ವಸ್ತುಗಳಂತೆ ಮನೆಯೊಳಗೆ ಇದ್ದರೂ ಅಪರೂಪವಾಗುವ ವಸ್ತುಸ್ಥಿತಿಯನ್ನು ಹೇಳುತ್ತದೆ.

‍ಲೇಖಕರು Avadhi Admin

March 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: