ಚಂದ್ರಕಾಂತ ವಡ್ಡು
1988ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಳ್ಳಾರಿಯಲ್ಲಿ ಸಣ್ಣಕತೆ ಕುರಿತ ಕಮ್ಮಟ ಹಮ್ಮಿಕೊಂಡಿತ್ತು. ಮಾತೃ ಹೃದಯದ ಬೆಸಗರಹಳ್ಳಿ ರಾಮಣ್ಣ ಹಾಗೂ ಕೆ.ವಿ.ನಾರಾಯಣ್ ಅವರು ಕಮ್ಮಟದ ನಿರ್ದೇಶಕರಾಗಿದ್ದರು.
ಅಗ ಬಳ್ಳಾರಿಯಲ್ಲೇ ಇದ್ದ ನಾನು ಕಮ್ಮಟದಲ್ಲಿ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ. ಕಮ್ಮಟದ ಅಂತಿಮ ಘಟ್ಟದಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಫಲಿತಾಂಶ ಹೊರಬಿದ್ದು ನನಗೊಂದು ಬಹುಮಾನ ಪ್ರಕಟವಾಯ್ತು. ಆಗ ಬೆಸಗರಹಳ್ಳಿಯವರಿಗೆ ಆದ ಹೆಮ್ಮೆ ಅಷ್ಟಿಷ್ಟಲ್ಲ! ನಾನೋ ಸಂಕೋಚದಿಂದ ಮುದುಡಿಹೋಗಿದ್ದೆ. ಅವರಿಗೆ ಬೆನ್ನು ತಟ್ಟುವ ತವಕ, ನನಗೆ ತಪ್ಪಿಸಿಕೊಳ್ಳುವ ತುಡಿತ. ಸಾಧ್ಯವಾದಷ್ಟು ಅವರ ಕೈಗೆ ಸಿಗದೇ ತಿರುಗಿದೆ.
ಕೊನೆಯ ದಿನ ನಡೆದ ಸಮಾರೋಪ ಸಭೆಯಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ. ನಿರೂಪಕರು ನನ್ನ ಹೆಸರು ಕೂಗಿದರು. ಜಾಗೃತರಾದ ಬೆಸಗರಹಳ್ಳಿಯವರು ಈಗ ಇವನನ್ನು ಹಿಡಿದೇಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿ ಕಾಯತೊಡಗಿದರು.
ಪ್ರಮಾಣಪತ್ರ ಪಡೆದ ತಕ್ಷಣ ಬಳಿಗೆ ಕರೆದು ಅಭಿನಂದಿಸಿದರು. ಆದರೆ ವೇದಿಕೆ ಮೇಲೆ ಅವರ ಕೈಗೆ ಸಿಕ್ಕಿದ್ದು ನಾನಲ್ಲ; ನನ್ನ ಪರವಾಗಿ ಪ್ರಮಾಣಪತ್ರ ಪಡೆಯಲು ನಾನು ಬೇರೊಬ್ಬರನ್ನು ನಿಯೋಜಿಸಿದ್ದೆ!
ಅದಾದ ನಂತರ ಅವರನ್ನು ನೋಡುವ ಅವಕಾಶ ಸಿಗಲೇಯಿಲ್ಲ. ಅಂದು ಆ ಹಿರಿಯ ಜೀವಿಯ ಸಾಮೀಪ್ಯದಿಂದ ನನ್ನನ್ನು ವಿನಾಕಾರಣ ವಂಚಿಸಿದ ನನ್ನ ಮುಜುಗರ ಸ್ವಭಾವವನ್ನು ನಾನು ಇಂದಿಗೂ ಹಳಿಯುತ್ತೇನೆ. ಪಾಪಪ್ರಜ್ಞೆಯಿಂದ ನರಳುತ್ತೇನೆ.
ಒಂದು ನೆಮ್ಮದಿ ಮತ್ತು ಹೆಮ್ಮೆಯ ಸಂಗತಿ ಎಂದರೆ ನನ್ನ ಮಗಳು ನೀಹಾರಿಕಾ ಬೆಸಗರಹಳ್ಳಿ ಪಕ್ಕದ ಗೂಳೂರಿನ ಮಗನಂತಹ ಅಳಿಯ ಶ್ರೇಯಸ್ ನನ್ನು ಮೆಚ್ಚಿ ಮದುವೆಯಾಗುವ ಮೂಲಕ ವಡ್ಡು ಮತ್ತು ಬೆಸಗರಹಳ್ಳಿ ಬೆಸೆದಿದ್ದಾಳೆ!
ಅಂತೆಯೇ ಮೊನ್ನೆ ಭಾನುವಾರ ಬೆಳಗ್ಗೆ ಜನಪದ ಲೋಕದಲ್ಲಿ ಕಾಳೇಗೌಡ ನಾಗವಾರ ದಂಪತಿಯ ಸರಳ ಮದುವೆಯ 50ನೇ ವಾರ್ಷಿಕೋತ್ಸವ, ಮಧ್ಯಾಹ್ನ ಗೂಳೂರಿನಲ್ಲಿ ಬೀಗರ ಔತಣ, ಸಂಜೆ ಮಂಡ್ಯದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ ಸಮಾರಂಭ. ನನ್ನೊಳಗೆ ಸಡಗರ ತುಂಬಿದ ಸಂತೃಪ್ತ, ಸಾರ್ಥಕ ಭಾವ.
ನಿಮ್ಮ ಬದುಕಿನಲ್ಲಿ ಸದಾ ಸಂತಸ ಸಂಭ್ರಮ ಸಡಗರ ತುಂಬಿ ತುಳುಕುತ್ತಿರಲಿ.