ಕು ಸ ಮಧುಸೂದನ ರಂಗೇನಹಳ್ಲಿ
ಲೋಕವೇನು ನಾಕವಲ್ಲ
ಪಾಪವೇ ಮಾಡದಷ್ಟು ಪವಿತ್ರಾತ್ಮನೇನಲ್ಲ
ಹುಲು ಮಾನವನು
ಊರ ತುಂಬಾ ಕದಡಿ ಕೊಚ್ಚೆಯಾದ
ಮೈಮನಸುಗಳ ಜೊತೆಯೇ ಮಿಂದೆದ್ದು
ಗಂಗಾಸ್ನಾನವ ಕನಸಿದ್ದೇನು ಕಡಿಮೆ ತಪ್ಪೇ!
ಒಡೆದ ಚೂರುಚೂರುಗಳಾದ ಕನ್ನಡಿಯೊಳಗೆ
ಇಣುಕಿ ಕಂಡದ್ದೇ ಸತ್ಯವೆಂದು ನಂಬಿ
ತನ್ನ ಪ್ರತಿಮೆಯ ತಾನೇ
ಕಡೆದು ನಿಲ್ಲಿಸಿಕೊಂಡಿದ್ದೇನು ಕಡಿಮೆ ತಪ್ಪೇ!
ಯಾರದೋ ಬಸುರಿಗೆ
ಇನ್ಯಾರದೊ ಹೆಸರು ಸೇರಿಸಿ
ಕೊನೆಗೂ ಗಟ್ಟಿ ಪಿಂಡದ ಪಿತಾಮಹನ್ಯಾರೆಂದು
ಪತ್ತೆಯಾಗದಂತೆ ಜಗವ ಮರುಳು ಮಾಡಿ
ನಿತ್ಯ ಪುರಾಣದೊಳಗಿನಷ್ಟೂ ಮಿಥ್ಯಗಳ ಸತ್ಯವೆಂದು ಸಾರುತ್ತ
ವರ್ತಮಾನದ ಸಂತೆಯೊಳಗೆ
ಬೆತ್ತಲಾಗಿಸಿಕೊಂಡು ತನ್ನನ್ನು ತಾನೇ
ಮಾರಿಕೊಳ್ಳಲು ಬೆಲೆ ಪಟ್ಟಿ ನಿಗದಿ ಮಾಡಿ
ಹರಾಜು ಕೂಗುವ ಹರಾಮಿ ಸಂತತಿಯ ಜನಕರನ್ನೇ
ಪುರಪಿತೃಗಳೆಂದು ಘೋಷಿಸಿ
ಗುಂಡಿ ತೋಡಿ
ಕಣಗಿಲೆಹಾರಗಳನ್ನು ನಾವೇ ಕಟ್ಟಿ
ಕೊರಳಿಗೆ ಹಾಕಿ ನಿಂತ ನಮಗಿಂತ ಪಾಪಾತ್ಮರು
ಯಾರಿಹರು ಇಲ್ಲಿ
ಹೇಳೀಗ ಪ್ರಭುವೆ!
ನಾವಂದುಕೊಂಡ ಹಾಗೆ ಜಗವೇನು ನಾಕವೊ
ನರಕವೊ.
0 ಪ್ರತಿಕ್ರಿಯೆಗಳು