ವೀಣಾ ಶಾಂತೇಶ್ವರ ವಾಚಿಕೆ
ಸಂಪಾದಕಿ : ಡಾ.ಎಂ.ಎಸ್. ಆಶಾದೇವಿ
ಕನ್ನಡ ಮಹತ್ವದ ಲೇಖಕಿ ಡಾ. ವೀಣಾ ಶಾಂತೇಶ್ವರ (1945) ಮೂಲತಃ ಬಾಗಲಕೋಟೆಯವರು. ಧಾರವಾಡದ ಕನರ್ಾಟಕ ಕಲಾ ಮಹಾವಿದ್ಯಾಲಯದಲ್ಲಿ 39 ವರ್ಷ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ, ಒಂಬತ್ತು ವರ್ಷಗಳು ಅದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, ಈಗ ನಿವೃತ್ತಿ ಹೊಂದಿದ್ದಾರೆ.
ಈ ತನಕ ಐದು ಕಥಾ ಸಂಕಲನಗಳನ್ನು, ಎರಡು ಕಾದಂಬರಿಗಳನ್ನು ರಚಿಸಿರುವ ವೀಣಾ ಅವರು ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರಗಳು, ರೇಡಿಯೋ ನಾಟಕಗಳು ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಇವರ ಬರವಣಿಗೆ ಹರಡಿದೆ. ಭಾರತದ ಅನೇಕ ಭಾಷೆಗಳಿಗೆ ಮತ್ತು ಇಂಗ್ಲಿಷಿಗೆ ಇವರ ಕತೆಗಳು ಅನುವಾದಗೊಂಡಿವೆ. ಉತ್ತಮ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳ ಹಲವಾರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.
ವ್ಯಕ್ತಿಶೋಧದ ಮಹತ್ವಾಕಾಂಕ್ಷೆಯಲ್ಲಿ ಆರಂಭವಾದ ನವ್ಯ ಸಾಹಿತ್ಯ ಸಂದರ್ಭದಲ್ಲಿ ತಮ್ಮ ಬರವಣಿಗೆ ಆರಂಭಿಸಿದ ವೀಣಾ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕೇಂದ್ರ ಅಕಾಡೆಮಿ ಪ್ರಶಸ್ತಿ (ಅನುವಾದಕ್ಕೆ), ದಾನ ಚಿಂತಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗಳಗನಾಥ ಪ್ರಶಸ್ತಿ… ಇನ್ನು ಮುಂತಾದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾಲದ ಅಗತ್ಯ, ತವಕ ತಲ್ಲಣಗಳು, ಸಮರ್ಥ ಅಭಿವ್ಯಕ್ತಿ, ಹೊಸ ಅನುಭವ ಲೋಕದ ಶೋಧ, ವ್ಯಕ್ತಿತ್ವದ ಹುಡುಕಾಟ, ಬದುಕಿನ ಕಾಲಾತೀತ ನಿಗೂಢದ ಬಗೆಗಿನ ಬೆರಗು, ಹೊಚ್ಚ ಹೊಸದಾಗಿ ಕಾಣುವ ಭಾಷೆ ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ವೀಣಾ ಕನ್ನಡದ ಮಾತ್ರವಲ್ಲ, ಭಾರತದ ಮಹತ್ವದ ಕಥೆಗಾರ್ತಿ.
ಪ್ರಸ್ತುತ ವಾಚಿಕೆ ಶ್ರೀಮತಿ ವೀಣಾ ಅವರು ಬರೆದ ಆಯ್ದ ಕತೆ, ಕವಿತೆ, ವಿಮರ್ಶೆ, ವ್ಯಕ್ತಿಚಿತ್ರಗಳ ಸಂಕಲನವಾಗಿದೆ. ಅತಿ ಚರ್ಚಿತ `ಗಂಡಸರು’ ಕಾದಂಬರಿಯೂ ಸಹ ಪೂರ್ಣವಾಗಿ ಇದರಲ್ಲಿ ಸೇರ್ಪಡೆಗೊಂಡಿದೆ. ಸಂಪಾದಕರು ನಡೆಸಿದ ವೀಣಾ ಸಂದರ್ಶನ ಮತ್ತು ನೆನಪಿನ ಚಿತ್ರಗಳೂ ಈ ಕೃತಿಯಲ್ಲಿವೆ.
0 ಪ್ರತಿಕ್ರಿಯೆಗಳು