ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ–
‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಡಾ. ಪಲ್ಲವಿ ಹೆಗಡೆ
ಹಿರಿಯರಾದ ಪ್ರೊ. ಸಿ. ಎನ್ ರಾಮಚಂದ್ರನ್ ಅವರಿಗೂ,
ಜೋಗಿ ಅವರಿಗೂ ನಮಸ್ಕಾರ.
ದೃಶ್ಯಮಾಧ್ಯಮದಲ್ಲಿ ಕೂಡಾ, ಶ್ರವ್ಯ ಮಾಧ್ಯಮದ ಮೂಲಕ ಹೇಳಬಹುದಾದ ವೈಚಾರಿಕ ವಿಷಯಗಳನ್ನು ಅರ್ಥವತ್ತಾಗಿ ಮತ್ತು ಪ್ರಭಾವಿಯಾಗಿ ಹೇಳಬಹುದು/ ತೋರಿಸಬಹುದು.
ಇತ್ತೀಚೆಗೆ ನಾನು ನೋಡಿದ, ಓದಿದ ಹಿರಿಯ ನಾಟಕಕಾರ ಸೇತುರಾಮ್ ಎಸ್ ಎನ್ ಅವರ ‘ಗತಿ’ ಮತ್ತು ‘ನಿಮಿತ್ತ’ ನಾಟಕಗಳು ಇದಕ್ಕೆ ಪುರಾವೆ.
ಮೂರು ಪಾತ್ರಗಳ ಮೂಲಕ, ಇಡೀ ನಾಟಕದಲ್ಲಿ ರಂಗಮಂಚದಲ್ಲಿ ಯಾವ ಬದಲಾವಣೆಯನ್ನೂ ಮಾಡದೆ, ಹೇಳುವಿಕೆಯ ಮೂಲಕವೇ “ಗತಿ” ನಾಟಕದ ನಾಯಕನ ಗತಜೀವನವು ಬಿಚ್ಚಿಕೊಳ್ಳುತ್ತದೆ. ಪ್ರಜ್ಞೆ, ಪಾಪ, ಧರ್ಮ, ಕರ್ಮ, ಫಲಗಳ ಅತ್ಯಂತ ವಿಶದ ಚಿಂತನೆ ರಂಗದಲ್ಲಿ ತಂದಿದ್ದು ಸ್ಮರಣೀಯ.
ಚಲನಚಿತ್ರದಲ್ಲಿ ಸ್ವಗತದ ರೂಪದಲ್ಲಿ ಅನೇಕ ವೈಚಾರಿಕ ವಿಚಾರಗಳು ಹೇಳಲ್ಪಡುವುದು ಪಾತ್ರದ ಒಂದು ಭಾಗವೇ ಆಗಿ ನಟನೆ ಅಥವಾ ದೃಶ್ಯಕ್ಕೆ ಸಿಗುತ್ತವೆ.
ಉದಾಹರಣೆ ನೀಡುವುದಾದರೆ,
Spring, Summer, Fall, Winter… and Spring
ಇದೊಂದು ದಕ್ಷಿಣ ಕೋರಿಯಾದ ಚಲನಚಿತ್ರ. ಬೌದ್ಧ ಬಿಕ್ಕು ಒಬ್ಬನ ಜೀವನಚಕ್ರವನ್ನು ಹಿಡಿದಿಟ್ಟಿರುವ ದೃಶ್ಯಕಾವ್ಯ. ಸಂಭಾಷಣೆ ಇಲ್ಲವೇ ಇಲ್ಲ. ಅಥವಾ ಅತ್ಯಂತ ಕಡಿಮೆ. ದೃಶ್ಯವೊಂದರಿಂದ ಘನ ಬೌದ್ಧದರ್ಶನದ ಒಳಹೊರಮುಖವನ್ನು ಸಫಲವಾಗಿ ಚಿತ್ರಿಸಿದೆ.
ಒಂದು ಘಟನೆ ಹೀಗಿದೆ. ಗುರು ತನ್ನ ಪುಟಾಣಿ ಶಿಷ್ಯನ ಹೊಣೆ ಹೊತ್ತಿದ್ದಾನೆ. ಅವನ ಹಿಂಸಿಸುವ ಸ್ವಭಾವವನ್ನು, ತೊರೆಯ ಸಮೀಪ ಕಪ್ಪೆ, ಮೀನುಗಳಿಗೆ ದಾರ, ಕಲ್ಲು ಕಟ್ಟಿ ಸಂತೋಷಪಡುತ್ತಿದ್ದವನನ್ನು ಗಮನಿಸಿಯೇ ತೀರ್ಮಾನಿಸಿದ್ದಾನೆ. ಆ ಬಾಲಕನಿಗೆ ಗುರುವು ಬೆನ್ನಿಗೆ ದೊಡ್ಡ ಕಲ್ಲೊಂದನ್ನು ಕಟ್ಟಿ, ಹಗ್ಗ ಬಿಗಿದು ದಿನಚರಿಯಲ್ಲಿ ತೊಡಗಿಸಿದ್ದಾನೆ. ಶಿಷ್ಯನಿಗೆ ದಿನವೊಂದರಲ್ಲೆ ತನ್ನ ತಪ್ಪಿನ ಅರಿವಾಗುತ್ತದೆ. ಮತ್ತು ಅವನ ಪಾಠವನ್ನು ಕಲಿಯುತ್ತಾನೆ. ಇಲ್ಲಿ ನಾನು ಹೇಳಿದ್ದು ಪರಿಣಾಮಕಾರಿಯಾಗಿಲ್ಲ. ಆ ಚಲನಚಿತ್ರದಲ್ಲಿ ಮೂಡಿ ಬಂದ ವೈಚಾರಿಕ ಅಂಶಗಳು ಎಂತಹ ವೀಕ್ಷಕನ ಹೃದಯಕ್ಕೂ ನಾಟುತ್ತದೆ. ಇದೊಂದು ಸಾರ್ಥಕ್ಯ ಅನಿಸುತ್ತದೆ.
ಹೀಗಿರುವಾಗ ವಿಚಾರಗಳ ಸ್ಪಷ್ಟ ಹರಿವನ್ನ ದೃಶ್ಯ ಮಾಧ್ಯಮಗಳ ಮೂಲಕವೂ ಹೇಳಬಹುದು ಅನಿಸುತ್ತದೆ.
ಇವೆಲ್ಲವೂ ಆಯಾ ಕಲಾವಿದನ ಕೌಶಲದ ಶಕ್ತಿ ಮತ್ತು ಸಾಧ್ಯತೆ ಎಂದು ತಿಳಿದಿದ್ದೇನೆ.
ಧನ್ಯವಾದಗಳು.
ಡಾ. ಪಲ್ಲವಿ ಹೆಗಡೆ






ಡಾ. ಪಲ್ಲವಿ ಹೆಗ್ಡೆ ಅವರಿಗೆ:
ನಮಸ್ಕಾರ. ನಿಮ್ಮ ವಿದ್ವತ್ಪೂರ್ಣ ಹಾಗೂ ಸಮತೋಲನದ ಲೇಖನಕ್ಕಾಗಿ ಧನ್ಯವಾದಗಳು. ಚರ್ಚೆಗೆ ಮತ್ತೊಂದು ಆಯಾಮವನ್ನು ಕಲ್ಪಿಸಿದ್ದೀರಿ. ರಾಮಚಂದ್ರನ್